ETV Bharat / state

ಬೆಳಗಾವಿ ಲೋಕ ಕದನ : ಮಂಗಳಾ ಅಂಗಡಿ ಏಟು - ಲಕ್ಷ್ಮಿ ಹೆಬ್ಬಾಳ್ಕರ್ ಎದುರೇಟು - BELAGAVI LOK SABHA CONSTITUENCY

author img

By ETV Bharat Karnataka Team

Published : Mar 31, 2024, 7:56 PM IST

Minister Lakshmi Hebbalkar
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಸಂಸದೆ ಮಂಗಳಾ ಅಂಗಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿರುಗೇಟು ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಬೆಳಗಾವಿ : ಬೆಳಗಾವಿ ಲೋಕಸಭೆ ಕದನದಲ್ಲಿ ಏಟು-ಎದುರೇಟು ಜೋರಾಗಿದೆ. ಪತ್ರಿಕಾ ಪ್ರಕಟಣೆ ಮೂಲಕ ತಮಗೆ ಟಾಂಗ್ ಕೊಟ್ಟಿದ್ದ ಸಂಸದೆ ಮಂಗಳಾ ಅಂಗಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಕೂಡ ತಿರುಗೇಟು ಕೊಟ್ಟಿದ್ದಾರೆ.‌ ಈ ಮೂಲಕ ಬೆಳಗಾವಿ ಲೋಕ ಸಮರ ದಿನದಿಂದ ದಿನಕ್ಕೆ ರೋಚಕ ಘಟ್ಟದತ್ತ ಸಾಗುತ್ತಿದೆ.

ಇಷ್ಟು ದಿನ ಸೈಲೆಂಟ್ ಆಗಿಯೇ ಇದ್ದ ಸಂಸದೆ ಮಂಗಳಾ ಅಂಗಡಿ ಈಗ ಪಕ್ಷ ಹಾಗೂ ಸಿದ್ಧಾಂತ ಕುರಿತು ಮೌನ ಮುರಿದಿದ್ದಾರೆ. ನಿನ್ನೆ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ''ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀಯ ಮಾಡಿದೆ. ಸುರೇಶ್ ಅಂಗಡಿಯವರು ಸಹ ಬಿಜೆಪಿ ತತ್ವದಂತೆ ಬದುಕಿ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಈ ಬಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದಾಗ, ತಕ್ಷಣ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಸಂತೋಷದಿಂದ ಒಪ್ಪಿಕೊಂಡೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನರ ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ, ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು.

ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಂತೆ ಕೇವಲ ಕ್ಷುಲ್ಲಕ ವಿಷಯದ ರಾಜಕಾರಣ ಮಾಡುತ್ತಿದ್ದಾರೆ. ರಾಷ್ಟ್ರದ ಅಭಿವೃದ್ಧಿ, ರಾಷ್ಟ್ರೀಯತೆ, ರಾಜ್ಯದ ಅಭಿವೃದ್ಧಿ, ಕ್ಷೇತ್ರದ ಜನರ ಬೇಡಿಕೆ ಬಗ್ಗೆ ಬೆಳಕು ಚೆಲ್ಲಲಿ. ಅದನ್ನು ಬಿಟ್ಟು ಟಿಕೆಟ್ ಕಿತ್ತುಕೊಂಡಿದ್ದಾರೆ ಎಂಬಂಥ ಕ್ಷುಲ್ಲಕ ಹೇಳಿಕೆಗೆ ಪ್ರಜ್ಞಾವಂತ ಪ್ರಜೆಯಾಗಿ ನಾನು ಉತ್ತರಿಸಲಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆ ಆಗಿದ್ದೀರಿ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ್ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನವನ್ನು ನೀವು ಕಿತ್ತುಕೊಂಡಿದ್ದೀರಿ. ಈ ವಿಷಯವನ್ನು ಈವರೆಗೆ ನಾವು ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೇ ಜಿಲ್ಲೆಯ ಜನರಿಗೆ ಈ ವಿಷಯ ಚೆನ್ನಾಗಿದೆ ಗೊತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಡಿ ಮಾಡಿಕೊಳ್ಳುವುದು ಒಳಿತು'' ಎಂದು ಮಂಗಳಾ ಅಂಗಡಿ ವಾಗ್ದಾಳಿ ಮಾಡಿದ್ದರು.

ಮಂಗಳಾ ಅಂಗಡಿ ಅವರು ಏಕೆ ಬೀಗರ ಪರ ನಿಂತಿದ್ದಾರೆ‌ : ಕುಟುಂಬಕ್ಕಿಂತ ಪಕ್ಷ ಮುಖ್ಯ ಎನ್ನುವ ಸಂಸದೆ ಮಂಗಳಾ ಅಂಗಡಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ''ಬಿಜೆಪಿಯಲ್ಲಿ ಇಷ್ಟೊಂದು ಜನ ಆಕಾಂಕ್ಷಿಗಳು ಇದ್ದರು. ಮಂಗಳಾ ಅಂಗಡಿ ಬೇರೆಯವರಿಗೆ ಬೆಂಬಲಿಸಬಹುದಾಗಿತ್ತು. ಕುಟುಂಬಕ್ಕಿಂತ ಪಕ್ಷ ಮೊದಲು ಎನ್ನುವ ಮಂಗಳಾ ಅಂಗಡಿ ಅವರು ಏಕೆ ಬೀಗರ ಪರ ನಿಂತಿದ್ದಾರೆ‌. ಪಕ್ಷ ಮೊದಲು ಎಂದು ಜನರ ದಿಕ್ಕು ತಪ್ಪಿಸಲು ಹೇಳುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬಹುದಿತ್ತು. ಇದೆಲ್ಲ ಸುಮ್ಮನೆ ನಾಟಕ. ಬೀಗರ ಪರ ಮಂಗಳಾ ಅಂಗಡಿ ಬ್ಯಾಟಿಂಗ್ ವಿಚಾರ ಇದು ಸತ್ಯ. ಇಡೀ ಕ್ಷೇತ್ರದ ಜನ ಇದನ್ನು ಹೇಳುತ್ತಿದ್ದಾರೆ‌'' ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ಕೊಟ್ಟರು.

ಲಕ್ಷ್ಮಿ ಹೆಬ್ಬಾಳ್ಕರ್ ಸಚಿವ ಸ್ಥಾನಕ್ಕೆ ಗೌರವ ತರುವ ಹೇಳಿಕೆ ಕೊಡಬೇಕು ಎಂಬ ಮಂಗಳಾ ಅಂಗಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂಗಳಾ ಅಂಗಡಿ ವಯಸ್ಸಿನಲ್ಲಿ ಹಿರಿಯರು. ಆದರೆ, ಅವರಿಗೆ ರಾಜಕೀಯ ಅನುಭವ ಕಡಿಮೆ. ಸುರೇಶ ಅಂಗಡಿ ದಿವಂಗತರಾದ ಬಳಿಕ ಉಪಚುನಾವಣೆಯಲ್ಲಿ ಗೆದ್ದರು. ಅವರ ಬಗ್ಗೆ ಯಾಕೆ ಸಿಂಪತಿ ಇದೆ ಎಂದರೆ, ಕೇಂದ್ರದಲ್ಲಿ ಮೋದಿಯವರು ಮಹಿಳಾ ಮೀಸಲಾತಿ ಬಗ್ಗೆ ‌ಮಾತನಾಡುತ್ತಾರೆ. ಇಂಥ ಸಂದರ್ಭದಲ್ಲಿ ಮಂಗಳಾ ಅಂಗಡಿ, ಸುಮಲತಾಗೆ ಟಿಕೆಟ್ ಕೊಡಲಿಲ್ಲ. ಹಾಗಾಗಿ, ಬೀಗರ ಟಿಕೆಟ್ ಶೆಟ್ಟರ್ ತಪ್ಪಿಸಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದರು.

ಇನ್ನು ಮಹಿಳಾ ಕೋಟಾದಲ್ಲಿ ನಾನು ಸಚಿವೆ ಆಗಿದ್ದೇನೆ. ನಾನು ಮತ್ತು ರೂಪಕಲಾ ಇಬ್ಬರೇ ರಾಜ್ಯದಲ್ಲಿ ಎರಡನೇ ಸಲ ಶಾಸಕರಾಗಿ ಆಯ್ಕೆಯಾದವರು. ರೂಪಕಲಾ ತಂದೆ ಮುನಿಯಪ್ಪ ಸಚಿವರಾಗಿದ್ದಾರೆ. ಹೀಗಾಗಿ ನಾನು ರಾಜ್ಯದಲ್ಲಿ ಸಚಿವೆ ಆಗಿದ್ದೇನೆ. ಯಾರೋ ಹೇಳಿದ್ದು, ಪ್ರೆಸ್ ನೋಟ್ ಕಳುಹಿಸಿದ್ದಾರೆ. ಹಾಗಾಗಿ, ಮಂಗಳಾ ಅಂಗಡಿ ಬಗ್ಗೆ ಅನುಕಂಪ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದರು.

ಇನ್ನು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧವೂ ವಾಗ್ದಾಳಿ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ಜಗದೀಶ ಶೆಟ್ಟರ್ 6 ಸಲ ಹುಬ್ಬಳ್ಳಿಯಲ್ಲಿ ಶಾಸಕರಾಗಿ ಗೆದ್ದು ಬಂದಿದ್ದಾರೆ‌. ಈಗ ಬೆಳಗಾವಿಗೆ ಬಂದು ಕರ್ಮ ಭೂಮಿ ಎಂದರೆ ಇಲ್ಲಿನ ಮುಗ್ಧ ಜನ ನಂಬುತ್ತಾರಾ? ಮೊದಲು ಮನೆ ವಿಳಾಸ ಹೇಳಲಿ? ಆಮೇಲೆ ಕರ್ಮ ಭೂಮಿ ಬಗ್ಗೆ ಹೇಳಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ - Summons To Lakshmi Hebbalkar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.