ETV Bharat / state

ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರ ಪತನ ಆಗಲಿದೆ: ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ - Lok Sabha Election 2024

author img

By ETV Bharat Karnataka Team

Published : Mar 28, 2024, 9:52 PM IST

Updated : Mar 28, 2024, 10:36 PM IST

HD Kumaraswamy spoke in the meeting.
ಮಂಡ್ಯದಲ್ಲಿ ನಡೆದ ಜೆಡಿಎಸ್ ಬಿಜೆಪಿ ಸಮನ್ವಯ ಸಭೆಯಲ್ಲಿ ಹೆಚ್ ​​ಡಿ ಕುಮಾರಸ್ವಾಮಿ ಮಾತನಾಡಿದರು.

ಇಂದು ಮಂಡ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮನ್ವಯ ಸಭೆ ನಡೆಯಿತು.

ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಮಂಡ್ಯ: ಸಕ್ಕರೆ ನಗರ ಮಂಡ್ಯದಲ್ಲಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಣಿಸಲು ರಣತಂತ್ರ ರೂಪಿಸುತ್ತಿರುವ ಕಮಲ ನಾಯಕರು ಹಾಗೂ ದಳಪತಿಗಳು ಇಂದು ಮಂಡ್ಯದಲ್ಲಿ ಸಮನ್ವಯ ಸಭೆ ನಡೆಸುವ ಮೂಲಕ ಕೈ ಪಡೆ ವಿರುದ್ಧ ರಣಕಹಳೆ ಮೊಳಗಿಸಿದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಹೆಚ್​​​​​​ಡಿಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಕಾಂಗ್ರೆಸ್ ವಿರುದ್ದ ಗುಡುಗಿದರು. ಮೈತ್ರಿ ಅಭ್ಯರ್ಥಿಯಾಗಿ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಕ್ಷೇತ್ರಕ್ಕೆ ಪ್ರವೇಶ ಮಾಡಿದರು.

ಮೊದಲಿಗೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದ ನಂತರ ಅವರು ನೇರವಾಗಿ ಸಭೆಗೆ ಆಗಮಿಸಿದರು. ಈ ವೇಳೆ, ಬಿಜೆಪಿ ಹಾಗೂ ಜೆಡಿಎಸ್ ಶಾಲು ಹಾಕಿ ಚುನಾವಣೆಗೆ ರಣಕಹಳೆ ಮೊಳಗಿಸಿದರು. ಇದೇ ವೇಳೆ ಜೈ ಶ್ರೀರಾಮ್ ಘೋಷಣೆ ಕೂಡ ಕೇಳಿ ಬಂತು. ಈ ವೇಳೆ, ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್​ ನಡಿಗೆ ಕೃಷ್ಣಾ ಕಡೆಗೆ ಎಲ್ಲಿಯಪ್ಪ, ಕೃಷ್ಣಾ ಏನೂ ಮಾಡಿದ್ರು, ಐದು ವರ್ಷ ಇದ್ದೀರಲ್ಲ. ಈಗ ಭಾಷಣ ಮಾಡುತ್ತೀರಿ, 1977ನೇ ಇಸ್ವಿಯವರೆಗೆ ದೇಶ ರಾಜ್ಯ ಆಳಿದವರು ಕಾಂಗ್ರೆಸ್​ನವರು. ಸತತವಾಗಿ 28ಕ್ಕೆ 28ಕ್ಕೂ ಲೋಕಸಭೆ ಸದಸ್ಯರು ಕರ್ನಾಟಕದಿಂದ ಆಯ್ಕೆಯಾಗಿ ಹೋಗಿದ್ದರು. ಆಗ ಏನಾದರೂ ಕರ್ನಾಟಕ ಬಗ್ಗೆ ಚರ್ಚೆ ಮಾಡಿದ್ದೀರಾ ನೀವು, ಇವತ್ತು ನಮ್ಮ ಮೇಲೆ ಪ್ರಶ್ನೆ ಮಾಡುತ್ತಿದ್ದೀರಲ್ಲ ಕಾಂಗ್ರೆಸ್​ನವರು? ಎಂದು ಆರೋಪಿಸಿದರು.

ಆ ಐವತ್ತು ವರ್ಷ ಕಾಲ ರಾಜ್ಯ ದೇಶ ಆಳಿ ಬರಬೇಕಾದ ಹಕ್ಕುಗಳನ್ನು ಪಡೆಯದೇ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿ, ಈಗ ನಮ್ಮ ಮೇಲೆ ದೂರು ಹೇಳುತ್ತಿರುವಂತ ಸಿದ್ದರಾಮಯ್ಯನವರೇ? ಇವತ್ತು ನಿಮಗೆ ಜನರು ಅಧಿಕಾರ ಕೊಟ್ಟಿದ್ದಾರೆ, ಇಂಥ ಬರಗಾಲ ಸಮಯದಲ್ಲಿ ಅಧಿಕಾರವನ್ನು ಯಾವ ರೀತಿ ಅನುಭವಿಸುತ್ತಿದ್ದೀರಿ ಎನ್ನುವುದನ್ನು ನೀವು ಜನರಿಗೆ ಹೇಳಬೇಕು ಎಂದು ಪ್ರಶ್ನಿಸಿದರು.

ಡಿಸೆಂಬರ್​ದೊಳಗೆ ರಾಜ್ಯ ಸರ್ಕಾರ ಪತನ: ಮೈತ್ರಿ ಪಕ್ಷಗಳು ಒಗ್ಗಟ್ಟಾಗಿ ಹೋಗುತ್ತಿರುವುದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸುತ್ತೇವೆ. ಈ ಬಾರಿ ಜನರ ಆಶೀರ್ವಾದದಿಂದ 28ಕ್ಕೂ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಇದು ನಮ್ಮ ಗುರಿಯೂ ಆಗಿದೆ. ಈ ಲೋಕಸಭೆ ಚುನಾವಣೆ ನಂತರ ಈ ರಾಜ್ಯ ಸರ್ಕಾರ ಇರಲ್ಲ. ನಾನು ಜ್ಯೋತಿಷಿಯೂ ಅಲ್ಲ. ರಾಜ್ಯದಲ್ಲಿ ಮುಂದಿನ ಒಂದು ವರ್ಷದೊಳಗೆ, ಅಂದರೆ ಡಿಸೆಂಬರ್ ತಿಂಗಳದೊಳಗೆ ರಾಜ್ಯ ಸರ್ಕಾರಕ್ಕೆ ಡೆಡ್​ಲೈನ್ ಕೊಡ್ತಿನಿ, ನಾವು ಸರ್ಕಾರ ತೆಗೆಯಬೇಕಿಲ್ಲ. ಅವತ್ತು ಸರ್ಕಾರವನ್ನು ಅವರೇ ಕೆಡವಿಕೊಳ್ಳುತ್ತಾರೆ. ಹೀಗಾಗಿ ಡಿಸೆಂಬರ್ ಅಂತ್ಯದಲ್ಲಿ ಸರ್ಕಾರ ಪತನ ಆಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಕೆ ಸಿ‌ ನಾರಾಯಣ್ ಗೌಡ, ಡಾ ಸಿ ಎನ್ ಅಶ್ವತ್ಥ ನಾರಾಯಣ್, ಸಿ ಎಸ್ ಪುಟ್ಟರಾಜು, ಜಿ ಟಿ ದೇವೇಗೌಡ, ಸಾರಾ ಮಹೇಶ್, ಮಾಜಿ ಶಾಸಕರಾದ ಅನ್ನದಾನಿ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು. ಇನ್ನು ಆಪರೇಷನ್ ಹಸ್ತಕ್ಕೆ ಬಿದ್ದಿದ್ದಾರೆ ಎನ್ನಲಾಗಿದ್ದ ಮಾಜಿ ಸಚಿವ ಕೆ ಸಿ ನಾರಾಯಣ್ ಗೌಡ ಸಭೆಗೆ ಹಾಜರಾಗಿ ಎಲ್ಲರ ಗಮನ ಸೆಳೆದರು.‌ ಇನ್ನು ರೆಬಲ್ ಲೇಡಿ ಬರ್ತಾರಾ ಎಂಬ ಕುತೂಹಲ ಇತ್ತು. ಆದರೆ, ಸಭೆಗೆ ಸುಮಲತಾ ಗೈರಾಗಿ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ರಾಜೀನಾಮೆ ಪ್ರಸಂಗ ಅದೊಂದು ನಾಟಕ, ಯಾರು ರಾಜೀನಾಮೆ ಕೊಡುವುದಿಲ್ಲ: ಕೆ ಹೆಚ್ ಮುನಿಯಪ್ಪ - Lok Sabha Election 2024

Last Updated :Mar 28, 2024, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.