ETV Bharat / state

ಮಹದಾಯಿ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ

author img

By ETV Bharat Karnataka Team

Published : Feb 11, 2024, 7:28 PM IST

ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ
ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ

ಮಹದಾಯಿ ಮತ್ತು ಮೇಕೆದಾಟು ಯೋಜನೆಗಳ ಜಾರಿಗೆ ಒತ್ತಾಯಿಸಿ ಖಾಲಿ ಬಿಂದಿಗೆಗಳನ್ನು ಹಿಡಿದು ವಾಟಾಳ್ ನಾಗರಾಜ್ ಕನ್ನಡ ಪರ ಕಾರ್ಯಕರ್ತರೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಖಾಲಿ ಬಿಂದಿಗೆಗಳನ್ನು ಹಿಡಿದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕನ್ನಡ ಪರ ಕಾರ್ಯಕರ್ತರೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಭಾನುವಾರ ವಾಟಾಳ್‌ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಖಾಲಿ ಬಿಂದಿಗೆಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹದಾಯಿ ನೀರು ಯೋಜನೆ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಾಟಕವಾಡುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಗಳನ್ನು ಬಿಟ್ಟು ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ಬೀದಿಗಿಳಿಯಬೇಕು ಎಂದು ಒತ್ತಾಯಿಸಿದರು. ಲೋಕಸಭೆಗೆ ಮತ್ತು ರಾಜ್ಯಸಭೆಗೆ ಪ್ರಾಮಾಣಿಕ ಚಿಂತನೆ ಇರುವವರನ್ನು ಆಯ್ಕೆ ಮಾಡಬೇಕು. ಹಿಂದಿ ಭಾಷೆ ಹೇರಿಕೆಯಾಗದಂತೆ ನೋಡಿಕೊಳ್ಳಬೇಕು. ರಾಜ್ಯಸಭೆ ಆಯ್ಕೆಗೆ ಜಾತಿ, ಹಣ, ನೆಂಟಸ್ಥಿಕೆ ಮಾನದಂಡ ಆಗಬಾರದು. ನಾಡಿನ ಬಗ್ಗೆ ತೀವ್ರ ಚಿಂತನಾ ಶಕ್ತಿ ಇರುವವರನ್ನು ಪರಿಗಣಿಸಿ ಕರ್ನಾಟಕ ಹಿತ ಕಾಪಾಡುವ ನಾಯಕರನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಹೇಳಿದರು.

ಕರ್ನಾಟಕ ಬಂದ್​ಗೆ ಕರೆ: ಮೇಕೆದಾಟು ವಿಚಾರವಾಗಿ ಇದೇ 18 ರಂದು ಕರ್ನಾಟಕ್​ ಬಂದ್​ಗೆ ಕರೆ ನೀಡಲಾಗಿದೆ. ಈ ವೇಳೆ ತಮಿಳುನಾಡು - ಕರ್ನಾಟಕ ಗಡಿಯಲ್ಲಿ ತಮಿಳು ವಾಹನಗಳು ರಾಜ್ಯಕ್ಕೆ ಪ್ರವೇಶ ಮಾಡಲು ಬಿಡುವುದಿಲ್ಲ. ಹೀಗೆ ಆದಲ್ಲಿ ಕರ್ನಾಟಕದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೂ ಅನುವು ಮಾಡಿಕೊಡದಂತೆ ಹೋರಾಟ ಮಾಡುವುದಾಗಿ ವಾಟಾಳ್​ ಎಚ್ಚರಿಕೆ ರವಾನಿಸಿದರು.

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ: ಈ ತಿಂಗಳ ಕೊನೆಯ ವಾರದಲ್ಲಿ ಮಹದಾಯಿ ವಿಚಾರವಾಗಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಲಿದ್ದೇವೆ. ಉತ್ತರ ಕರ್ನಾಟಕದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್​ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದೆ. ಮಹದಾಯಿ ಮತ್ತು ಮೇಕೆದಾಟು ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಶ್ರೀರಾಮನ ವಿಷಯವನ್ನು ಹಿಡಿದರೆ ಅದಕ್ಕೆ ಕಾಂಗ್ರೆಸ್​ ಅವರು ವಿರೋಧ ಮಾಡುತ್ತ ಕುಳಿತರು. ಹಾಗಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಲಿ ಬಂದಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.