ಕರ್ನಾಟಕ

karnataka

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹನ ಜನ್ಮದಿನ: ಪ್ರಣಾಮ ಅರ್ಪಿಸಿದ ಸಿಎಂ ಬೊಮ್ಮಾಯಿ

By

Published : Aug 12, 2021, 12:51 PM IST

Vikram Sarabhai

ಇಂದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಕೊಡುಗೆಗಳಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ 102ನೇ ಜನ್ಮದಿನವಾಗಿದೆ.

ನವದೆಹಲಿ:ಇಂದು ಇಸ್ರೋ ಸ್ಥಾಪಕ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ಹಾಗೂ ದೇಶದಲ್ಲಿ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ವಿಕ್ರಮ್ ಸಾರಾಭಾಯಿ ಅವರ 102ನೇ ಜನ್ಮದಿನವಾಗಿದ್ದು, ಗಣ್ಯರು ಸ್ಮರಿಸಿದ್ದಾರೆ.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಿಕ್ರಮ್ ಸಾರಾಭಾಯಿ ಅವರು 1919ರ ಆಗಸ್ಟ್ 12 ರಂದು ಗುಜರಾತ್​ನ ಅಹಮದಾಬಾದ್​ನಲ್ಲಿ ಜನಿಸಿದರು. 1962ರಲ್ಲಿ ಇಸ್ರೋ ಸ್ಥಾಪನೆಗೆ ಹೊಣೆಯನ್ನು ಇವರಿಗೆ ನೀಡಲಾಗಿತ್ತು.

ರಾಷ್ಟ್ರದ ಯುವ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿರುವ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಉಪಗ್ರಹ ಆಧಾರಿತ ದೂರ ಸಂವೇದನೆಯ ಅಭಿವೃದ್ಧಿಗೆ ಕರೆ ನೀಡಿದ ಸಾರಾಭಾಯಿ ಅವರ ಜನ್ಮ ದಿನವನ್ನು ಭಾರತದಲ್ಲಿ 'ರಾಷ್ಟ್ರೀಯ ದೂರ ಸಂವೇದಿ ದಿನ'ವನ್ನಾಗಿ ಆಚರಿಸಲಾಗುತ್ತದೆ.

ಪ್ರಣಾಮ ಅರ್ಪಿಸಿದ ಸಿಎಂ ಬೊಮ್ಮಾಯಿ

ವಿಕ್ರಮ್ ಸಾರಾಭಾಯ್ ಅವರ ಜನ್ಮದಿನದಂದು ಶುಭಕೋರಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹರೆಂದೇ ಖ್ಯಾತರಾದ, ಇಸ್ರೋ ಸಂಸ್ಥೆಯ ಸಂಸ್ಥಾಪಕ, ಪದ್ಮವಿಭೂಷಣ ಡಾII ವಿಕ್ರಮ್ ಸಾರಾಭಾಯ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ಅವಿಸ್ಮರಣೀಯ" ಎಂದು ಟ್ವೀಟ್​ ಮಾಡಿದ್ದಾರೆ.

ವಿಕ್ರಮ್ ಸಾರಾಭಾಯಿ ಅವರ 102ನೇ ಜನ್ಮದಿನದ ಅಂಗವಾಗಿ ಇಸ್ರೋ, "eye in the sky" GISAT-1 ಹೆಸರಿನ ಭೂಮಿ ಪರಿವೀಕ್ಷಣಾ ಉಪಗ್ರಹವನ್ನು ಉಡಾಯಿಸಿದೆ. ಆದರೆ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಇದು ಯಶಸ್ವಿಯಾಗಲಿಲ್ಲ.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾರಾಭಾಯಿ ಅವರ ಕೊಡುಗೆಗಳಿಗೆ 1966ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಮತ್ತು 1972 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ (ಮರಣೋತ್ತರ) ನೀಡಿ ಗೌರವಿಸಿದೆ.

ABOUT THE AUTHOR

...view details