ಬಳ್ಳಾರಿ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ 2006 ರಲ್ಲಿನ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿರುವೆ. ನಮ್ಮ ಈ ಪಕ್ಷಗಳು ಬಂದಾದಾಗಲೆಲ್ಲ ಭಯಬೀಳುವ ಕಾಂಗ್ರೆಸ್ ನಮ್ಮನ್ನು ಒಡೆಯುವ ಕುತಂತ್ರವನ್ನು ಮಾಡುತ್ತದೆ ಅಂತಾ ಬಳ್ಳಾರಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಆರೋಪಿಸಿದರು.
ಬಳ್ಳಾರಿ ನಗರದ ಸೂರ್ಯ ಫಂಕ್ಷನ್ ಹಾಲ್ನಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇವೇಗೌಡರ ಗರಡಿಯಲ್ಲಿ ಬೆಳೆದ ಹಲವು ಅವಕಾಶವಾದಿಗಳು ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಲಿ ಪ್ರಧಾನಿ ಮೋದಿ ಅವರಿಂದ ರಾಜ್ಯದಲ್ಲಿ ಈ ಮೈತ್ರಿ ಬೃಹತ್ ಶಕ್ತಿಯಾಗಿ ಹೊರಹೊಮ್ಮಿದೆ. ಇಂಡಿಯಾ ಮೈತ್ರಿಕೂಟದಿಂದ ಒಬ್ಬೊಬ್ಬ ನಾಯಕರು ಕಳಚಿದ್ದಾರೆ. ಇದರಿಂದ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಮೋದಿ ಅವರ ಹ್ಯಾಟ್ರಿಕ್ ಗೆಲುವನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ ಅಂತಾ ಶ್ರೀರಾಮುಲು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೆಡಿಎಸ್ ಹಿರಿಯ ನಾಯಕ ವೆಂಕಟರಾವ್ ನಾಡಗೌಡ ಅವರು ಮಾತನಾಡುತ್ತ, ಬಿಜೆಪಿ ಮತ್ತು ಜೆಡಿಎಸ್ ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. 28 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಮೈತ್ರಿ ಧರ್ಮ ಪಾಲಿಸಿ ಶ್ರಮಿಸೋಣ. ದೇವೇಗೌಡರೇ ದೇಶಕ್ಕೆ ಮೋದಿ ಅವರ ಅವಶ್ಯಕತೆ ಇದೆ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿಯಲ್ಲಿನ ಮೋದಿ ಅವರ ಸರಿ ಸಮನಾಗಿ ಕಾಂಗ್ರೆಸ್ನಲ್ಲಿ ಇಲ್ಲ. ರಾಹುಲ್ ಅವರನ್ನು ಹೋಲಿಸಿ ಆ ಪಕ್ಷ ನಗೆಪಾಟಲಿಗೀಡಾಗಿದೆ ಎಂದರು.
ಮೋದಿ ವಿರುದ್ಧ ಮಾತನಾಡಿದ ಸಚಿವ ತಂಗಡಿಗಿಗೆ ಮತದಾರರು ಚುನಾವಣೆಯಲ್ಲಿ ಫಲಿತಾಂಶದ ಮೂಲಕ ಕಪಾಳ ಮೋಕ್ಷ ಮಾಡಲಿದ್ದಾರೆಂದರು. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಆದರೆ ದೇಶದ ಅರ್ಥಿಕ ಸ್ಥಿತಿಯನ್ನು ಮೋದಿ ಅವರು ದೇಶವನ್ನು 5ನೇ ಸ್ಥಾನಕ್ಕೆ ತಂದಿದ್ದಾರೆ. ಅದಕ್ಕಾಗಿ ದೇಶದ ಆರ್ಥಿಕ ಸುಭದ್ರತೆಗೆ ಬಿಜೆಪಿ ಅಭ್ಯರ್ಥಿಯನ್ನು ಇಬ್ಬರೂ ಸೇರಿ ಗೆಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ರಾಜ್ಯದಲ್ಲಿ ರೈತರ ಪರವಾಗಿ ಮಾಡಿದ ಕೆಲಸವನ್ನು ಬೇರೆ ಯಾರೂ ಮಾಡಿಲ್ಲ. ಮೋದಿ ಮತ್ತು ದೇವೇಗೌಡರು ಕಪ್ಪು ಚುಕ್ಕೆ ಇಲ್ಲದ ಆಡಳಿತ ನಡೆಸಿದ್ದಾರೆ. ಇಬ್ಬರೂ ರೈತರಿಗೆ, ನಿರಾವರಿಗೆ ಒತ್ತು ನೀಡಿದ್ದಾರೆ. ದೇಶದಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲು ಶ್ರೀರಾಮುಲು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆ ಬರಲ್ವಂತೆ. ಈ ಚುನಾವಣೆ ಆದ್ಮೇಲೆ ನಿಮಗೆ ಎರಡು ಸಾವಿರ ರೂಪಾಯಿ ಸಹ ಬರಲ್ಲ. ಕ್ವಾರ್ಟರ್ಗೆ 30 ರೂ ಜಾಸ್ತಿ ಮಾಡಿ, ಮಹಿಳೆಯರಿಗೆ ಎರಡು ಸಾವಿರ ರೂ ಕೊಡೋದರಲ್ಲಿ ಯಾವ ನ್ಯಾಯ ಅಂಥಾ ಮಾಜಿ ಶಾಸಕ ಅನಿಲ್ ಲಾಡ್ ಅವರು ಹೇಳಿದರು. ಈಗಿರುವ ಗ್ಯಾರೆಂಟಿಗಳು ಗ್ಯಾರೆಂಟಿ ಅಲ್ಲ. ಚುನಾವಣೆ ನಂತರ ಗ್ಯಾರೆಂಟಿ ಬಂದ್ ಆಗಲಿವೆ. ಈ ಚುನಾವಣೆಯಲ್ಲಿ ರಾಮುಲು ಅವರು ಗೆದ್ದರೆ ಕೇಂದ್ರ ಸಚಿವರಾಗಲಿದ್ದಾರೆ. ಅವರು ತುಂಗಭದ್ರ ಹೂಳಿನಿಂದ ಆಗುತ್ತಿರುವ ನೀರಿನ ಕೊರತೆ ನೀಗಿಸಲು ಯೋಜನೆಗಳನ್ನು ರೂಪಿಸಲಿದ್ದಾರೆ ಅಂತಾ ಲಾಡ್ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ನೇಮಿರಾಜ ನಾಯ್ಕ, ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ರಾಜಾ ವೆಂಕಟಪ್ಪ ನಾಯಕ, ಎಂ.ಎಂ.ಜೆ.ಹರ್ಷವರ್ಧನ, ಓಬಳೇಶ್, ವಸಿಗೇರಪ್ಪ, ಲಕ್ಷ್ಮೀಕಾಂತ ರೆಡ್ಡಿ, ಮೀನಳ್ಳಿ ರಮೇಶ್, ಬಾದಾಮಿ ಮೃತ್ಯುಂಜಯ, ಭವಾನಿ, ಓದೋ ಗಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು, ಕೆ. ಕೊಟ್ರೇಶ ಮೊದಲಾದವರು ಇದ್ದರು.