ಕರ್ನಾಟಕ

karnataka

ಬಜೆಟ್​ಗೆ ಒಪ್ಪಿಗೆ ನೀಡದ ರಾಜ್ಯಪಾಲರು: ಹೈಕೋರ್ಟ್ ಮೆಟ್ಟಿಲೇರಿದ ತೆಲಂಗಾಣ ಸರ್ಕಾರ

By

Published : Jan 30, 2023, 2:29 PM IST

ಬಜೆಟ್​ ಮಂಡನೆಗೆ ಅನುಮತಿ ನೀಡದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ತೆಲಂಗಾಣ ಸರ್ಕಾರ ಹೈಕೋರ್ಟ್ ಮೊರೆ ಹೋಗಿದೆ. ಫೆ.3 ರಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್ ಮಂಡನೆಗೆ ಈವರೆಗೂ ರಾಜ್ಯಪಾಲರ ಅನುಮೋದನೆ ದೊರಕದ ಕಾರಣ ಸರ್ಕಾರ ಇಕ್ಕಟ್ಟಿನ ಸ್ಥಿತಿಯಲ್ಲಿದೆ.

Telangana government approached the High Court seeking the governor's approval for the budget
Telangana government approached the High Court seeking the governor's approval for the budget

ಹೈದರಾಬಾದ್: ತೆಲಂಗಾಣ ರಾಜ್ಯಪಾಲರು ಬಜೆಟ್ ಮಂಡನೆಗೆ ಈವರೆಗೂ ಅನುಮತಿ ನೀಡದ ಕಾರಣ ಮುಂದಿನ ಕ್ರಮದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತೆಲಂಗಾಣ ವಿಧಾನಸಭೆಯ ಬಜೆಟ್ ಅಧಿವೇಶನ ಇದೇ ಶುಕ್ರವಾರ (ಫೆ.3) ಆರಂಭವಾಗಲಿದೆ. ಮೊದಲ ದಿನವೇ ಉಭಯ ಸದನಗಳಲ್ಲಿ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ. ಬಜೆಟ್ ಮಂಡನೆಯ ದಿನಾಂಕ ಹತ್ತಿರ ಬಂದಿದ್ದರೂ ಅದಕ್ಕಾಗಿ ಈವರೆಗೂ ರಾಜ್ಯಪಾಲರಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿದೆ. ಬಜೆಟ್ ಮಂಡನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.

ತಾನು ರಾಜ್ಯಪಾಲರಿಗೆ ನೋಟಿಸ್​ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅಟಾರ್ನಿ ಜನರಲ್ ಅವರಿಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ. ರಾಜ್ಯಪಾಲರ ಕರ್ತವ್ಯಗಳ ಬಗ್ಗೆ ನ್ಯಾಯಾಲಯಗಳು ನ್ಯಾಯಾಂಗ ಪರಿಶೀಲನೆ ಮಾಡಬಹುದೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ನ್ಯಾಯಾಲಯಗಳು ತಮ್ಮ ಕಾರ್ಯವ್ಯಾಪ್ತಿ ಮೀರುತ್ತಿವೆ ಎಂದು ನಂತರ ನೀವು ಹೇಳಬಹುದು ಎಂದು ಹೈಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಕೀಲ ದುಷ್ಯಂತ್ ದವೆ ವಾದ ಆಲಿಸಲಿದ್ದಾರೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ.

ರೈತಪರವಾದ ಬಜೆಟ್ ಮಂಡಿಸುವಂತೆ ಕೇಂದ್ರಕ್ಕೆ ಆಗ್ರಹ: ತೆಲಂಗಾಣಕ್ಕೆ ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುವುದರ ಜೊತೆಗೆ ಫೆಬ್ರವರಿ 1 ರಂದು ಕಾರ್ಪೊರೇಟ್ ಸ್ನೇಹಿ ಅಲ್ಲದ, ಬಡವರ ಮತ್ತು ರೈತರ ಪರವಾದ ಬಜೆಟ್ ಮಂಡಿಸಬೇಕೆಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಒತ್ತಾಯಿಸಿದೆ. ತೆಲಂಗಾಣ ಸರ್ಕಾರದ ಕ್ರಮಗಳ ಮಾದರಿಯಲ್ಲಿಯೇ ಬಿಜೆಪಿ ಸರ್ಕಾರವು ಪಿಎಂ ಕಿಸಾನ್ ಕಾರ್ಯಕ್ರಮಕ್ಕೆ ಸಾಕಷ್ಟು ಹಣವನ್ನು ವಿನಿಯೋಗಿಸಬೇಕು ಮತ್ತು ಪ್ರತಿ ಎಕರೆಗೆ ರೈತರಿಗೆ ಪ್ರತಿ ಬೆಳೆಗೆ ರೂ.5000 ಆರ್ಥಿಕ ನೆರವು ನೀಡಬೇಕು. ರೈತ ಸಮುದಾಯಕ್ಕೂ ಉಚಿತ ವಿದ್ಯುತ್ ನೀಡಬೇಕು ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ನಿಜಾಮಾಬಾದ್​ನಲ್ಲಿ ಆಗ್ರಹಿಸಿದರು.

ಇದು ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸುತ್ತಿರುವ ಕೊನೆಯ ಬಜೆಟ್ ಆಗಿರುವುದರಿಂದ ತೆಲಂಗಾಣ ಸರ್ಕಾರದ ಎಲ್ಲಾ ಮನವಿಗಳನ್ನು ಪರಿಗಣಿಸಿ ತೆಲಂಗಾಣದ ಬಗ್ಗೆ ತಮ್ಮ ಬದ್ಧತೆಯನ್ನು ಸಾಬೀತುಪಡಿಸಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದು ರಾಮರಾವ್ ಶನಿವಾರ ನಿಜಾಮಾಬಾದ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತೆಲಂಗಾಣ ಸರ್ಕಾರವು ನೀರಾವರಿ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಮನವಿ ಮಾಡುತ್ತಿದೆ, ಆದರೆ ಅದನ್ನು ಪರಿಗಣಿಸಲಾಗಿಲ್ಲ. ರಾಜ್ಯಕ್ಕೆ ಒಂದೇ ಒಂದು ಶಿಕ್ಷಣ ಸಂಸ್ಥೆಯನ್ನು ಮಂಜೂರು ಮಾಡಿಲ್ಲ ಮತ್ತು ನಿಜಾಮಾಬಾದ್‌ಗೆ ಅರಿಶಿನ ಮಂಡಳಿಯನ್ನು ನಿರಾಕರಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ತನ್ನ ಬೇಡಿಕೆಗಳನ್ನು ಕೇಂದ್ರಕ್ಕೆ ವಿವರವಾಗಿ ಸಲ್ಲಿಸಿದೆ ಎಂದು ರಾಮರಾವ್ ತಿಳಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿನ ಬಿಜೆಪಿ ನಾಯಕರು ತೆಲಂಗಾಣ ಸಾಲದ ಸುಳಿಗೆ ಸಿಲುಕಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಮೊದಲು 14 ಪ್ರಧಾನಿಗಳು ಕಳೆದ 67 ವರ್ಷಗಳಲ್ಲಿ 56 ಸಾವಿರ ಕೋಟಿ ರೂ.ಗಳ ಸಾಲವನ್ನು ಪಡೆದಿದ್ದಾರೆ ಮತ್ತು ನರೇಂದ್ರ ಮೋದಿ ಅವರು ಕೇವಲ ಎಂಟು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ.ಗಳ ಸಾಲ ಮಾಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್​ಗೆ ಆಹ್ವಾನ ನೀಡಿದ ತೆಲಂಗಾಣ ಸಿಎಂ ಕೆಸಿಆರ್

ABOUT THE AUTHOR

...view details