ETV Bharat / state

ಏ.2ರಿಂದ ನಿರ್ಮಾಣ ಹಂತದ ಕಟ್ಟಡಗಳಿಗೆ ಸಂಸ್ಕರಿಸಿದ ನೀರು ಪೂರೈಕೆ: ರಾಮ್ ಪ್ರಸಾತ್ ಮನೋಹರ್ - TREATED WATER SUPPLY

author img

By ETV Bharat Karnataka Team

Published : Mar 31, 2024, 8:55 PM IST

Jalmandali Chairman Dr Ram Prasath briefed to media.
ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕಾರ್ಯನಿರ್ವಹಿಸಲು ಅಪಾರ್ಟ್ಮೆಂಟ್ ಫೆಡೆರೇಷನ್ ಮತ್ತು ಕ್ರೆಡೈ ಸಹಭಾಗಿತ್ವದಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ.

ಬೆಂಗಳೂರು: ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ ಫೆಡರೇಷನ್ ಮತ್ತು ಕ್ರೆಡೈ ಜೊತೆಗೆ ಸಹಭಾಗಿತ್ವಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ. ಏಪ್ರಿಲ್ 2 ರಿಂದ ಸಂಸ್ಕರಿಸಿದ ನೀರಿನ ಸರಬರಾಜು ಪ್ರಾರಂಭಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಹಾಗೂ ಕ್ರೆಡೈ ಜೊತೆಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಪಾರ್ಟ್ಮೆಂಟ್​ಗಳ ಎಸ್ ಟಿ ಪಿಗಳಿಂದ ಶುದ್ಧೀಕರಣ ಗೊಳಿಸಲಾಗಿರುವ ಶೇ 50 ರಷ್ಟು ನೀರನ್ನು ಮಾರಾಟ ಮಾಡಲು ಮಾರ್ಚ್ 11 ರಂದು ಅನುಮತಿ ನೀಡಲಾಗಿದೆ. ಹಾಗೆ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲೂ ಸಂಸ್ಕರಿಸಿದ ನೀರು ಲಭ್ಯವಿದೆ. ಈ ನೀರನ್ನು ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಉದ್ದೇಶದಿಂದ ಈ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ತ್ಯಾಜ್ಯ ನೀರು ಶುದ್ಧೀಕರಣ: ಖಾಸಗಿ ಅಪಾರ್ಟ್ಮೆಂಟ್ ಹಾಗೂ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಕಟ್ಟಡಗಳ ಬಳಕೆಗೆ ಪ್ರತ್ಯೇಕ ಪೈಪ್ ಲೈನ್ ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದರಿಂದಾಗಿ ಅವರ ಅಗತ್ಯತೆಗೆ ಅನುಗುಣವಾಗಿ ನಿರಂತರವಾಗಿ ನೀರು ಪೂರೈಕೆ ಸಾಧ್ಯವಾಗಲಿದೆ ಎಂದಿದ್ದಾರೆ.

ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಬಹುತೇಕ ಕೊಳವೆ ಬಾವಿಗಳು ಮತ್ತು ಟ್ಯಾಂಕರ್​ಗಳನ್ನು ಅವಲಂಬಿಸಲಾಗುತ್ತದೆ. ಇದರಿಂದ ಅಂತರ್ಜಲದ ಮೇಲೆ ಬಹಳಷ್ಟು ಒತ್ತಡ ಹೆಚ್ಚಾಗಿದೆ. ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವುದರಿಂದ ಇದನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಾರ್ಟ್ಮೆಂಟ್ ಗಳ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ. ಇದೇ ರೀತಿ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ. ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ನಮ್ಮ ಉದ್ದೇಶವಾಗಿದೆ. ಅಪಾರ್ಟ್ಮೆಂಟ್​ಗಳು ತಮ್ಮ ಹೆಚ್ಚುವರಿ ನೀರನ್ನು ಸುಲಭವಾಗಿ ಮಾರಾಟ ಮಾಡಲು ಗ್ರಾಹಕರನ್ನು ಒದಗಿಸುವ ವೇದಿಕೆ ಆಗಿ ಇದು ಕಾರ್ಯವಹಿಸಲಿದೆ ಇದರಿಂದ ಬಿಎಎಫ್ ಹಾಗೂ ಕಟ್ಟಡ ಮಾಲೀಕರಿಗೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

62 ಲಕ್ಷ ಲೀಟರ್ ಸಂಸ್ಕರಿಸಿದ ನೀರಿಗೆ ಬೇಡಿಕೆ: ಈಗಾಗಲೇ 62 ಲಕ್ಷ ಲೀಟರ್ ಸಂಸ್ಕರಿಸಿದ ನೀರಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಸ್ಕರಿಸಿದ ನೀರನ್ನು ಮಾರಾಟ ಮಾಡುವ ಮೂಲಕ ಜಲಮಂಡಳಿಗೆ ಆದಾಯವೂ ಹೆಚ್ಚಾಗಲಿದೆ. ಮಂಗಳವಾರದಿಂದ ಈ ಸರಬರಾಜನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಖಾಸಗಿ ಹಾಗೂ ಜಲಮಂಡಳಿ ಎಸ್​ಟಿಪಿಗಳ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪೈಪ್ ಲೈನ್ ಅಥವಾ ಟ್ಯಾಂಕರ್ ಗಳ ಮೂಲಕ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ಚಿಂತಿಸಲಾಗಿದೆ. ಸರಬರಾಜು ಹಾಗೂ ನೀರಿನ ವೆಚ್ಚವನ್ನು ಗ್ರಾಹಕರೇ ಭರಿಸಲಿದ್ದಾರೆ ಎಂದಿದ್ದಾರೆ.

ಸಂಸ್ಕರಿಸಿದ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಬರದೇ ಇರಲಿ ಎನ್ನುವ ಉದ್ದೇಶದಿಂದ, ಸಂಸ್ಕರಿಸಿದ ನೀರಿನ ಗುಣಮಟ್ಟ ಹಾಗೂ ಅದರ ಬಳಕೆಯ ಬಗ್ಗೆ ಇರುವ ಅನುಮಾನ ಪರಿಹರಿಸಲು ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದೇವೆ. ಈ ಸಹಭಾಗಿತ್ವದಿಂದ ಸಂಸ್ಕರಿಸಿದ ನೀರಿನ ಬಗೆ ಥರ್ಡ್ ಪಾರ್ಟಿ ಸರ್ಟಿಫಿಕೇಶನ್ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಸ್ಕರಿಸಿದ ನೀರಿನ ಬೇಡಿಕೆಗೆ ಈಗಾಗಲೇ ಮಂಡಳಿ ವತಿಯಿಂದ ಪರಿಸರ ಜಲಸ್ನೇಹಿ ಆ್ಯಪ್ ನಿರ್ಮಿಸಲಾಗಿದೆ. ಈ ಆ್ಯಪ್ ಮೂಲಕ ಗ್ರಾಹಕರು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಂಸ್ಕರಿಸಿದ ನೀರಿಗೆ ಬುಕಿಂಗ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಭೀಕರ ಬರಗಾಲ; ಬಾಡಿಗೆ ಟ್ಯಾಂಕರ್ ನೀರು ಪಡೆದು ಅಡಿಕೆ ತೋಟ ಉಳಿಸಲು ರೈತರ ಶತಪ್ರಯತ್ನ - FARMERS PURCHASING WATER FOR CROP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.