ಶಿವಮೊಗ್ಗ: ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಯ ಕಾಲಿಗೆ ಪೊಲೀಸರು ಶೂಟ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾರು ಎಂಬಾತ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈತ ಇಂದು ನಗರದ ಹೊರ ವಲಯ ಮಲ್ಲಿಗೇನಹಳ್ಳಿಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಕಾನ್ಸಟೇಬಲ್ ನಾಗಪ್ಪ ಎಂಬುವರ ಮೇಲೆ ಫಾರು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸತ್ಯನಾರಾಯಣ ಅವರು ತಮ್ಮ ಸಿಬ್ಬಂದಿಯ ರಕ್ಷಣೆ ಹಾಗೂ ತಮ್ಮ ಆತ್ಮರಕ್ಷಣೆಗೆ ಎಚ್ಚರಿಕೆ ನೀಡಿ, ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಫಾರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಬಂದೂಕಿನಿಂದ ಶೂಟ್ ಮಾಡಿದ್ದಾರೆ.
ಗಾಯಗೊಂಡ ನಾಗಪ್ಪ ಹಾಗೂ ಫಾರುನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಕಾನ್ಸಟೇಬಲ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ: ವರ್ಷದ ಹಿಂದೆ ನಡೆದ ಜೋಡಿ ಕೊಲೆ ಕೇಸ್ ಭೇದಿಸಿದ ಪೊಲೀಸರು, ಪ್ರಿಯಕರ ಸೆರೆ - Vijayapura Double Murder Case