ETV Bharat / state

ಉಂಡ ಮನೆಗೆ ಕನ್ನ ಬಗೆದ ಇಬ್ಬರು ಆರೋಪಿಗಳ ಬಂಧನ: ಜ್ಯೂವೆಲ್ಲರಿ‌ ಶಾಪ್​ನಲ್ಲಿ ಕಳ್ಳತನ ಮಾಡುತ್ತಿದ್ದ ಚೋರರು ಅಂದರ್

author img

By ETV Bharat Karnataka Team

Published : Mar 12, 2024, 6:22 PM IST

JP Nagar Police Station
ಜೆ ಪಿ ನಗರ ಪೊಲೀಸ್ ಠಾಣೆ

ಕೆಲಸ ನೀಡಿದ ಮನೆಯಲ್ಲಿಯೇ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗಳು ಜೆಪಿ ನಗರದ ಪೊಲೀಸರ ಅತಿಥಿಗಳಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್

ಬೆಂಗಳೂರು : ರಾಜಧಾನಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜಾತ್ರೆಯಲ್ಲಿಯೂ ಕೈಚಳಕ ತೋರಿಸ್ತಾರೆ. ಚಿನ್ನದ ಅಂಗಡಿಯಲ್ಲಿ ಕರಾಮತ್ತು ಮಾಡ್ತಾರೆ. ಅಷ್ಟೇ ಅಲ್ಲ ವಯಸ್ಸಾದವರನ್ನ ನೋಡಿಕೊಳ್ಳಿ ಅಂತಾ ಮನೆ ಕೆಲಸದವರನ್ನ ಹಾಗೂ ನರ್ಸ್​ಗಳನ್ನ ನೇಮಕ ಮಾಡಿಕೊಂಡರೆ ಅವರೂ ಕಳ್ಳತನಕ್ಕೆ ಇಳಿದು ಬಿಟ್ಟಿದ್ದಾರೆ.

ವಯಸ್ಸಾದವರನ್ನ ಮನೆಯಲ್ಲಿ ಆರೈಕೆ‌ ಮಾಡುವ ಕೆಲಸ‌ ಮಾಡುತ್ತಿದ್ದ ಇಬ್ಬರು ಮಹಿಳಾ ಆರೋಪಿಗಳು ಕೆಲಸ ಮಾಡುತ್ತಿದ್ದ ನಿವಾಸದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಇದೀಗ ಜೆ ಪಿ ನಗರ ಪೊಲೀಸರ ಅತಿಥಿಯಾಗಿದ್ದಾರೆ. ಮಂಜುಳಾ ಹಾಗೂ ಮಹದೇವಮ್ಮ ಬಂಧಿತರು. ಮಂಜುಳಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೆ, ಮಹದೇವಮ್ಮ ಮನೆಗೆಲಸ ಮಾಡುತ್ತಿದ್ದರು. ಜೆ ಪಿ ನಗರದ ನಿವಾಸಿಯೊಬ್ಬರು ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳಲು ಈ ಇಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಎಷ್ಟು ದಿನ ಅಂತಾ ಹೀಗೆ ಕೆಲಸ ಮಾಡಿಕೊಂಡು ಇರುವುದು ಅಂದುಕೊಂಡು ದಿಢೀರ್ ಶ್ರೀಮಂತರಾಗುವ ದಾರಿ ಹುಡುಕಿದ್ದರು. ಆಗ ಹೊಳೆದಿದ್ದೇ ಕೆಲಸ ಕೊಟ್ಟ ಮನೆಯಲ್ಲೇ ಕಳ್ಳತನ ಮಾಡುವ ಉಪಾಯ.

ಹೌದು, ಯಾರೂ ಇಲ್ಲದ ಸಮಯ ನೋಡಿಕೊಂಡ ಇಬ್ಬರು ಮನೆಯ ಅಲ್ಮೇರಾದಲ್ಲಿದ್ದ 383 ಗ್ರಾಂ ಚಿನ್ನಾಭರಣ, 104 ಗ್ರಾಂ ತೂಕದ ಬೆಳ್ಳಿ ಸಾಮಾನುಗಳನ್ನ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಜೆಪಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್

ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಆರು ಮಂದಿ ಕೈಗೆ ಕೊಳ : ಜ್ಯೂವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಆರು ಮಂದಿಯ ಗ್ಯಾಂಗ್ ಬಂದು, ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಎಗರಿಸುತ್ತಿದ್ದರು. ಅಷ್ಟೇ ಅಲ್ಲದೆ ಹೆಚ್ಚು ಜನ ಸೇರುವ ಪ್ರಸಿದ್ಧ ಬನಶಂಕರಿ ಜಾತ್ರೆಯಲ್ಲಿ ಅತ್ತ ಇತ್ತ ಓಡಾಡ್ತಾ ಮಹಿಳೆಯರ ಮೈಮೇಲಿದ್ದ ಚಿನ್ನಾಭರಣ ಕ್ಷಣಮಾತ್ರದಲ್ಲಿ ಮಂಗಮಾಯ ಮಾಡಿ ಎಸ್ಕೇಪ್ ಆಗುತ್ತಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು ಚಮನ್ಸಾಬ್(32), ನಾನಾವಲಿ, ಜುಬೇದಾ, ಶೌಕತ್, ಪ್ಯಾರಿ ಬಿ, ಜೈತುಂಬಿ ಸೇರಿದಂತೆ 6 ಜನರನ್ನ ಬಂಧಿಸಿದ್ದಾರೆ. ಬಂಧಿತರಿಂದ 16 ಲಕ್ಷ ಮೌಲ್ಯದ 383 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈ ಗ್ಯಾಂಗ್ 8 ಕಳವು ಪ್ರಕರಣದಲ್ಲಿ ಭಾಗಿಯಾಗಿರೋದು ಕೂಡ ಗೊತ್ತಾಗಿದೆ ಎಂದು‌ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ಮೂವರ ಹಣ, ಚಿನ್ನಾಭರಣ ಕದ್ದೊಯ್ದ ಕಳ್ಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.