ETV Bharat / state

ಪ್ರಧಾನಿ ಮೋದಿಯವರ ರಾಮ ರಾಜ್ಯದ ಕನಸು ನನಸಾಗಲಿದೆ: ಬಿ.ವೈ.ವಿಜಯೇಂದ್ರ

author img

By ETV Bharat Karnataka Team

Published : Jan 23, 2024, 9:45 AM IST

BY Vijayendra  ಬೆಂಗಳೂರು  Bangaluru  ಬಿ ವೈ ವಿಜಯೇಂದ್ರ  PM Narendra Modi
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾರ್ಯಕರ್ತರು ಒಟ್ಟು 1,008 ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆ ದೀಪಾವಳಿ ಆಚರಿಸಿದರು‌.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ

ಬೆಂಗಳೂರು: ''ಪ್ರಧಾನಿ ನರೇಂದ್ರ ಮೋದಿಯವರ ರಾಮ ರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸಂಜೆ ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ದೀಪಗಳನ್ನು ಹಚ್ಚಲಾಯಿತು. ಪಕ್ಷದ ಕಾರ್ಯಕರ್ತರು ಒಟ್ಟು 1,008 ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆ ದೀಪಾವಳಿ ಆಚರಿಸಿದರು‌.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಿಜಯೇಂದ್ರ, ''ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ. ದೇಶದ ಪ್ರತಿಯೊಂದು ರಾಜ್ಯವನ್ನು ಪ್ರಗತಿಪಥದಲ್ಲಿ ಒಯ್ಯುವ ಹಾಗೂ 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಅವರು ಸಂಕಲ್ಪ ತೊಟ್ಟಿದ್ದಾರೆ. ಅದು ನನಸಾಗಲಿದೆ ಎನ್ನುತ್ತಾ ಮೋದಿ ಅವರ ಕರೆಗೆ ಓಗೊಟ್ಟು ಅಯೋಧ್ಯೆ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ದೀಪ ಹಚ್ಚಿದ ಹಿಂದೂಗಳಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಜನರ ನಿರೀಕ್ಷೆ, ಕೋಟಿ ಕೋಟಿ ರಾಮ ಭಕ್ತರ ಅಪೇಕ್ಷೆಯಂತೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ದೇಶದ ಮೂಲೆಮೂಲೆಯಿಂದ ಬಂದ ಸಾಧು ಸಂತರ ಸಮಕ್ಷಮದಲ್ಲಿ ಇದು ನಡೆದಿದೆ. ದೇಶದ ಪ್ರತಿಯೊಬ್ಬ ಹಿಂದೂಗಳ ಹೃದಯದಲ್ಲಿ ಪ್ರಭು ಶ್ರೀರಾಮನ ಭಕ್ತಿ-ಶ್ರದ್ಧೆಯ ಜಾಗೃತಿ ಮೂಡಿದೆ. ಪ್ರಾಣ ಪ್ರತಿಷ್ಠಾಪನೆಯು ಎಲ್ಲ ಹಿಂದೂಗಳ ಹಬ್ಬವಾಗಿ ಆಚರಣೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

''ನಾನು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಮ್ಮ ಶಾಸಕ ಗೋಪಾಲಯ್ಯನವರ ನೇತೃತ್ವದಲ್ಲಿ ಪೂಜೆ, ಪುನಸ್ಕಾರದಲ್ಲಿ ಭಾಗವಹಿಸಿದ್ದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನರೆಲ್ಲರೂ ಸಂಭ್ರಮದಿಂದ ವೀಕ್ಷಿಸಿದ್ದಾರೆ. ಮೋದಿ ಅವರ ಅಪೇಕ್ಷೆಯಂತೆ ಸಂಜೆ ಉತ್ತರಾಭಿಮುಖವಾಗಿ 5 ದೀಪಗಳನ್ನು ಪ್ರಜ್ವಲಿಸುವ ಮೂಲಕ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ'' ಎಂದು ನುಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ಪ್ರೀತಂಗೌಡ, ರಾಮ ಮಂದಿರ ದರ್ಶನ ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಕಾರ್ಯಾಲಯದಲ್ಲಿ ನಡೆದ ‘ಅಯೋಧ್ಯೆ ದೀಪಾವಳಿ’ಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: 7 ವರ್ಷದ ಹಿಂದೆ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ AN32 ವಿಮಾನದ ಅವಶೇಷಗಳು ಕೊನೆಗೂ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.