ETV Bharat / state

ಧಾರ್ಮಿಕ ನಿಂದನೆ ವಿವಾದ: ಶಿಕ್ಷಕಿ ವಜಾಕ್ಕೆ ಶಾಸಕರಿಂದ ಒತ್ತಡ- ಮುಖ್ಯೋಪಾಧ್ಯಾಯಿನಿ ಆರೋಪ

author img

By ETV Bharat Karnataka Team

Published : Feb 15, 2024, 10:01 PM IST

ಧಾರ್ಮಿಕ ನಿಂದನೆ ಆರೋಪದ ಮೇಲೆ ಮಂಗಳೂರಿನ ಸೇಂಟ್ ಜೆರೋಸಾ ಶಾಲಾ ಶಿಕ್ಷಕಿ ವಜಾ ಪ್ರಕರಣ ಕುರಿತಂತೆ ಶಾಲೆಯ ಮುಖ್ಯೋಪಾಧ್ಯಾಯರು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

st-gerosa-school-headmistress-allegations-on-bjp-mla
ಧಾರ್ಮಿಕ ನಿಂದನೆ ವಿವಾದ; ಶಿಕ್ಷಕಿ ವಜಾಕ್ಕೆ ಶಾಸಕರಿಂದ ಒತ್ತಡ: ಮುಖ್ಯೋಪಾಧ್ಯಾಯಿನಿ ಆರೋಪ

ಮಂಗಳೂರು: ನಗರದ ಜೆರೋಸಾ ಶಾಲೆಯ ಶಿಕ್ಷಕಿ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅನಿತಾ ಅವರು ಪ್ರಕಟಣೆ ನೀಡಿ, ''ಸಿಸ್ಟರ್ ಪ್ರಭಾ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲಾ ಆಡಳಿತದ ಮೇಲೆ ಒತ್ತಡ ಹೇರಿದ್ದರು'' ಎಂದು ಆರೋಪ ಮಾಡಿದ್ದಾರೆ.

''ಸೇಂಟ್ ಜೆರೋಸಾ ಶಾಲೆಯು ಫೆಬ್ರವರಿ 8ರಂದು ದುರದೃಷ್ಟಕರ ಮತ್ತು ದುಃಖದ ಘಟನೆಗೆ ಸಾಕ್ಷಿಯಾಗಿದ್ದು, 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗಾಗಿದೆ. ಫೆಬ್ರವರಿ 10ರಂದು ನಾಲ್ವರು ಮುಖ್ಯೋಪಾಧ್ಯಾಯಿನಿಯವರನ್ನು ಸಂಪರ್ಕಿಸಿ ರವೀಂದ್ರನಾಥ ಠಾಗೋರ್ ರಚಿಸಿದ 'ವರ್ಕ್ ಈಸ್ ವರ್ಷಿಪ್' ಕವನವನ್ನು ಬೋಧಿಸುವಾಗ ಸಿಸ್ಟರ್ ಪ್ರಭಾ ಅವರು ಹಿಂದೂ ಧರ್ಮ ಮತ್ತು ಪ್ರಧಾನಿ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಲಾಗಿತ್ತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ವಿಚಾರಣೆ ವೇಳೆ ಸಂಬಂಧಪಟ್ಟ ಶಿಕ್ಷಕಿ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ'' ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

''ರವೀಂದ್ರನಾಥ ಠಾಗೋರ್ ರಚಿಸಿದ ಕವಿತೆಯನ್ನು ಕಲಿಸುವಾಗ ಶಿಕ್ಷಕರು ದೇವಾಲಯಗಳು, ಚರ್ಚ್​​​ಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು. ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು. ನಾವು ಕೆಲಸ ಮತ್ತು ಮನುಷ್ಯರನ್ನು ಗೌರವಿಸಬೇಕು ಮತ್ತು ಅವರಲ್ಲಿ ದೇವರನ್ನು ಕಾಣಬೇಕು. ದೇವರು ರಚನೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಆದರೆ ಮಾನವ ಹೃದಯದಲ್ಲಿ ಮತ್ತು ನಾವೆಲ್ಲರೂ ದೇವರ ದೇವಾಲಯಗಳು ಎಂದು ವಿವರಿಸಿದ್ದಾರೆ. ಶಿಕ್ಷಕಿ ತಾನು ಯಾವುದೇ ದೇವರ ವಿರುದ್ಧ ಮಾತನಾಡಿಲ್ಲ. ಆದರೆ ಕವಿತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ. ತಾನು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ ಎಂದು ತಿಳಿಸಿದ್ದಾರೆ'' ಎಂದು ಸಿಸ್ಟರ್ ಅನಿತಾ ಹೇಳಿದ್ದಾರೆ.

''ಆಡಿಯೋ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಸಿ.ಪ್ರಭಾ ಅವರು ಕವಿತೆಯನ್ನು ವಿವರಿಸುವಾಗ ಹಿಂದೂ ಅಥವಾ ಯಾವುದೇ ಇತರ ಧರ್ಮದ ವಿರುದ್ಧ ಅಥವಾ ಪ್ರಧಾನಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಶಾಲಾ ಆಡಳಿತ ಮಂಡಳಿಯು ಜಿಲ್ಲಾಡಳಿತವನ್ನು ಸಂಪರ್ಕಿಸಿ ಆಡಿಯೋ ಸಂದೇಶವು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆಯನ್ನು ಕೋರಲಾಗಿದೆ. ವೈರಲ್ ಆಗಿರುವ ಮಹಿಳೆಯ ಆಡಿಯೋ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.

''ಫೆ.12ರಂದು ಶಿಕ್ಷಣ ಇಲಾಖೆ ಹಾಗೂ ಬಿಇಒ ಕಚೇರಿಯಿಂದ ವಿಷಯ ಪರಿವೀಕ್ಷಕರು, ಡಿಡಿಪಿಐ ಕಚೇರಿಯ ಸಮನ್ವಯಾಧಿಕಾರಿ, ಬಿಇಒ, ಇಸಿಒ ಮತ್ತು ಸಿಆರ್​​ಪಿಯವರು ಶಾಲೆಗೆ ಭೇಟಿ ನೀಡಿದ್ದು, ಅವರ ಕೋರಿಕೆಯ ಮೇರೆಗೆ ಎಲ್ಲವನ್ನೂ ವಿವರಿಸಲಾಗಿದೆ. ಇದಾದ ಬಳಿಕ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಹಿಂದು ಸಂಘಟನೆಗಳೊಂದಿಗೆ ಆಗಮಿಸಿ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು'' ಎಂದು ಆರೋಪಿಸಿದ್ದಾರೆ.

ಶಾಸಕ ವೇದವ್ಯಾಸ್ ಅವರಿಗೆ ಅರ್ಹ ಗೌರವ ನೀಡಿ, ಅವರನ್ನು ಶಾಲೆಯೊಳಗೆ ಆಹ್ವಾನಿಸಲಾಗಿತ್ತು. ಆದರೆ, ಅವರು ಒಳಗೆ ಬರಲು ನಿರಾಕರಿಸಿದರು. ಶಾಲೆ ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಿದರು. ಸರ್ವಜನಾಂಗದವರನ್ನು ಗೌರವಿಸಬೇಕಿದ್ದ ಶಾಸಕರು ತಮ್ಮದೇ ಶಾಲೆಯ ವಿರುದ್ಧ ಮಕ್ಕಳನ್ನು ಸೇರಿಸಿ ಘೋಷಣೆ ಕೂಗಲು ಪ್ರಚೋದನೆ ನೀಡಿರುವುದು ನೋವು ತಂದಿದೆ. ಕವಿತೆ ಬೋಧಿಸುವಾಗ ತರಗತಿಯಲ್ಲಿಲ್ಲದ ಇತರ ವಿದ್ಯಾರ್ಥಿಗಳನ್ನು ಘೋಷಣೆ ಕೂಗುವಂತೆ ಮಾಡಿದರು'' ಎಂದು ಆಪಾದಿಸಿದ್ದಾರೆ.

''ಶಾಲೆಯ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕರನ್ನು ಭೇಟಿ ಮಾಡುವಂತೆ ಬಿಇಒ ಹಾಗೂ ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ ಮೇರೆಗೆ ಬಳಿಕ ನಾನು ಅವರನ್ನು ಭೇಟಿಯಾದಾಗ, ಶಿಕ್ಷಕಿಯನ್ನು ತತ್​ಕ್ಷಣ ವಜಾಗೊಳಿಸುವಂತೆ ಅವರು ನನ್ನನ್ನು ಕೇಳಿಕೊಂಡರು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದರು. ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ವಿಚಾರಣೆಯಿಲ್ಲದೆ ಶಿಕ್ಷಕರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ, ಶಾಸಕರ ನೇತೃತ್ವದ ಗುಂಪು ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ತರುವಂತೆ ವಜಾ ಮಾಡಲು ಒತ್ತಾಯಿಸಿತು. ಹೀಗಾಗಿ, ಬೇರೆ ದಾರಿಯಿಲ್ಲದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾನು ಸಿ.ಪ್ರಭಾರನ್ನು ಕೆಲಸದಿಂದ ತೆಗೆದುಹಾಕುವ ಹೇಳಿಕೆಯನ್ನು ಕೊಡ ಬೇಕಾಯಿತು'' ಎಂದು ಹೇಳಿದ್ದಾರೆ.

''ಸಿ.ಪ್ರಭಾ ಅವರಿಗೆ ಜೆರೋಸಾ ಶಾಲೆಯಲ್ಲಿ ಐದು ವರ್ಷಗಳು ಸೇರಿದಂತೆ 16 ವರ್ಷಗಳ ಬೋಧನಾನುಭವ ಇದೆ. ಅವರ ವಿರುದ್ಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ವೈರಲ್ ಆಡಿಯೋದಲ್ಲಿ ಶಾಲೆಯ ಬಗ್ಗೆ ಮಾತನಾಡಿದ ಮಹಿಳೆ ನಿಜವಾಗಿಯೂ ಜೆರೋಸಾ ವಿದ್ಯಾರ್ಥಿಯ ಪೋಷಕರೇ? ಇಲ್ಲದಿದ್ದರೆ, ಇಂತಹ ಸುಳ್ಳು ಆರೋಪಗಳನ್ನು ಮಾಡುವ ಹಿಂದೆ ಆಕೆಯ ಅಜೆಂಡಾ ಏನು? ಪೋಷಕರಾಗಿದ್ದರೆ ಯಾಕೆ ಶಾಲೆಯ ಆಡಳಿತ ಮಂಡಳಿಗೆ ಈ ಬಗ್ಗೆ ಲಿಖಿತ ದೂರು ಏಕೆ ನೀಡಿಲ್ಲ'' ಎಂದು ಮುಖ್ಯೋಪಾಧ್ಯಾಯರು ಪ್ರಶ್ನಿಸಿದ್ದಾರೆ.

''ಕನಿಷ್ಠ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯ ಪ್ರತಿಷ್ಠೆ ಹಾಳುಗೆಡವಲು ಈ ಪ್ರತಿಭಟನೆ ಆಯೋಜಿಸಿದ್ದಂತೆ ತೋರುತ್ತದೆ. ನಾವು ಜಾತ್ಯತೀತರಾಗಿದ್ದೇವೆ, ಯಾವಾಗಲೂ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ. ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಯಾರನ್ನೂ ತಾರತಮ್ಯ ಮಾಡುವುದಿಲ್ಲ. ಪ್ರತಿವರ್ಷ ನಾವು ದೀಪಾವಳಿ, ಕ್ರಿಸ್ಮಸ್ ಮತ್ತು ಈದ್ ಆಚರಿಸುತ್ತೇವೆ'' ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಧಾರ್ಮಿಕ ನಿಂದನೆ ಆರೋಪ; ಸಂತ ಜೆರೋಸಾ ಶಾಲಾ ಶಿಕ್ಷಕಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.