ETV Bharat / state

ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ, ಟ್ಯಾಂಕರ್​ಗೆ ಹೆಚ್ಚಿದ ಬೇಡಿಕೆ: ದುಪ್ಪಟ್ಟು ದರ ವಸೂಲಿಗೆ ಪಾಲಿಕೆ ಕಡಿವಾಣ

author img

By ETV Bharat Karnataka Team

Published : Feb 25, 2024, 2:34 PM IST

Etv Bharat
Etv Bharat

ಸಿಲಿಕಾನ್ ಸಿಟಿ ಬೆಂಗಳೂರಿನ ನೀರಿನ ಕೊರತೆ ಉಂಟಾಗಿದ್ದು, ಟ್ಯಾಂಕರ್​ಗಳಿಗೆ ಬೇಡಿಕೆ ಹೆಚ್ಚಿದೆ. ಟ್ಯಾಂಕರ್​ ನೀರು ಪೂರೈಕೆದಾರರಿಂದ ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ 58 ಕಡೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಪೈಕಿ ಮಹದೇವಪುರ 16, ಆರ್.ಆರ್.ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ 3 ಕಡೆಗಳಲ್ಲಿ ನೀರಿನ ಅಭಾವ ಹೆಚ್ಚಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 1,472 ಎಂ.ಎಲ್.ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ.

ಬತ್ತಿದ 1,214 ಕೊಳವೆ ಬಾವಿಗಳು: ನಗರದಲ್ಲಿ ಜಲಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನೀರಿನ ಅಭಾವದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಮಾರಾಟ ದಂಧೆಗೆ ಕೂಡ ಹೆಚ್ಚಿದ್ದು ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ನಗರದಲ್ಲಿ ನೀರಿನ ಸಮಸ್ಯೆ ಇರುವ ಕಡೆ 200 ರಿಂದ 300 ಟ್ಯಾಂಕರ್‌ ಬಳಸಿ ಉಚಿತವಾಗಿ ನೀರಿನ ಪೂರೈಕೆ ಮಾಡಲು ಬಿಬಿಎಂಪಿ, ಜಲ ಮಂಡಳಿ ನಿರ್ಧರಿಸಿದೆ. ಅದರಂತೆ, ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ.

''ಖಾಸಗಿ ವ್ಯಕ್ತಿಗಳಿಂದ ಪಡೆಯುವ 200 ಟ್ಯಾಂಕರ್‌ ಪೈಕಿ 100 ಟ್ಯಾಂಕರ್‌ಗಳನ್ನು 110 ಹಳ್ಳಿಗಳಿಗೆ, ಉಳಿದ 100 ಟ್ಯಾಂಕರ್‌ಗಳನ್ನು ಕೇಂದ್ರ ಭಾಗದ ವಲಯಗಳ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ನೀರು ಪೂರೈಕೆಗಾಗಿ ಬಳಕೆ ಮಾಡಲಾಗುವುದು. ಇದರ ಜೊತೆಗೆ ಜಲ ಮಂಡಳಿಯ 68 ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುವುದು'' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದರು.

ಅತ್ಯಧಿಕ ಹಣ ವಸೂಲಿ ಮಾಡದರೆ ಕಾನೂನು ಕ್ರಮ: ''ನಗರದಲ್ಲಿ ಸುಮಾರು 3 ಸಾವಿರ ಟ್ಯಾಂಕರ್‌ಗಳಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ, ಎಲ್ಲ ಟ್ಯಾಂಕರ್‌ಗಳನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗುವುದು. ಖಾಸಗಿ ಟ್ಯಾಂಕರ್‌ ದರ ನಿಗದಿಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಂದ ಅತ್ಯಧಿಕ ಪ್ರಮಾಣ ಹಣ ವಸೂಲಿ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗಲಿದೆ'' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.

ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ಮರು ಕೊರೆಯುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 'ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಗೂಗಲ್ ಪೇ ಮೂಲಕ ಹಣ ಪಡೆದ ಪೊಲೀಸರು': ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.