ಕರ್ನಾಟಕ

karnataka

ನಾಳಿನ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ದೆಹಲಿ ಸಿಎಂ: ಖರ್ಗೆ, ರಾಹುಲ್ ಭೇಟಿಗೆ​ ಸಮಯ ಕೇಳಿದ ಕೇಜ್ರಿವಾಲ್

By

Published : May 26, 2023, 5:39 PM IST

Updated : May 26, 2023, 7:39 PM IST

ನಾಳೆ ನಡೆಯಲಿರುವ ನೀತಿ ಆಯೋಗದ ಸಭೆಗೆ ಭಾಗವಹಿಸಲು ಆಗುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಹ ಈ ಸಭೆಯಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ.

cm-arvind-kejriwal-will-boycott-meeting-of-niti-aayog-wrote-letter-to-pm
ಖರ್ಗೆ, ರಾಹುಲ್ ಭೇಟಿಗೆ​ ಸಮಯ ಕೇಳಿದ ಕೇಜ್ರಿವಾಲ್

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಕುರಿತ ಸುಗ್ರೀವಾಜ್ಞೆ ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮರಕ್ಕಿಳಿದಿದ್ದಾರೆ. ಇದರ ನಡುವೆ ನಾಳೆ (ಮೇ 27) ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಕೇಜ್ರಿವಾಲ್ ಬಹಿಷ್ಕರಿಸಲಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ದೆಹಲಿ ಸಿಎಂ ಪತ್ರ ಬರೆದಿದ್ದಾರೆ. ಚುನಾಯಿತ ಸರ್ಕಾರವೇ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಪ್ರಧಾನಿ ಪಾಲಿಸದಿದ್ದರೆ ಜನರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಕೆಲಸ ಮಾಡಲು ಪ್ರಧಾನಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಜ್ರಿವಾಲ್ ಪತ್ರದಲ್ಲಿ ಏನಿದೆ?: ಪ್ರಧಾನಿಗಳೇ ನಾಳೆ ನೀತಿ ಆಯೋಗದ ಸಭೆ ಇದೆ. ನೀತಿ ಆಯೋಗದ ಉದ್ದೇಶವು ಭಾರತದ ದೃಷ್ಟಿಕೋನವನ್ನು ಸಿದ್ಧಪಡಿಸುವುದರೊಂದಿಗೆ ಸಹಕಾರಿ ಒಕ್ಕೂಟವನ್ನು ಉತ್ತೇಜಿಸುವುದು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲಾಗುತ್ತಿದೆ ಅಥವಾ ಒಡೆಯಲಾಗುತ್ತಿದೆ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲ. ಇದು ನಮ್ಮ ಭಾರತದ ದೃಷ್ಟಿಯಿಂದಲೂ ಅಥವಾ ಒಕ್ಕೂಟ ದೃಷ್ಟಿಯಿಂದಲೂ ಸರಿಯಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಕೇಂದ್ರದ ಸುಗ್ರೀವಾಜ್ಞೆಗೆ ಕೇಜ್ರಿವಾಲ್​ ವಿರೋಧ... ಮೋದಿ ವಿರುದ್ಧ ಹೋರಾಟಕ್ಕೆ ಮಮತಾ ಸಾಥ್​!

ಅಲ್ಲದೇ, ಯಾವುದೇ ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷದ ಸರ್ಕಾರವನ್ನು ಜನರು ರಚಿಸಿದರೆ, ಅದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ದೇಶದಾದ್ಯಂತ ನೀಡಲಾಗುತ್ತಿದೆ. ಇದರಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿಯೇತರ ಸರ್ಕಾರ ಬೀಳಿಸುವುದು. ಇಲ್ಲವೇ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಭಯ ತೋರಿಸಿ ಶಾಸಕರನ್ನು ಒಡೆದು ಸರ್ಕಾರ ಬೀಳಿಸುವುದು ಮಾಡಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಪಕ್ಷದ ಶಾಸಕರು ಮಾರಾಟವಾಗಿದ್ದರೆ ಮತ್ತು ಸರ್ಕಾರ ಒಡೆಯದಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಿ ಅಥವಾ ರಾಜ್ಯಪಾಲರ ಮೂಲಕ ಕೆಲಸ ಮಾಡಲು ಸರ್ಕಾರಕ್ಕೆ ಅವಕಾಶ ನೀಡದಂತೆ ಪರಿಸ್ಥಿತಿ ಎಂದು ದೂರಿದ್ದಾರೆ.

ಇದನ್ನೂ ಓದಿ:ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?

ಎಂಟು ವರ್ಷಗಳ ಹೋರಾಟದ ನಂತರ ದೆಹಲಿಯ ಜನರು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿ ಗೆದ್ದು ನ್ಯಾಯ ಪಡೆದರು. ಆದರೆ, ನೀವು ಕೇವಲ ಎಂಟು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಸುಪ್ರೀಂಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿದ್ದೀರಿ. ದೆಹಲಿ ಸರ್ಕಾರದ ಯಾವುದೇ ಅಧಿಕಾರಿ ಕೆಲಸ ಮಾಡಬಾರದು ಎಂಬ ಸಂದೇಶ ನೀಡಲಾಗುತ್ತಿದೆ. ಅಧಿಕಾರಿಗಳ ಮೇಲೆ ಹಿಡಿತ ಇರದಿದ್ದರೆ ಸರ್ಕಾರ ಈ ರೀತಿ ಕೆಲಸ ಮಾಡುವುದು ಹೇಗೆ?. ಈ ರೀತಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತಿರುವಾಗ ನೀತಿ ಆಯೋಗದ ಸಭೆಗೆ ಹಾಜರಾಗುವುದರಲ್ಲಿ ಅರ್ಥವಿಲ್ಲ ಎಂದು ಕೇಜ್ರಿವಾಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಮಮತಾ ಕೂಡ ದೂರ:ಮತ್ತೊಂದೆಡೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ನಾಳಿನ ನೀತಿ ಆಯೋಗದ ಸಭೆಯಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮಮತಾ ನೀತಿ ಆಯೋಗದ ಸಭೆಯಿಂದ ದೂರ ಉಳಿಯಲು ನಿರ್ಧರಿಸಿರುವುದು ಇದೇ ಮೊದಲಲ್ಲ. 2019ರಲ್ಲೂ ಸಭೆಗೆ ಹಾಜರಾಗಲು ನಿರಾಕರಿಸಿದ್ದರು. ಈ ಸಭೆಗಳಿಂದ ಯಾವುದೇ ಫಲವಿಲ್ಲ ಎಂದು ಅವರು ಆರೋಪಿಸಿದ್ದರು.

ಖರ್ಗೆ, ರಾಹುಲ್​ ಭೇಟಿಗೆ ಸಮಯ ಕೇಳಿದ ಕೇಜ್ರಿವಾಲ್:ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸುವ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭೇಟಿಗೆ ಕೇಜ್ರಿವಾಲ್ ಸಮಯ ಹೇಳಿದ್ದಾರೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪ್ರಜಾಸತ್ತಾತ್ಮಕವಲ್ಲದ ಅಸಂವಿಧಾನಿಕ ಸುಗ್ರೀವಾಜ್ಞೆಯ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಮತ್ತು ಒಕ್ಕೂಟ ರಚನೆ ಮತ್ತು ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯ ಮೇಲಿನ ದಾಳಿಯ ಬಗ್ಗೆ ಚರ್ಚಿಸಲು ಖರ್ಗೆಜಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಂದು ಬೆಳಗ್ಗೆ ಸಮಯ ಕೋರಿದೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ದೆಹಲಿಯ ಸುಗ್ರೀವಾಜ್ಞೆ ಅಂಗೀಕರಿಸಲು ಬಿಜೆಪಿ ವಿಫಲವಾದರೆ, ಅದೇ ದೇಶಕ್ಕೆ ಸಂದೇಶ: ಪವಾರ್ ಭೇಟಿ ಬಳಿಕ ಕೇಜ್ರಿವಾಲ್ ಹೇಳಿಕೆ

Last Updated :May 26, 2023, 7:39 PM IST

ABOUT THE AUTHOR

...view details