ETV Bharat / state

ತಮ್ಮ ಒಳ ಜಗಳ ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಕಾಂಗ್ರೆಸ್​ ಧರಣಿ ಹಮ್ಮಿಕೊಂಡಿದ್ದಾರೆ: ಪ್ರಹ್ಲಾದ್​ ಜೋಶಿ

author img

By ETV Bharat Karnataka Team

Published : Feb 3, 2024, 6:31 PM IST

Updated : Feb 3, 2024, 6:38 PM IST

union-minister-pralhada-joshi-reaction-on-congress-leaders
ಕಾಂಗ್ರೆಸ್​ ತಮ್ಮ ಒಳ ಜಗಳ ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಧರಣಿ ಹಮ್ಮಿಕೊಂಡಿದೆ: ಪ್ರಹ್ಲಾದ್​ ಜೋಶಿ

ಕಾಂಗ್ರೆಸ್​ ನಾಯಕರು ತಮ್ಮ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪ, ಒಳ ಜಗಳ ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ್​ ಜೋಶಿ ಟೀಕಿಸಿದ್ದಾರೆ.

ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: "ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ಯಾರು ಲೀಡರ್​ ಅನ್ನುವ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಗಾಗಿ ದೆಹಲಿಯಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ" ಎಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್​ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, "ಕಾಂಗ್ರೆಸ್​ ನಾಯಕರು ತಮ್ಮ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪ, ಒಳ ಜಗಳ ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಧರಣಿ ಹಮ್ಮಿಕೊಂಡಿದ್ದಾರೆ‌. ಇದರಲ್ಲಿ ರಾಜ್ಯದ ಹಿತ ಏನೂ ಇಲ್ಲ. ನಾವು ಹಲವು ಯೋಜನೆಗಳಿಗೆ ಕರ್ನಾಟಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಅನುದಾನ ಹೆಚ್ಚು ಕೊಟ್ಟಿರುವುದಕ್ಕೆ ಧರಣಿ ಮಾಡುತ್ತಿದ್ದೀರಾ ಸಿದ್ದರಾಮಯ್ಯ ಅವರೇ?" ಎಂದು ಪ್ರಶ್ನಿಸಿದರು.

ಐದು ವರ್ಷದಲ್ಲಿ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಚಿವ ಜೋಶಿ, "ಅದೇನು ದಾಖಲೆ ಇದೆಯೊ ಡಿಕೆ ಶಿವಕುಮಾರ್​ ತೋರಿಸಲಿ. ಆ ದಾಖಲೆಯಲ್ಲಿ ಏನಿದೆ ಅಂತ ಅವರಿಗೂ ಅರ್ಥ ಆಗಿಲ್ಲ, ಬೇರೆಯವರಿಗೂ ಅರ್ಥವಾಗಿಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರ ಶಾಸಕರೇ ಹೇಳುತ್ತಿದ್ದಾರೆ. ಅವರಿಗೆ ಆಡಳಿತ ನಡೆಸಲು ಆಗುತ್ತಿಲ್ಲ. ಹೀಗಾಗಿ ಜನರನ್ನು ಡೈವರ್ಟ್​ ಮಾಡುತ್ತಿದ್ದಾರೆ" ಎಂದರು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ಗ್ಯಾರಂಟಿ ಯೋಜನೆಗಳು ಬಂದ್​ ಆಗಲಿವೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, "ಜನರು ಬಹಳ ಜಾಣರಿದ್ದಾರೆ. ಅವರಿಗೆ ಸರಿಯಾಗಿ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ಮೊದಲು ಗ್ಯಾರಂಟಿಗಳನ್ನು ಸಪರ್ಕವಾಗಿ ಜಾರಿಗೆ ತನ್ನಿ, ನಂತರ ಅದನ್ನು ವಾಪಸ್ ಪಡೆಯುವ ವಿಚಾರ ಮಾಡಲಿ" ಎಂದರು.

ಅಡ್ವಾಣಿ ಅವರಿಗೆ ಭಾರತ ರತ್ನ‌ ಸಿಕ್ಕಿದ್ದು ನಮಗೆಲ್ಲ ಹೆಮ್ಮೆ: "ಎಲ್​​ ಕೆ ಅಡ್ವಾಣಿ ಅವರು ಅತ್ಯಂತ ಶುದ್ಧ ರಾಜಕಾರಣ ಮಾಡಿದ್ದಾರೆ. ಅಡ್ವಾಣಿ ನಮಗೆಲ್ಲ ಆದರ್ಶ. ದೇಶವನ್ನು ಅವರಷ್ಟು ಸುತ್ತಿದವರು ಯಾರೂ ಇಲ್ಲ. ರಾಮಮಂದಿರ ನಿರ್ಮಾಣಕ್ಕೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಭಾರತ ರತ್ನ ಕೊಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ" ಎಂದು ಹೇಳಿದರು.

union-minister-pralhada-joshi-reaction-on-congress-leaders
ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶೆಟ್ಟರ್​ ಗೈರು: ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘರ್ ವಾಪ್ಸಿ ನಂತರ ಜಿಲ್ಲಾ ಬಿಜೆಪಿ ಪಕ್ಷದಲ್ಲಿ ಹೊಸ ಸಂಚಲ ಶುರುವಾಗಿದೆ. ಶೆಟ್ಟರ್ ಪಕ್ಷಕ್ಕೆ ಬಂದಿರುವುದರಿಂದ ಬಣಗಳು ಸೃಷ್ಟಿಯಾಗಿವೆ ಎಂಬ ಆರೋಪವಿದೆ. ಅದಕ್ಕೆ ‌ಪುಷ್ಟಿ ನೀಡುವಂತೆ ಧಾರವಾಡ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದ ಶೆಟ್ಟರ್ ದೂರ ಉಳಿದಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗೆ ನೇತೃತ್ವದಲ್ಲಿ ಹೆಬಸೂರ ಭವನದಲ್ಲಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಆಗಮಿಸಿದ್ದಾರೆ. ಆದರೆ ನಗರದಲ್ಲಿದ್ದರು ಜಗದೀಶ್ ‌ಶೆಟ್ಟರ್ ಸಭೆಗೆ ಗೈರಾಗಿದ್ದಾರೆ.

ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆ - ಮಹೇಶ​ ಟೆಂಗಿನಕಾಯಿ: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ‌ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ಶಾಸಕ‌ ಮಹೇಶ​ ಟೆಂಗಿನಕಾಯಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವಿರೋಧ ಪಕ್ಷದವರಾಗಿ‌ ಸರ್ಕಾರದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದೇವೆ. ಪಕ್ಷದ‌ ನಿಯಮಾನುಸಾರವಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಇಂದು ಕಾರ್ಯಕಾರಿಣಿ‌ ಸಭೆ ನಡೆಸುತ್ತಿದ್ದೇವೆ. ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಕುರಿತು ಚರ್ಚೆ ನಡೆಸಲಿದ್ದೇವೆ. ಬಿಜೆಪಿಯಲ್ಲಿ‌‌ ಯಾವುದೇ ನಿರ್ಣಯ‌ ಆದರೂ ಅದನ್ನ ಒಗ್ಗೂಡಿಸಿಕೊಂಡು‌ ನಾವು‌ ಕೆಲಸ‌ಮಾಡುತ್ತೇವೆ ಎಂದರು.

ಅರವಿಂದ್ ಬೆಲ್ಲದ

ಕಾಂಗ್ರೆಸ್​ ನವರಿಗೆ ಅನುದಾನ ಕೊಡುವ ಯೋಗ್ಯತೆಯಿಲ್ಲ - ಅರವಿಂದ್ ಬೆಲ್ಲದ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲದೇ ಹೋದಲ್ಲಿ, ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸುವ ಪೀಠಿಕೆಯನ್ನು ಕಾಂಗ್ರೆಸ್ಸಿಗರು ಈಗಲೇ ಬರೆದು ಇಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ ಟೀಕಿಸಿದರು.

ಕಾಂಗ್ರೆಸ್​ನವರಿಗೆ ಒಂದು ಪೈಸೆ ಅನುದಾನ ಕೊಡುವ ಯೋಗ್ಯತೆಯಿಲ್ಲ, ನಾನು ಶಾಸಕನಾಗಿದ್ದು, ನಮಗೆ ಯಾಔಉದೇ ಅನುದಾನ ಬಿಡುಗಡೆ ಮಾಡಿಲ್ಲ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ್ದ ಹಣವನ್ನು ಈಗಿನ ಸರ್ಕಾರ ಕೊಡ್ತಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ, ಜನರನ್ನು ದಾರಿ ತಪ್ಪಿಸುವ ಕೆಲಸ‌ ಮಾಡುತ್ತಾರೆ ಎಂದು ಬೆಲ್ಲದ ಆರೋಪಿಸಿದರು.

ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕರು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ : ಡಿ ಕೆ ಸುರೇಶ್

Last Updated :Feb 3, 2024, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.