ETV Bharat / state

ಚಿಕ್ಕಬಳ್ಳಾಪುರ: ಲಕ್ಷಾಂತರ ಮೌಲ್ಯದ ಶ್ರೀಗಂಧ ಮರಗಳ ಕಳ್ಳತನ

author img

By ETV Bharat Karnataka Team

Published : Feb 8, 2024, 9:54 PM IST

ಶ್ರೀಗಂದದ ಮರಗಳ ಕಳ್ಳತನ
ಶ್ರೀಗಂದದ ಮರಗಳ ಕಳ್ಳತನ

ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ಬೆಲೆಬಾಳುವ ಶ್ರೀಗಂಧದ ಮರಗಳು ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ನಲ್ಲಗುಟ್ಟ ಗ್ರಾಮದ ಸುತ್ತಮುತ್ತಲು ಬೆಳೆಸಿರುವ ಶ್ರೀಗಂಧ ಮರಗಳ ತೋಟಕ್ಕೆ ನುಗ್ಗಿರುವ ಕಳ್ಳರು ಕಳೆದ ಎರಡು ದಿನಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಈ ಕುರಿತು ರೈತರು ನೀಡಿದ ದೂರಿನ ಮೇರೆಗೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.

ನಲ್ಲಗುಟ್ಟಹಳ್ಳಿ ಗ್ರಾಮದ ಖಲೀಲ್ ಬೇಗ್, ತೌಸೀಫ್ ಬೇಗ್, ಕೃಷ್ಣಾರೆಡ್ಡಿ ಮತ್ತು ಶ್ರೀನಿವಾಸಪ್ಪ ಎಂಬವರ ಜಮೀನಿನಲ್ಲಿದ್ದ ಮರಗಳು ಕಳ್ಳತನವಾಗಿವೆ. ಖಲೀಲ್ ಬೇಗ್ ಸರ್ವೆ ನಂ.47ರಲ್ಲಿ 38 ಗುಂಟೆ ಜಮೀನು, ತೌಸೀಫ್ ಸರ್ವೇ ನಂ. 23ರಲ್ಲಿ 7 ಎಕರೆ 19 ಗುಂಟೆ ಜಮೀನು, ಕೃಷ್ಣಾರೆಡ್ಡಿಯವರ ಸರ್ವೆ ನಂ.24 ರಲ್ಲಿ 1 ಎಕರೆ 05 ಗುಂಟೆ ಜಮೀನು ಮತ್ತು ಶ್ರೀನಿವಾಸಪ್ಪನವರ ಸರ್ವೇ ನಂ. 40/1 ರಲ್ಲಿ 2 ಎಕರೆ 25 ಗುಂಟೆ ಜಮೀನಿನಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲಾಗಿತ್ತು.

ಖಲೀಲ್ ಬೇಗ್, ತೌಸೀಫ್ ಮತ್ತು ಕೃಷ್ಣಾರೆಡ್ಡಿ ಎಂಬವರು ಸಲ್ಲಿಸಿರುವ ದೂರಿನಲ್ಲಿ, ತಮ್ಮ ಜಮೀನಿನಲ್ಲಿ ಬೆಳೆಸಿರುವ ನೂರಾರು ಶ್ರೀಗಂಧದ ಮರಗಳ ಪೈಕಿ 15 ವರ್ಷದಷ್ಟು ಹಳೆಯ ಶ್ರೀಗಂಧದ ಮರಗಳಿದ್ದವು. ಅವುಗಳೂ ಸೇರಿದಂತೆ ಒಂದೆರಡು ವರ್ಷಗಳಲ್ಲಿ ಕಟಾವು ಮಾಡಬೇಕಾಗಿದ್ದ ತೋಟದ ಮಧ್ಯದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಬುಡದವರೆಗೆ ಕತ್ತರಿಸಿ ಕಳ್ಳತನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀನಿವಾಸಪ್ಪ ಎಂಬವರು ಸಲ್ಲಿಸಿರುವ ದೂರಿನಲ್ಲಿ ತಮ್ಮ ಜಮೀನಿನಲ್ಲಿ ಕಟಾವಿಗೆ ಬಂದಿದ್ದ 9 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ನಾಲ್ವರು ಸಲ್ಲಿಸಿರುವ ದೂರುಗಳಲ್ಲಿ ಕಳ್ಳತನವಾದ ಮರಗಳ ಸುತ್ತಳತೆ ಸುಮಾರು ಒಂದು ಅಡಿಯಿಂದ ಒಂದೂವರೆ ಅಡಿಯಷ್ಟು ದಪ್ಪ, 6ರಿಂದ 10 ಅಡಿಗಳಷ್ಟು ಉದ್ದವಿದೆ. ಮರಗಳ ನಿಖರವಾದ ಬೆಲೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಂದ ತಿಳಿದುಬರಬೇಕಿದೆ.

ಇದನ್ನೂ ಓದಿ: ಬೆಂಗಳೂರು: ಸಿಎಂ ಮನೆ‌ ಕೂಗಳತೆ ದೂರದಲ್ಲೇ ₹ 90 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.