ಕರ್ನಾಟಕ

karnataka

ಜುಲೈ 3 ರವರೆಗೆ ಜಾತಿ ಗಣತಿಗೆ ಮಧ್ಯಂತರ ತಡೆ: ಪಾಟ್ನಾ ಹೈಕೋರ್ಟ್ ಆದೇಶ ​

By

Published : May 4, 2023, 4:46 PM IST

ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ ವಿ ಚಂದ್ರನ್ ಜುಲೈ 3 ರವರೆಗೆ ಗಣತಿ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಹಾರದಾದ್ಯಂತ ನಡೆಯುತ್ತಿರುವ ಜಾತಿ ಗಣತಿಗೆ ಪಾಟ್ನಾ ಹೈಕೋರ್ಟ್ ಗುರುವಾರ ಜುಲೈ 3 ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಕೆ ವಿ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಅರ್ಜಿದಾರರ ಪ್ರಕಾರ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಪ್ರಾರಂಭಿಸಿದ ಜಾತಿ ಆಧಾರಿತ ಜನಗಣತಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಅರ್ಜಿದಾರರ ಪರ ವಕೀಲ ದಿನು ಕುಮಾರ್ ಅವರು ಪೀಠದ ಮುಂದೆ ಹಾಜರಾಗಿ, ಜಾತಿ ಗಣತಿ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿಯಿಂದ ಹೊರಗಿರುವಾಗ ಸರ್ಕಾರವು ಜಾತಿ ಗಣತಿ ನಡೆಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕಾನೂನು ಪ್ರಕಾರ ಕೇಂದ್ರ ಸರ್ಕಾರ ಮಾತ್ರ ಇಂತಹ ಸಮೀಕ್ಷೆ ನಡೆಸಬಹುದು ಎಂದು ಅರ್ಜಿದಾರರು ಹೇಳಿದ್ದಾರೆ. ಬಿಹಾರದಲ್ಲಿ ಜಾತಿವಾರು ಸಮೀಕ್ಷೆಗೆ ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪಿಕೆ ಶಾಹಿ, ಅಗತ್ಯವಿರುವ ಜನರಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಸಮೀಕ್ಷೆ ಅಗತ್ಯ ಎಂದು ಹೇಳಿದರು. ಗಣತಿ ನಡೆಸುವ ಕುರಿತು ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಜಾತಿ ಆಧಾರಿತ ಸಮೀಕ್ಷೆ ಸ್ವಯಂ ಪ್ರೇರಿತವಾಗಿದೆ ಮತ್ತು ಜನಗಣತಿಯಂತೆ ಕಡ್ಡಾಯವಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಜಾತಿ ಆಧಾರಿತ ಸಮೀಕ್ಷೆಯ ಭಾಗವಾಗಿ 17 ಸಾಮಾಜಿಕ ಆರ್ಥಿಕ ಸೂಚಕಗಳು ಮತ್ತು ಜಾತಿ ಸ್ಥಾನಮಾನವು ಕೇಂದ್ರದ ಏಕೈಕ ವಿಶೇಷವಾದ ಜನಗಣತಿಯಂತೆಯೇ ಉತ್ತಮವಾಗಿದೆ ಎಂದು ಅರ್ಜಿದಾರರು ಒತ್ತಾಯಿಸಿದರು. ಅರ್ಜಿದಾರರ ಪರವಾಗಿ ದಿನು ಕುಮಾರ್ ಮತ್ತು ರಿತು ರಾಜ್ ಮತ್ತು ರಾಜ್ಯ ಸರ್ಕಾರದ ಪರವಾಗಿ ಅಭಿನವ್ ಶ್ರೀವಾಸ್ತವ ಮತ್ತು ಶಾಹಿ ಅವರು ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿದರು.

ಈ ವರ್ಷ ಜನವರಿ 7 ರಂದು ಬಿಹಾರ ಸರ್ಕಾರವು ಬಿಹಾರದ 29 ಮಿಲಿಯನ್ ಕುಟುಂಬಗಳಲ್ಲಿ 127 ಮಿಲಿಯನ್ ಪ್ರತಿಸ್ಪಂದಕರಿಂದ ಭೌತಿಕವಾಗಿ ಮತ್ತು ಡಿಜಿಟಲ್ ಆಗಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವ ಸಂಗ್ರಹ ಮಾಡುತ್ತಿದೆ.

ಬಿಹಾರದಲ್ಲಿ ಜಾತಿ ಗಣತಿಗೆ ಬೇಡಿಕೆ ಇತ್ತು: ಬಿಹಾರದಲ್ಲಿ ಎರಡನೇ ಹಂತದ ಜಾತಿ ಆಧಾರಿತ ಜನಗಣತಿ ಪ್ರಾರಂಭವಾಗಿದೆ. ಆದರೆ ಅದಕ್ಕೆ ವಿರೋಧವೂ ಮುಂದುವರೆದಿದೆ. ಒಂದೆಡೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ಲಾಭದ ಲೆಕ್ಕಾಚಾರದಲ್ಲಿದೆ. ಕಳೆದ ವರ್ಷ ಬಿಹಾರದ ರಾಜಕೀಯ ಪಕ್ಷಗಳ ನಿಯೋಗವು ಜಾತಿ ಗಣತಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಜಾತಿಗಣತಿಗೆ ನಿರಾಕರಿಸಿತ್ತು. ನಂತರ ಇದೀಗ ಬಿಹಾರ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ ಜಾತಿ ಗಣತಿ ನಡೆಸುತ್ತಿದೆ.

ಇದನ್ನೂ ಓದಿ:ಜಾತಿ ಜನಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್‌.. ನಾಳೆ ಮಧ್ಯಂತರ ಆದೇಶ

ABOUT THE AUTHOR

...view details