ETV Bharat / state

ಮೆಣಸಿನಕಾಯಿ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ : ಸಚಿವ ಶಿವಾನಂದ ಪಾಟೀಲ್

author img

By ETV Bharat Karnataka Team

Published : Mar 13, 2024, 3:59 PM IST

Byadgi Chilli Market
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ

ಸಾರ್ವಜನಿಕ ಆಸ್ತಿಗೆ ಹಾನಿಮಾಡತಕ್ಕಂತದ್ದು ಕೆಲವೇ ಕೆಲವು ಕಿಡಿಗೇಡಿಗಳು ಮಾಡಿರ್ತಾರೆ. ಅಂತಹವರ ಬಗ್ಗೆ ಸ್ವಲ್ಪ ನಿರ್ದಾಕ್ಷಿಣ್ಯ ಕ್ರಮವನ್ನ ಕೈಗೊಳ್ಳಲೇಬೇಕಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್

ಹಾವೇರಿ : ಮೆಣಸಿನಕಾಯಿ ಬೆಳೆಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದರು.

ಸೋಮವಾರ ದಾಂಧಲೆ ನಡೆದಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಘಟನೆ ಆಗಬಾರದಿತ್ತು, ಆಗಿದೆ. ರೈತರು ಸಾಮಾನ್ಯವಾಗಿ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಬರದೆ ಇದ್ರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಮಾಡಬಹುದು. ಆದ್ರೆ ಈ ರೀತಿ‌ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ರೈತರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಅಂತ ದೇಶದ ತುಂಬಾ ಆಕ್ರೋಶ ಇದೆ. ದೆಹಲಿಯಲ್ಲೂ ಕೂಡಾ MSP ಜಾರಿಗೆ ತರಲೇಬೇಕು ಅಂತಾ ಇಡೀ ದೇಶದ ಅನ್ನದಾತರು ಕೂಗು ಹಾಕ್ತಿದ್ದಾರೆ. ಆದರೆ ಇಲ್ಲಿ ಆಗಿರುವ ಘಟನೆ ನಾವು ಟ್ರೆಡಿಷನಲ್ ಆಗಿ ಬೆಳೆಯುವ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಬೆಲೆ ಕುರಿತಂತೆ ಅಸಮಾಧಾನದಿಂದ ಈ ರೀತಿ ಮಾಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್

ಸಿಜೆಂಟಾ ಕಂಪನಿಯವರು ಒಂದು ಹೊಸ ವೆರೈಟಿಯನ್ನ ಇಂಟ್ರೂಡ್ಯೂಸ್ ಮಾಡಿದ್ದಾರೆ. ಅದರ ಆವಕನೂ ಜಾಸ್ತಿ ಇರೋದ್ರಿಂದ ಬೆಲೆ ಕೂಡಾ ಕಡಿಮೆ ಇದೆ. ಅದನ್ನ ಅದರ ಜೊತೆಗೆ ಕಂಪೇರ್ ಮಾಡಿಕೊಳ್ಳತಕ್ಕಂತ ಪೂರ್ವಾಗ್ರಹ ಪೀಡಿತ ರೈತರೂ ಘಟನೆಯಲ್ಲಿ ಇರಬಹುದು. ಅವರು ತಮ್ಮ ಕೋಪವನ್ನ ಬೇರೆ ರೀತಿ ಹೊರಹಾಕಲು ಹಲವು ಮಾರ್ಗಗಳಿದ್ದವು. ಆದರೆ ಅವರು ಅನುಸರಿಸಿದ ಮಾರ್ಗ ಸರಿ ಇಲ್ಲ ಎಂದು ಅಭಿಪ್ರಾಯಪಟ್ಟರು.

ಇಲ್ಲಿರುವಂತಹ ವರ್ತಕರು ನಮ್ಮ ಇಲಾಖೆಗಾಗಲಿ, ಮುಖ್ಯಸ್ಥರಿಗಾಗಲಿ ವಿನಂತಿ ಮಾಡಿಕೊಂಡಿದ್ರೆ ಅದನ್ನ ಸರಿಪಡಿಸಬಹುದಿತ್ತು. ತಪ್ಪು ತಿಳುವಳಿಕೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ದುರ್ದೈವ ಆಗಬಾರದಂತಹ ಘಟನೆ ಆಗಿದೆ ಎಂದು ಸಚಿವ ಪಾಟೀಲ್ ಅವರು ತಿಳಿಸಿದರು.

ಕರ್ನಾಟಕದವರೇ ಆಗಲಿ, ಆಂಧ್ರದವರೇ ಇರಲಿ, ಬೇರೆ ರಾಜ್ಯದವರೇ ಇರಲಿ. ಆದ್ರೆ ಸಾರ್ವಜನಿಕ ಆಸ್ತಿಗೆ ಹಾನಿಮಾಡುವ ಕೆಲಸ ಕೆಲವೇ ಕೆಲವು ಕಿಡಿಗೇಡಿಗಳಿಂದ ಆಗಿರುತ್ತದೆ. ಅಂತಹವರ ಬಗ್ಗೆ ಸ್ವಲ್ಪ ನಿರ್ದಾಕ್ಷಿಣ್ಯ ಕ್ರಮವನ್ನ ಕೈಗೊಳ್ಳಲೇಬೇಕಾಗುತ್ತದೆ ಎಂದರು.

ಘಟನೆ ಕುರಿತಂತೆ ನಾನು ಒಂದು ವಿಡಿಯೋ ನೋಡಿದೆ. ಒಬ್ಬ ಪ್ರತ್ಯಕ್ಷವಾಗಿ ಬೆಂಕಿಯನ್ನ ತೆಗೆದುಕೊಂಡು ಹೋಗಿ ಹಾಕುವಂತದ್ದು. ಈ ರೀತಿ ಯಾವ್ದೂ ಮಾಡಬಾರದು. ಯಾವುದೇ ರೈತರಿದ್ದರೂ ಇಂತಹ ಘಟನೆ ಮಾಡಬಾರದು. ಅದು ತಪ್ಪಾಗುತ್ತದೆ. ಜೊತೆಗೆ ವಾರಕ್ಕೆ ಎರಡು ದಿವಸ ಆಗ್ತಕ್ಕಂತಹ ಹರಾಜು ಒಂದು ದಿವಸ ಆಗಿದ್ದು ಸಹ ಒಂದು ಕಾರಣ ಇರಬಹುದು ಎಂದು ಪಾಟೀಲ್ ತಿಳಿಸಿದರು.

ಈಗಾಗಲೇ ಏನು ಹೆಚ್ಚು ಮೆಣಸಿನಕಾಯಿ ಶೇಖರಣೆ ಆಗಿದೆ. ಅದನ್ನ ಯಾವ ರೀತಿ ವಿಲೇವಾರಿ ಮಾಡಬೇಕು ಅಂತ ನಮ್ಮ ಡೆವಲಪ್​ಮೆಂಟ್​ ಕಮಿಷನರ್ ಎರಡೂ ಬಾರಿ ಮೀಟಿಂಗ್ ಮಾಡಿ ಇಡೀ ದೇಶದಲ್ಲಿ ಯಾರಿಗೆ ಮೆಣಸಿನಕಾಯಿ ಅವಶ್ಯಕತೆ ಇದೆ, ಯಾರು ಖರೀದಿ ಮಾಡ್ತಾರೆ, ಅಂತವರಿಗೆ ಎಕ್ಸ್​ಪೋರ್ಟ್ ಮಾಡತಕ್ಕಂತಹ ಪ್ರಯತ್ನ ಮಾಡ್ತಿದ್ದಾರೆ ಎಂದು ಸಚಿವ ಪಾಟೀಲ್ ತಿಳಿಸಿದರು.

ರೈತರಿಗೆ ಹೆಚ್ಚಿನ ದರ ಸಿಗಬೇಕು : ಇಲ್ಲಿ ಇರತಕ್ಕಂತ ವರ್ತಕರು ಬಹಳ ಕೃತಜ್ಞತಾ ಭಾವದಿಂದ ನಿನ್ನೆ ಹರಾಜು ಮಾಡಿ, ಮತ್ತೆ ಪುನರಾರಂಭದ ಪ್ರಯತ್ನ ಮಾಡಿದ್ದಾರೆ. ಅವರ ಸಹಕಾರ ನಮ್ಮ ಜೊತೆ ಸದಾ ಹೀಗೆ ಇರಲಿ ಅಂತಾ ಭಾವಿಸುತ್ತೇನೆ. ತಕ್ಷಣ ಈಗ ಆಗಿರುವಂತಹ ಹಾನಿಯನ್ನ ನಾವು ಇಲಾಖೆಯಿಂದ ಭಾರಣ ಮಾಡಿ ಪುನಃ ಬ್ಯಾಡಗಿಯ ಮಾರುಕಟ್ಟೆ ಗತವೈಭವ ಏನಿತ್ತೋ ಅದನ್ನು ಮರುಸ್ಥಾಪಿಸುವ ಪ್ರಯತ್ನ ಮಾಡುತ್ತೇವೆ. ಬ್ಯಾಡಗಿಯಲ್ಲೇ ಮೆಣಸಿನಕಾಯಿ ಇನ್ನೂ ಪ್ರಚಲಿತವಾಗಿ ವ್ಯಾಪಾರವಾಗಬೇಕು. ರೈತರಿಗೆ ಹೆಚ್ಚಿನ ದರ ಸಿಗಬೇಕು ಅನ್ನೋದು ನಮ್ಮ ಆಶಯ ಎಂದು ಹೇಳಿದರು.

80 ಜನರನ್ನ ಅರೆಸ್ಟ್ ಮಾಡಿದ್ದಾರೆ: ಇದರ ಜೊತೆಗೆ ಸಿಜೆಂಟಾ ಕಂಪನಿಯಿಂದ ಮೆಣಸಿನಕಾಯಿ ಬರ್ತಾ ಇದೆ. ಅದರ ಬೆಲೆ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿಗೆ ಸರಿಸಮ ಅಲ್ಲ. ವರ್ತಕರ ಜೊತೆ ಅದನ್ನೂ ಕೂಡಾ ಸಾರ್ವತ್ರಿಕವಾಗಿ ಮಾಡಬೇಕು ಎಂದು ನಿರ್ಣಯ ಮಾಡುತ್ತೇವೆ. ಇಲ್ಲಿ ತಪ್ಪಿತಸ್ಥರು ಯಾರಿದ್ದಾರೋ ಎಲ್ಲರ ಮೇಲೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಇಲಾಖೆಯವರು ಮೇಲ್ನೋಟಕ್ಕೆ ಯಾರು ಯಾರು ತಪ್ಪು ಮಾಡಿದ್ದಾರೋ ಅಂತಹ 80 ಜನರನ್ನ ಅರೆಸ್ಟ್ ಮಾಡಿದ್ದಾರೆ ಎಂದರು.

ಅದರಲ್ಲಿ ಯಾರು ನಿರಪರಾಧಿ ಇದ್ದಾರೋ ಅವರನ್ನ ಬಿಡುಗಡೆ ಮಾಡುತ್ತೇವೆ. ಯಾರು ನಿಜವಾಗ್ಲೂ ಕಿಡಿಗೇಡಿತನ ಮಾಡಿದ್ದಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇದರ ಬಗ್ಗೆ ಸಾರ್ವಜನಿಕರ ಸಹಕಾರ ಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ; ವರ್ತಕರ ಸಂಘದ ಅಧ್ಯಕ್ಷರು ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.