ETV Bharat / state

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ; ವರ್ತಕರ ಸಂಘದ ಅಧ್ಯಕ್ಷರು ಹೇಳಿದ್ದೇನು?

author img

By ETV Bharat Karnataka Team

Published : Mar 12, 2024, 8:48 PM IST

ಇನ್ನು ಮುಂದೆ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರಕ್ಕೆ ಎರಡು ಬಾರಿ ವಹಿವಾಟು ನಡೆಸುತ್ತೇವೆ ಎಂದು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ತಿಳಿಸಿದ್ದಾರೆ.

ಹಾವೇರಿ
ಹಾವೇರಿ

ರೈತ ಈರಣ್ಣ

ಹಾವೇರಿ : ವಾರದಲ್ಲಿ ಎರಡು ದಿನ ವಹಿವಾಟು ನಡೆಸುವುದು ಬಿಟ್ಟು ಒಂದೇ ದಿನ ವಹಿವಾಟು ನಡೆಸಲು ಮುಂದಾಗಿದ್ದೇ ಸೋಮವಾರದ ದಾಂಧಲೆಗೆ ಕಾರಣ ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಘಟನೆ ಹಿನ್ನೆಲೆ ಮಂಗಳವಾರ ನಡೆದ ವರ್ತಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ವಾರಕ್ಕೆ ಒಂದು ಬಾರಿ ವಹಿವಾಟು ನಡೆಸುವುದಿಲ್ಲ. ಇನ್ನು ಮುಂದೆ ವಾರಕ್ಕೆ ಎರಡು ಬಾರಿ ವಹಿವಾಟು ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್

ಮಾರ್ಚ್​ ತಿಂಗಳಲ್ಲಿ ಅಧಿಕ ಜಾತ್ರೆಗಳು ಸೇರಿದಂತೆ ವಿವಿಧ ಧಾರ್ಮಿಕ ಕೆಲಸಗಳು ನಡೆಯುತ್ತವೆ. ಈ ಹಿನ್ನೆಲೆ ಕೂಲಿ ಕಾರ್ಮಿಕರ ಸಮಸ್ಯೆ ಇದೆ, ಮಾರುಕಟ್ಟೆಯಲ್ಲಿ ಅಧಿಕ ಆವಕದಿಂದ ವಾರಕ್ಕೆ ಒಂದು ಬಾರಿ ವಹಿವಾಟು ನಡೆಸಬೇಕಾಯಿತು. ಜೊತೆಗೆ ರೈತರು ಮೆಣಸಿನಕಾಯಿಗೆ ಹೆಚ್ಚು ನೀರು ಹಾಕಿಕೊಂಡು ಬರುತ್ತಾರೆ. ಈ ರೀತಿ ಮೆಣಸಿನಕಾಯಿ ಬಂದಾಗ ಅಧಿಕ ದಿನಗಳು ಬೇಕು. ಆದರೆ ವಾರದಲ್ಲಿ ಇನ್ನು ಮುಂದೆ ಎರಡು ಬಾರಿ ವಹಿವಾಟು ನಡೆಸುವುದಾಗಿ ಹೇಳಿದರು.

ಅಲ್ಲದೇ ವರ್ತಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವರ್ತಕರ ಸಂಘದ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ಎಸ್ಪಿ ಅಂಶುಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಘಟನೆ ಬಗ್ಗೆ ಚರ್ಚೆ ನಡೆಸಲಾಯಿತು.

ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಗೇರಿ

ಇದೇ ವೇಳೆ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಗೇರಿ, ಸೋಮವಾರ ನಡೆದ ದಾಂಧಲೆ ಘಟನೆಯಲ್ಲಿ ಪಾಲ್ಗೊಂಡವರು ರೈತರಲ್ಲ ಎಂದು ತಿಳಿಸಿದರು. ಅನ್ನದಾತರು ಈ ರೀತಿ ಕ್ಷುದ್ರವಾಗಿ ನಡೆದುಕೊಂಡ ಘಟನೆಗಳು ನಮ್ಮ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸಂಭವಿಸಿರಲಿಲ್ಲ. ದಾಂಧಲೆಯಂತಹ ಘಟನೆಗಳಿಗೆ ರೈತರು ಕೈ ಹಾಕುವುದಿಲ್ಲ. ಸರ್ಕಾರಿ ಕಚೇರಿಗೆ ಬೆಂಕಿ ಇಟ್ಟಿದ್ದಾರೆ. ಸರ್ಕಾರಿ ನೌಕರರಿಗೆ ಹೊಡೆದಿದ್ದಾರೆ. ರೈತ ಯಾವಾಗಲು ಬೆಳೆಸುವವನೇ ಹೊರತು, ಹಾಳು ಮಾಡುವವನಲ್ಲ ಎಂದು ಅವರು ಹೇಳಿದರು.

ಮಾರುಕಟ್ಟೆಗೆ ಬಂದಿದ್ದ ರೈತರಲ್ಲಿ ಪ್ರತಿಶತ 95ರಷ್ಟು ರೈತರು ತಮ್ಮ ಉತ್ಪನ್ನಮಾರಿ ಗ್ರಾಮಗಳಿಗೆ ತೆರಳಿದ್ದಾರೆ. ಆದರೆ ಪ್ರತಿಶತ 5ರಷ್ಟು ರೈತರು ಸೋಮವಾರ ಕ್ಷುದ್ರರಾಗಿ ವರ್ತಿಸಿದ್ದಾರೆ ಎಂದು ರಾಜು ಮೋರಗೇರಿ ಆರೋಪಿಸಿದರು.

ರೈತರ ಉತ್ಪನ್ನಕ್ಕೆ 18 ರಿಂದ 20 ಸಾವಿರ ರೂಪಾಯಿ ಬೆಲೆ ನಿಗದಿ: ಮೊದಲ ಕಟಾವ್ ತಂದ ರೈತರಿಗೆ ಕ್ವಿಂಟಾಲ್‌ಗೆ 30 ರಿಂದ 35 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. ಆದರೆ ಎರಡನೆಯ ಬೆಳೆ ಮೂರನೇಯ ಬೆಳೆ ಮತ್ತು ನೀರು ಹಾಕಿಕೊಂಡು ಬಂದ ರೈತರ ಉತ್ಪನ್ನಕ್ಕೆ 18 ರಿಂದ 20 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಐದಾರು ಕಿಡಿಗೇಡಿಗಳು ಈ ಸಂಚು ರೂಪಿಸಿದ್ದು, ಇದರ ಹಿಂದೆ ಏನು ಇದೆ ಎಂದು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕಾಗಿದೆ ಎಂದು ಒತ್ತಾಯಿಸಿದರು.

ನಾವು ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುತ್ತಿದ್ದೇವೆ. ಕಳೆದ ವರ್ಷ ಕಡಿಮೆ ಇಳುವರಿ ಇತ್ತು. ಅಧಿಕ ಬೆಲೆಗೆ ಮಾರಾಟವಾಗಿತ್ತು. ಈ ವರ್ಷ ಮೆಣಸಿನಕಾಯಿ ಬೆಳೆಯುವ ಪ್ರದೇಶ ಅಧಿಕಗೊಂಡಿದೆ ಮತ್ತು ಇಳುವರಿ ಸಹ ಅಧಿಕ ಪ್ರಮಾಣದಲ್ಲಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಕಳೆದ ವರ್ಷದ ದರ ಸಿಗುತ್ತಿಲ್ಲ ಎಂದು ತಿಳಿಸಿದರು.

ಮೆಣಸಿನಕಾಯಿ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆಳುಗಳ ಖರ್ಚು, ಬೀಜ, ಗೊಬ್ಬರ ಅಲ್ಲದೆ ಕೊನೆ ಕೊನೆಗೆ ಅಣೆಕಟ್ಟೆಯ ನೀರು ಸಿಗದ ಕಾರಣ ಟ್ಯಾಂಕರ್ ಮೂಲಕ ನೀರು ಹಾಯಿಸಿ ಮೆಣಸಿನಕಾಯಿ ಬೆಳೆದಿದ್ದೇವೆ. ಆದರೆ ಇಲ್ಲಿ ಬಂದು ಟೆಂಡರ್‌ಗೆ ಇಟ್ಟರೆ ಕಡಿಮೆ ದರ ಹಾಕಿದ್ದಾರೆ ಎಂದು ರೈತರು ಆರೋಪಿಸಿದರು.

35 ಸಾವಿರ ರೂಪಾಯಿ ಮೇಲೆ ದರ ಸಿಕ್ಕರೆ ಲಾಭ : ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದು ಮೆಣಸಿನಕಾಯಿ ತಂದರೆ ಇಲ್ಲಿ ಕ್ವಿಂಟಾಲ್‌ಗೆ 18 ರಿಂದ 20 ಸಾವಿರ ರೂಪಾಯಿ ಟೆಂಡರ್ ಹಾಕಿದ್ದಾರೆ. ನಮಗೆ ಕನಿಷ್ಠ 35 ಸಾವಿರ ರೂಪಾಯಿ ಮೇಲೆ ದರ ಸಿಕ್ಕರೆ ಲಾಭ, ಇಲ್ಲದಿದ್ದರೆ ನಷ್ಟ ಎನ್ನುತ್ತಾರೆ ರೈತರು.

ಈ ಮಧ್ಯೆ ಸೋಮವಾರ ಉದ್ವಿಗ್ನಗೊಂಡಿದ್ದ ಮೆಣಸಿನಕಾಯಿ ಮಾರುಕಟ್ಟೆ ಮಾಮೂಲಿ ಸ್ಥಿತಿಯತ್ತ ಮರಳುತ್ತಿದೆ. ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಂದಿನಂತೆ ಮಂಗಳವಾರ ಮಾರುಕಟ್ಟೆ ಶಾಂತತೆಯಿಂದ ಕೂಡಿತ್ತು.

ಇದನ್ನೂ ಓದಿ : ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿಯಿಟ್ಟ ಬೆಳೆಗಾರರು - 144 ಸೆಕ್ಷನ್​ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.