ETV Bharat / state

ಬೆಂಗಳೂರು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ದಾಖಲೆ ಪರಿಶೀಲನೆ

author img

By ETV Bharat Karnataka Team

Published : Jan 20, 2024, 9:30 PM IST

ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆನೇಕಲ್: ಬೆಂಗಳೂರಿನ‌ ತಾಲೂಕು ಕಚೇರಿಗಳಿಗೆ ದಿಡೀರ್ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರ, ತಾಲೂಕು ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಾವಿರಾರು ಕಡತಗಳು ವಿಲೇವಾರಿಯಾಗದೇ ಇರುವುದು ಬೆಳಕಿಗೆ ಬಂದಿದೆ.

ವರ್ಷಗಳ ಹಳೆಯ ಕಡತಗಳು ವಿಲೇವಾರಿಯಾಗದೆ ಇರುವುದರಿಂದ ಹತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಭೂಮಿ ಶಾಖೆಯಲ್ಲಿ ಆಗಿರುವ ಪಹಣಿ ತಿದ್ದುಪಡಿ ಒಳಗೊಂಡಂತೆ ಆನೇಕಲ್ ತಾಲೂಕು ಕಚೇರಿಯಲ್ಲೇ ಅತಿ ಹೆಚ್ಚು ಕಡತಗಳು ವಿಲೇವಾರಿಯಾಗದೇ ನಿಂತಿರುವ ಬಗ್ಗೆ ಅನುಮಾನ ವ್ಯಕ್ತ ಪಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯನಾಯಕ್ ರಿಂದ ಪ್ರತಿ ಕಡತದ ಮಾಹಿತಿ ಪಡೆದರು. ಬೆಳಗ್ಗೆ 11 ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಪ್ರತಿ ಶಾಖೆಯಲ್ಲೂ ಕಡತಗಳನ್ನು ಪರಿಶೀಲನೆ ನಡೆಸಿದರು.

ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ವಿಳಂಬ, ಹಣಕ್ಕೆ ಬೇಡಿಕೆ ಸೇರಿದಂತೆ ರೈತ ಸಾರ್ವಜನಿಕರಿಂದ ಸಾವಿರಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಇತ್ತೀಚಿನ ಪ್ರಕರಣಗಳು: ಮಂಗಳವಾರ ಲೋಕೋಪಯೋಗಿ, ಪಂಚಾಯತ್ ಅಭಿವೃದ್ಧಿ, ಬೆಸ್ಕಾಂ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧದ 6 ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿದ್ದರು. ಬೆಂಗಳೂರು ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ, ಕೋಟ್ಯಂತರ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಬೆಂಗಳೂರು ನಗರದ ಕೆ.ಆರ್ ವೃತ್ತದಲ್ಲಿರುವ ಬೆಸ್ಕಾಂನ ಮುಖ್ಯ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್(ಓಪಿ) ಎಂ.ಎಲ್. ನಾಗರಾಜ್ ಅವರಿಗೆ ಸೇರಿದ 7 ಸ್ಥಳಗಳಲ್ಲಿ ಶೋಧಕಾರ್ಯ ಕೈಗೊಂಡು ಅವರಿಗೆ ಸಂಬಂಧಿಸಿದ ಅಂದಾಜು 5.35 ಕೋಟಿ ರೂ. ಮೌಲ್ಯದ 13 ನಿವೇಶನಗಳು, 2 ಮನೆ, ಕೃಷಿ ಜಮೀನು, 6.77 ಲಕ್ಷ ರೂ. ಚರಾಸ್ತಿ, 16.44 ಲಕ್ಷ ರೂ. ನಗದು, 13.50 ಲಕ್ಷ ರೂ. ಚಿನ್ನಾಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿ 63.66 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದೇವನಹಳ್ಳಿ ತಾಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಡಿ.ಎಂ. ಪದ್ಮನಾಭ ಅವರಿಗೆ ಸೇರಿದ 5.35 ಕೋಟಿ ಮೌಲ್ಯದ ಎರಡು ಮನೆ, 8-18 ಎಕರೆ ಕೃಷಿ ಜಮೀನು ಮತ್ತು ಒಂದು ಫಾರ್ಮ್ ಹೌಸ್, 2.62 ಲಕ್ಷ ರೂ.ದ ಚರಾಸ್ತಿ, 17.24 ಲಕ್ಷ ರೂ. ನಗದು, 28.75 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ಇತರ ವಸ್ತುಗಳು ಸೇರಿ 5.98 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದರು.

ಇದನ್ನೂ ಓದಿ: ಪ್ರಾಣ ಪ್ರತಿಷ್ಠಾಪನಾ ದಿನ ರಾಜ್ಯದಲ್ಲಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಸೂಚನೆ: ಸಚಿವ ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.