ETV Bharat / bharat

ಗುಜರಾತ್​ನಲ್ಲಿ ಸಿಡಿದೆದ್ದ ರಜಪೂತರು: ಈ ಬಾರಿ ಬಿಜೆಪಿಗೆ ಪಾಠ ಕಳಿಸುತ್ತಾರೆ ಎಂದ ಕಾಂಗ್ರೆಸ್​, ನಾಳೆ ರಾಹುಲ್​ ರಾಜ್ಯ ಪ್ರವಾಸ - Gujarat politics

author img

By ETV Bharat Karnataka Team

Published : Apr 28, 2024, 6:04 PM IST

Etv Bharat
Etv Bharat

ಕೇಂದ್ರ ಸಚಿವ, ಬಿಜೆಪಿಯ ರಾಜ್‌ಕೋಟ್ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ವಿವಾದಾತ್ಮಕ ಹೇಳಿಕೆಯಿಂದ ಗುಜರಾತ್​ನಲ್ಲಿ ಬಿಜೆಪಿ ವಿರುದ್ಧ ರಜಪೂತ ಸಮುದಾಯ ಆಕ್ರೋಶಗೊಂಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ರಜಪೂತರು ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್​ ಹೇಳಿದೆ.

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಳೆ (ಏಪ್ರಿಲ್ 29) ಗುಜರಾತ್‌ ಮತ್ತು ಛತ್ತೀಸ್‌ಗಢ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್​ ಪಟಾನ್ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಏಪ್ರಿಲ್ 29ರಂದು ಪಟಾನ್‌ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿ ಸಿನ್ಹಾ ಗೋಹಿಲ್ 'ಈಟಿವಿ ಭಾರತ್‌'ಗೆ ತಿಳಿಸಿದರು. ಪಟಾನ್‌ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಭರತ್‌ಸಿಂಗ್‌ಜಿ ದಾಭಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದನ್‌ಜಿ ಠಾಕೂರ್ ಕಣಕ್ಕಿಳಿದಿದ್ದಾರೆ.

ಬಿಜೆಪಿ ವಿರುದ್ಧ ಸಿಡಿದೆದ್ದ ರಜಪೂತರು: 2019ರ ಚುನಾವಣೆಯಲ್ಲಿ ಗುಜರಾತ್‌ನ ಎಲ್ಲ 26 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಖಾತೆ ತೆರೆಯುವಲ್ಲಿ ಕಾಂಗ್ರೆಸ್​ ವಿಫಲವಾಗಿತ್ತು. ಈ ಬಾರಿ ಕೇಂದ್ರ ಸಚಿವ, ಬಿಜೆಪಿಯ ರಾಜ್‌ಕೋಟ್ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ವಿರುದ್ಧ ರಜಪೂತ ಸಮುದಾಯ ಸಾಕಷ್ಟು ಆಕ್ರೋಶಗೊಂಡಿದೆ. ಕಳೆದ ಕೆಲ ವಾರಗಳಿಂದ ರಾಜ್ಯಾದ್ಯಂತ ಸಮುದಾಯದ ಪ್ರತಿಭಟನೆಗಳು ನಡೆಯುತ್ತಿವೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯೂ ದಟ್ಟವಾಗಿದೆ. ಇದರ ಹೊತ್ತಲ್ಲೇ ರಾಹುಲ್​ ಗಾಂಧಿ ಗುಜರಾತ್​ನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಇದರ ಲಾಭ ಗಳಿಸುವ ವಿಶ್ವಾಸ ಸಹ ಕಾಂಗ್ರೆಸ್​ನಲ್ಲಿ ಮೂಡಿದೆ.

ರಜಪೂತರು ಜನಸಂಖ್ಯೆಯ ಕೇವಲ ಶೇ.4-5ರಷ್ಟು ಇರಬಹುದು. ಆದರೆ, ಪ್ರಭಾವಿ ಎಂದು ಪರಿಗಣಿಸಲಾಗಿದೆ. ಸದ್ಯ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ಬಿಜೆಪಿ ವಿರುದ್ಧವಾಗಿ ನಿಂತಿದ್ದಾರೆ. ಪರಶೋತ್ತಮ್ ರೂಪಾಲಾ ಪದೇ ಪದೇ ಕ್ಷಮೆಯಾಚಿಸುತ್ತಿದ್ದರೂ, ಸಮುದಾಯದ ಸಿಟ್ಟು ಮಾತ್ರ ಕಡಿಮೆ ಆಗುತ್ತಿಲ್ಲ. ರಾಜ್ಯ ಸರ್ಕಾರವು ಆರಂಭದಲ್ಲಿ ರಜಪೂತ ಸಮುದಾಯ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗಳ ಮೇಲೆ ನಿರ್ಬಂಧ ಹೇರಿತ್ತು. ಆಗ ಸಮುದಾಯದ ಸದಸ್ಯರು ತಮ್ಮ ತೋಳುಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಲು ಯೋಜಿಸಿದ್ದರು. ನಂತರ ಕೇಸರಿ ಪಟ್ಟಿಗಳನ್ನು ಧರಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಜಗದೀಶ್ ಠಾಕೂರ್ ಹೇಳಿದರು.

ರಾಜ್‌ಕೋಟ್‌ನಲ್ಲಿ ಹಲವಾರು ರಜಪೂತ ಸಂಘಟನೆಗಳು ಕಾಂಗ್ರೆಸ್ ಅಭ್ಯರ್ಥಿ ಪರೇಶ್ ಧನಾನಿ ಅವರನ್ನು ಕುದುರೆ ಸವಾರಿ ಮೂಲಕ ಸ್ವಾಗತಿಸಿದರೆ, ಇತರ ಹಲವಾರು ಕ್ಷೇತ್ರಗಳಲ್ಲಿ ಸಮುದಾಯದ ಕಾರ್ಯಕರ್ತರು ಕೇಸರಿ ಪಕ್ಷದ ವಿರುದ್ಧ ಮತ ಚಲಾಯಿಸಲು ಪ್ರತಿಜ್ಞೆಯನ್ನೂ ಮಾಡಿದ್ದಾರೆ. ರಾಜ್ಯ ಘಟಕದ ಉಸ್ತುವಾರಿ ಗೋಹಿಲ್ ಮಾತನಾಡಿ, ರಜಪೂತರು ಮಾತ್ರವಲ್ಲ, ಹಲವಾರು ಇತರ ಸಮುದಾಯಗಳು ಸಹ ಬಿಜೆಪಿ ವಿರುದ್ಧ ಕೋಪಗೊಂಡಿವೆ. ಈ ಬಾರಿ ಆಡಳಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿವೆ ಎಂದರು.

ಛತ್ತೀಸ್‌ಗಢದಲ್ಲೂ ಕಾಂಗ್ರೆಸ್​ಗೆ ಹೆಚ್ಚಿನ ಸ್ಥಾನದ​ ವಿಶ್ವಾಸ: ಛತ್ತೀಸ್‌ಗಢದಲ್ಲಿ 2019ರ ಚುನಾವಣೆಯಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ 9 ಕ್ಷೇತ್ರಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 2 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿಯನ್ನು ಎದುರಿಸಲು ಮತ್ತು ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಎಐಸಿಸಿ ಉಸ್ತುವಾರಿ ಸಚಿನ್ ಪೈಲಟ್ ನೇತೃತ್ವದಲ್ಲಿ ಕಾಂಗ್ರೆಸ್​ ರಣತಂತ್ರ ರೂಪಿಸುತ್ತಿದೆ.

ನಾವು 2019ರ ಟ್ರೆಂಡ್​ಅನ್ನು ಬಾರಿ ರಿವರ್ಸ್ ಮಾಡಲಿದ್ದೇವೆ. ಮತದಾರರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಏಪ್ರಿಲ್ 29ರಂದು ಬಿಲಾಸ್‌ಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ನಮ್ಮ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಛತ್ತೀಸ್‌ಗಢ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ 'ಈಟಿವಿ ಭಾರತ್‌'ಗೆ ತಿಳಿಸಿದರು.

ಬಿಲಾಸ್‌ಪುರದಲ್ಲಿ ಬಿಜೆಪಿಯ ತೋಖಾನ್ ಸಾಹು ವಿರುದ್ಧ ಹಾಲಿ ಶಾಸಕ ದೇವೇಂದ್ರ ಯಾದವ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ, ಬಾರಿ ಕಾಂಗ್ರೆಸ್​ ತನ್ನ ಸಮಾಜ ಕಲ್ಯಾಣ ಕಾರ್ಯಸೂಚಿಯ ಆಧಾರದ ಮೇಲೆ ಈ ಬಾರಿ ಗಮನಾರ್ಹ ಲಾಭವನ್ನು ಗಳಿಸುವ ಭರವಸೆಯಲ್ಲಿದೆ.

ಉದ್ಯೋಗದ ಭರವಸೆ ಮತ್ತು ಅಗತ್ಯ ವಸ್ತು ಬೆಲೆಗಳ ನಿಯಂತ್ರಣ ಕುರಿತು ನಮ್ಮ ಭರವಸೆಗಳು ಜನರಲ್ಲಿ ವಿಶ್ವಾಸ ಮೂಡಿಸುತ್ತಿವೆ. ಅಲ್ಲದೇ, ಜನತೆ ಹಿಂದಿನ ಕಾಂಗ್ರೆಸ್ ಮತ್ತು ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವ್ಯತ್ಯಾಸವನ್ನು ಗಮನಿಸುತ್ತಿದ್ದಾರೆ. ಅಸ್ತಿತ್ವದಲ್ಲಿರುವ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನಗಳ ನಷ್ಟವನ್ನು ಜನತೆ ಅರಿತುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬದಲಾವಣೆಗೆ ಮತ ಹಾಕಲಿದ್ದಾರೆ ಎಂದು ಬೈಜ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 2ನೇ ಹಂತದ ಚುನಾವಣೆ ನಂತರ ಕಾಂಗ್ರೆಸ್​ನಲ್ಲಿ ಹುಮ್ಮಸ್ಸು; ಕೇರಳ ಸ್ವೀಪ್​, ಕರ್ನಾಟಕ, ರಾಜಸ್ಥಾನದಲ್ಲಿ ಹೆಚ್ಚಿನ ಸ್ಥಾನದ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.