ETV Bharat / state

ತಿರುವನಂತಪುರ ಕಾಸರಗೋಡು ವಂದೇ ಭಾರತ್ ಎಕ್ಸ್​ಪ್ರೆಸ್ ಮಂಗಳೂರುವರೆಗೆ ವಿಸ್ತರಣೆ

author img

By ETV Bharat Karnataka Team

Published : Feb 22, 2024, 7:39 AM IST

ವಂದೇ ಭಾರತ್ ಎಕ್ಸ್​ಪ್ರೆಸ್
ವಂದೇ ಭಾರತ್ ಎಕ್ಸ್​ಪ್ರೆಸ್

ತಿರುವನಂತಪುರ ಕಾಸರಗೋಡು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಂಗಳೂರಿಗೆ ವಿಸ್ತರಣೆ ಆಗಿದೆ. ಈ ಮೂಲಕ ಕಡಲೂರಿಗೆ ಎರಡು ವಂದೇ ಭಾರತ್ ರೈಲುಗಳ ಸೇವೆ ಲಭ್ಯವಾಗಿದೆ.

ಮಂಗಳೂರು: ತಿರುವನಂತಪುರ - ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು ಮಂಗಳೂರಿನವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.

ಈವರೆಗೆ ವಂದೇ ಭಾರತ್ ರೈಲು ತಿರುವನಂತಪುರ-ಕಾಸರಗೋಡು ನಡುವೆ ಸಂಚರಿಸುತ್ತಿತ್ತು. ಇದೀಗ ಈ ರೈಲು ಮಂಗಳೂರುವರೆಗೆ ಸೇವೆ ನೀಡಲಿದೆ. ವಂದೇ ಭಾರತ್ ರೈಲ್ ನಂ. 20632/20631 ಇನ್ನು ಮುಂದೆ ತಿರುವನಂತಪುರ - ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ.

ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಬಿಟ್ಟು ಮಂಗಳೂರನ್ನು ರಾತ್ರಿ 12.40ಕ್ಕೆ ತಲುಪಲಿದೆ. ಬುಧವಾರ ಹೊರತು ಪಡಿಸಿ ವಾರದ ಆರು ದಿನಗಳಲ್ಲಿ ಈ ವಂದೇ ಭಾರತ್ ರೈಲು ಲಭ್ಯವಿರಲಿದೆ.

ಸೆ.24, 2023 ರಂದು ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. 8 ಗಂಟೆ 5 ನಿಮಿಷದಲ್ಲಿ ತಿರುವನಂತಪುರ - ಕಾಸರಗೋಡು ತಲುಪುತ್ತಿತ್ತು. ಇನ್ನು ಈ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ರೈಲ್ವೆ ಮಂಡಳಿ, ಮಂಗಳೂರುವರೆಗೆ ವಿಸ್ತರಿಸಿ ಆದೇಶಿಸಿದೆ.

ಇದನ್ನೂ ಓದಿ: ರೈಲ್ವೆಯಲ್ಲಿ ಭಾರಿ ಬದಲಾವಣೆಗೆ ಬಜೆಟ್​​ನಲ್ಲಿ ಮುನ್ನುಡಿ: ಮೂರು ರೈಲ್ವೆ ಕಾರಿಡಾರ್​ಗಳ​ ಘೋಷಣೆ

ಕಡಲೂರಿಗೆ ಎರಡು ವಂದೇ ಭಾರತ್ ಎಕ್ಸ್​ಪ್ರೆಸ್​: ಮಂಗಳೂರು‌ - ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಡಿ.31, 2023 ರಂದು ಆರಂಭವಾಗಿತ್ತು. ಇದೀಗ ತಿರುವನಂತಪುರ ಕಾಸರಗೋಡು ರೈಲು ಮಂಗಳೂರುವರೆಗೆ ವಿಸ್ತರಣೆಯಾಗಿದೆ. ಈ ಮೂಲಕ ಮಂಗಳೂರಿಗೆ ಎರಡು ಫಾಸ್ಟ್ ರೈಲುಗಳ ಸೇವೆ ಲಭ್ಯವಾಗಿದೆ.

ಮಂಗಳೂರು‌ - ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಡಿ.31ರಂದು ಅಯೋಧ್ಯೆಯಿಂದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆ ಬಳಿಕ ಮಂಗಳೂರಿನಿಂದ ಗೋವಾಗೆ ಈ ರೈಲು ಸಂಚಾರ ಆರಂಭಿಸಿತ್ತು. ಮಂಗಳೂರು ಮಡಗಾಂವ್ ಮಧ್ಯೆ 320 ಕಿ.ಮೀ. ದೂರ ಇದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ, ಮಡಗಾಂವ್​​ನಲ್ಲಿ ನಿಲುಗಡೆಯಾಗಲಿದೆ. 4 ಗಂಟೆ 35 ನಿಮಿಷ ಪ್ರಯಾಣಕ್ಕೆ‌ ಸೀಮಿತವಾಗಿರುವ ಈ ರೈಲಿನಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾತ್ರ ಇದೆ. ಸ್ಲೀಪರ್ ಕೋಚ್ ಇರುವುದಿಲ್ಲ.

ಈ ರೈಲು ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್​​ನಿಂದ ಬೆಳಗ್ಗೆ 8.30 ಕ್ಕೆ ಹೊರಟು, ಉಡುಪಿಗೆ 9.48, ಕಾರವಾರಕ್ಕೆ 12.08 ಮತ್ತು ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಗಾಂವ್​​ನಿಂದ ಹೊರಟು ಕಾರವಾರಕ್ಕೆ 6.55, ಉಡುಪಿಗೆ ರಾತ್ರಿ 9.12 ಮತ್ತು ರಾತ್ರಿ‌ 10.45 ಕ್ಕೆ ಮಂಗಳೂರು‌ ಸೆಂಟ್ರಲ್ ತಲುಪಲಿದೆ.

ಇದನ್ನೂ ಓದಿ: 'ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಓಡಾಟ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.