ETV Bharat / state

ಪ್ರಾಣಿ, ಪಕ್ಷಿ, ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ; ಯುವಕರ ಮಾನವೀಯ ಕಾರ್ಯ - Water Supply To Animals

author img

By ETV Bharat Karnataka Team

Published : Apr 7, 2024, 9:55 PM IST

ನೀರು ಪೂರೈಕೆ
ನೀರು ಪೂರೈಕೆ

ಬೀಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದೆ. ಗಂಗಾವತಿಯ ಕುಂಟೋಜಿ ಗ್ರಾಮದ ಅರಣ್ಯ ಇಲಾಖೆ ಕಾಯ್ದಿಟ್ಟ (ಡಗ್ಗಿ) ಪ್ರದೇಶದಲ್ಲಿ ಯುವಕರ ತಂಡವೊಂದು ಮೂಕಪ್ರಾಣಿಗಳ ಬಾಯರಿಕೆ ನೀಗಿಸುತ್ತಿದೆ.

ಗಂಗಾವತಿ: 40ರಿಂದ 42 ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುತ್ತಿರುವ ಈ ಬಿರು ಬೇಸಿಗೆಯಲ್ಲಿ ನಗರ, ಗ್ರಾಮೀಣ ಭಾಗದ ಜನ ಹನಿಹನಿ ನೀರಿಗೂ ತತ್ತರಿಸುತ್ತಿದ್ದಾರೆ. ಕುಡಿಯುವ ಬಳಕೆಯ ನೀರಿಗೆ ಇನ್ನಿಲ್ಲದ ಪರದಾಟ ಕಂಡುಬರುತ್ತಿದೆ. ಸರ್ಕಾರ ಜನರಿಗಷ್ಟೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರ ತಂಡವೊಂದು ಟ್ಯಾಂಕರ್ ಮೂಲಕ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿ ಮತ್ತು ಗಿಡ-ಮರಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

ಗಂಗಾವತಿಯ ಕಿಷ್ಕಿಂಧ ಯುವ ಚಾರಣ ಬಳಗ ಮತ್ತು ಶ್ರೀರಾಮನಗರದ ಕ್ಲೀನ್ ಆ್ಯಂಡ್ ಗ್ರೀನ್ ಫೋಸರ್ ತಂಡದ ಸದಸ್ಯರು ಸ್ವಯಂಪ್ರೇರಣೆಯಿಂದ ಕಾರಟಗಿ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ಅರಣ್ಯ ಇಲಾಖೆ ಕಾಯ್ದಿಟ್ಟ (ಡಗ್ಗಿ) ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ಸದಸ್ಯರು ನೂರಾರು ಮಣ್ಣಿನ ತಟ್ಟೆಗಳಲ್ಲಿ ನೀರು ತುಂಬಿಸಿ ಗಿಡಗಳಿಗೆ ಕಟ್ಟುವ ಮೂಲಕ ಕೀಟ, ಪಕ್ಷಿಗಳ ಬಾಯಾರಿಕೆ ನೀಗಿಸಲು ಮುಂದಾಗಿದ್ದಾರೆ. ಈ ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನವಿಲು, ನರಿ, ಕಾಡುಬೆಕ್ಕು, ಮುಂಗುಸಿ, ಹಾವು ಸೇರಿದಂತೆ ಸಾಕಷ್ಟು ಪ್ರಾಣಿ ಪ್ರಬೇಧಗಳಿವೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕ್ಲೀನ್ ಆ್ಯಂಡ್ ಗ್ರೀನ್ ಫೋಸರ್​ ತಂಡದ ಸಂಚಾಲಕ ಮೊಹಮ್ಮದ ರಫಿ ಮಾತನಾಡಿ, ಈ ಹಿಂದೆ ನೂರಾರು ಪ್ರಮಾಣದ ತೊಟ್ಟಿಗಳನ್ನು ನಿರ್ಮಾಣ ಮಾಡಿ ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರವಾಸಕ್ಕೆ ಬರುವವರು ಹಾಗೂ ಸಂಜೆ ಸಮಯದಲ್ಲಿ ಮದ್ಯಪಾನಕ್ಕೆಂದು ಬರುವ ಯುವಕರು ತೊಟ್ಟಿಗಳನ್ನು ಹಾಳು ಮಾಡಿ ವಿಕೃತಿ ಮೆರೆದಿದ್ದಾರೆ. ಇನ್ನು ಕೆಲವು ಕಳ್ಳತನವಾಗಿವೆ. ಹೀಗಾಗಿ ಪ್ರಾಣಿ-ಪಕ್ಷಗಳು ಸಂಕಷ್ಟದಲ್ಲಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮತ್ತೆ ತೊಟ್ಟಿ ಇಡುತ್ತಿದ್ದೇವೆ ಎಂದರು.

ಸಾವಿರಾರು ಸಸಿಗಳನ್ನು ನೆಡುವ ಮೂಲಕ ಹೆಸರು ಮಾಡಿರುವ ಚಿಕ್ಕರಾಂಪೂರದ ವಿದ್ಯಾರ್ಥಿನಿ ಡಿ. ಸಿಂಧು ಮಾತನಾಡಿ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ. ಮನೆಗೊಂದು ಮರ, ಊರಿಗೊಂದು ವನ, ಹೋಬಳಿಗೊಂದು ಕಾಡು ಈ ರೀತಿ ಪರಿಸರವನ್ನು ಸಂರಕ್ಷಿಸಿದ್ದಲ್ಲಿ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ದೊರೆಯುತ್ತದೆ. ಇಲ್ಲವಾದಲ್ಲಿ ಈಗಾಗಲೇ 42 ಡಿಗ್ರಿಗೆ ಹೋಗಿರುವ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಕಷ್ಟದ ದಿನಗಳನ್ನು ಎದುರಿಸುವ ಪರಿಸ್ಥಿತಿ ಬರಬಹುದು. ನಮ್ಮ ಸುತ್ತಲಿನ ಪರಿಸರ, ಪ್ರಾಣಿ, ಪ್ಷಕಿಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿನ ಅಭಾವ: ಲಾಲ್​ಬಾಗ್​, ಕಬ್ಬನ್​ ಪಾರ್ಕ್ ನಿರ್ವಹಣೆಯೇ ದೊಡ್ಡ ಸವಾಲು - Lack of water

ETV Bharat Logo

Copyright © 2024 Ushodaya Enterprises Pvt. Ltd., All Rights Reserved.