ETV Bharat / state

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ: ಬಿಜೆಪಿ‌ ಸಭಾತ್ಯಾಗದ ನಡುವೆ ವಿಧೇಯಕಕ್ಕೆ ಪರಿಷತ್ ಅಂಗೀಕಾರ

author img

By ETV Bharat Karnataka Team

Published : Feb 22, 2024, 8:12 PM IST

ವಿಧಾನ ಪರಿಷತ್
ವಿಧಾನ ಪರಿಷತ್

ಬಿಜೆಪಿ‌ ಸಭಾತ್ಯಾಗದ ನಡುವೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ಬೆಂಗಳೂರು : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ ವಿಧೇಯಕ)-2024 ಅನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವ ಬೇಡಿಕೆ ಪರಿಗಣಿಸದ ಸರ್ಕಾರದ ನಿರ್ಧಾರ ಖಂಡಿಸಿ, ಬಿಜೆಪಿ ಸಭಾತ್ಯಾಗ ಮಾಡಿದ್ದು, ಪ್ರತಿಪಕ್ಷದ ಸಭಾತ್ಯಾಗದ ನಡುವೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪರವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ 2024 ಅನ್ನು ಮಂಡನೆ ಮಾಡಿದರು. ನಂತರ ಬಿಲ್ ಕುರಿತು ವಿವರಣೆ ನೀಡಿದ ಡಿಸಿಎಂ, ಈಗಾಗಲೇ ಮಂಗಳೂರಲ್ಲಿ ಈ ವ್ಯವಸ್ಥೆ ಇದೆ. ಇಡೀ ದೇಶದಲ್ಲಿ ಪ್ರೀಮಿಯಂ ಎಫ್‌ಎಆರ್ (ಫ್ಲೋರ್ ಏರಿಯಾ ರೇಶಿಯೋ) ಇದೆ.

ಟಿಡಿಆರ್ ವ್ಯವಸ್ಥೆಯನ್ನು ನಾವು ಬಿಟ್ಟಿಲ್ಲ. ಮೂಲ ಸೌಕರ್ಯ ಹೆಚ್ಚಳ ಮಾಡುವ ಕಾರಣಕ್ಕೆ ನಾವು ಪ್ರೀಮಿಯಂ ಎಫ್‌ಎಆರ್ ತಂದಿದ್ದೇವೆ. ಪ್ರೀಮಿಯಂ ಎಫ್ಎಆರ್ 0.4 ಟೈಮ್ಸ್ ಹೆಚ್ಚುವರಿಗೆ ಮಾಡಿಕೊಳ್ಳಬಹುದು. ಈಗಾಗಲೇ ಕಾನೂನು ಇದೆ. ಮಂಗಳೂರಿನವರು ಮಾತ್ರ ಈ ಕಾನೂನು ಬಳಸಿಕೊಳ್ಳುತ್ತಿದ್ದಾರೆ. ಇತರ ಕಡೆಯವರೂ ಬಳಸಿಕೊಳ್ಳಲಿ ಎಂದು ತಿದ್ದುಪಡಿ ತರಲಾಗಿದೆ.

ಬೆಂಗಳೂರಿನಲ್ಲಿ ಹಣವಿಲ್ಲದೆ ಅಭಿವೃದ್ಧಿ ಮಾಡಲಾಗಲ್ಲ. ಒಂದು ಫ್ಲೋರ್ ಅನುಮತಿ ಪಡೆದು ಎರಡು ಮೂರು ಫ್ಲೋರ್ ಕಟ್ಟಿದರೆ ಸಕ್ರಮ ಮಾಡಬಹುದು. ಆದರೆ ಹತ್ತು ಫ್ಲೋರ್ ಕಟ್ಟಲು ಅವಕಾಶವಿಲ್ಲ. ಅವನ್ನು ಸಕ್ರಮಗೊಳಿಸಲಾಗಲ್ಲ. ಅಕ್ಯುಪೆನ್ಸಿ ಸರ್ಟಿಫಿಕೆಟ್ ಇಲ್ಲದೇ ಯಾವ ಕಂಪನಿಯೂ ಅಂತಹ ಕಟ್ಟಡಗಳಿಗೆ ಬರಲ್ಲ. ಅಕ್ಯುಪೆನ್ಸಿ ಸರ್ಟಿಫಿಕೆಟ್ ಮಸ್ಟ್ ಆಗಲಿದೆ. ಹಾಗಾಗಿ ನಾವು ಈ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದರು.

ಬಿಲ್ ಮೇಲೆ ಮಾತನಾಡಿದ ಬಿಜೆಪಿ ಸದಸ್ಯ ನವೀನ್, ತಿದ್ದುಪಡಿ ಕೆಲ ಅಂಶ ಒಪ್ಪಿತವಾದರೂ ಇದರಲ್ಲಿ ಸಾಕಷ್ಟು ಚರ್ಚೆ ಅಗತ್ಯವಿದೆ. ಮಾಲ್ ಆಫ್ ಏಷಿಯಾಗೆ ಯಾರು ಅನುಮತಿ ಕೊಟ್ಟಿದ್ದಾರೋ ಆ ಅಧಿಕಾರಿಯ ಅಪ್ರಿಸಿಯೇಷನ್ ಮಾಡಬೇಕು. ಅಷ್ಟು ದೊಡ್ಡ ಮಾಲ್​ಗೆ ಒಂದೇ ಎಂಟ್ರಿ ಒಂದೇ ಎಕ್ಸಿಟ್ ಇದೆ. 2500 ಕಾರು ಒಂದೇ ಕಡೆ ಒಳಗೆ ಹೋಗಬೇಕು. ಒಂದೇ ಕಡೆ ಹೊರಗೆ ಬರಬೇಕು ಎಂದರೆ ಸಂಚಾರ ದಟ್ಟಣೆ ಹೇಗಾಗಬಹುದು. ಅಧಿಕಾರಿಗಳ ಕೈಗೆ ಎಲ್ಲ ಅಧಿಕಾರ ಸಿಕ್ಕರೆ ಇಂತಹ ಸಮಸ್ಯೆ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಬಿಲ್ ಬಗ್ಗೆ ಚರ್ಚಿಸಲು ಸೆಲೆಕ್ಟ್ ಕಮಿಟಿಗೆ ವಹಿಸುವುದು ಸೂಕ್ತ ಎಂದರು. ಬಿಜೆಪಿಯ ಕೇಶವ ಪ್ರಸಾದ್, ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೂಡ ಈ ಬಿಲ್ ಬಗ್ಗೆ ಚರ್ಚೆಗೆ ಸೆಲೆಕ್ಟ್ ಕಮಿಟಿ ಕೊಡಬೇಕು ಎನ್ನುವ ಬೇಡಿಕೆ ಇಟ್ಟರು.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಬೇಡಿಕೆಗೆ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲವನ್ನೂ ಸೆಲೆಕ್ಟ್ ಕಮಿಟಿಗೆ ಹಾಕಿ ಕಾಲಹರಣ ಮಾಡಬಾರದು. ಬೇಕಾದ ಸ್ಪಷ್ಟೀಕರಣ ಪಡೆದು ಬಿಲ್ ಪಾಸ್​ಗೆ ಮನವಿ ಮಾಡಿದರು. ನಂತರ ಜೆಡಿಎಸ್ ಸದಸ್ಯರೇ ಸೆಲೆಕ್ಟ್ ಕಮಿಟಿಗೆ ಪ್ರಸ್ತಾಪ ಮಾಡಿದ್ದರೂ ಜೆಡಿಎಸ್ ಉಪನಾಯಕ ಶರವಣ ಬಿಲ್ ಸ್ವಾಗತ ಮಾಡಿದರು. ಇದರಿಂದಾಗಿ ಜೆಡಿಎಸ್ ಬಿಲ್ ಪರವಾಗಿ ನಿಲುವು ವ್ಯಕ್ತಪಡಿಸಿತು.

ನಂತರ ಸದಸ್ಯರ ಚರ್ಚೆಗೆ ಉತ್ತರ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಈ ಬಿಲ್ ಸರಳೀಕರಣ ಮಾಡುತ್ತಿದ್ದೇವೆ. ಮಂಗಳೂರು ಮಾತ್ರವಲ್ಲ, ಬೇರೆ ಬೇರೆ ನಗರದಲ್ಲಿಯೂ ಈ ರೀತಿಯ ಕಾನೂನು ಮಾಡಲು ಅವಕಾಶ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ 40 ಪರ್ಸೆಂಟ್ ಹಣ ಬರಲಿದೆ.

ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ. ಸರಳೀಕರಣವನ್ನು ಮಾಡುತ್ತಿದ್ದೇನೆ. ಸ್ಥಳೀಯ ಆಡಳಿತಕ್ಕೆ ಬಲ ನೀಡುತ್ತಿದ್ದೇವೆ. ಬಾಂಬೆ, ಹೈದರಾಬಾದ್ ಇತರ ನಗರದಲ್ಲಿಯೂ ಇದೇ ವ್ಯವಸ್ಥೆ ಇದೆ. ನಗರಗಳು ಬೆಳೆಯಬೇಕು. ಹುಬ್ಬಳ್ಳಿ-ಧಾರವಾಡ ದೊಡ್ಡ ಅವಳಿ ನಗರ. ಆದರೆ ಅಲ್ಲಿ ಒಳ್ಳೆ ಗಗನಚುಂಬಿ ಕಟ್ಟಡ ಬಂದಿಲ್ಲ. ಅಂತಹ ಬಿಲ್ಡಿಂಗ್ ಬಂದರೆ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗಲಿದೆ. ಬೆಂಗಳೂರು ನಗರಕ್ಕೆ ಮಾತ್ರವಲ್ಲ. ಎಲ್ಲ ನಗರಕ್ಕೂ ಅನ್ವಯವಾಗುವಂತೆ ಈ ಬಿಲ್ ತರಲಾಗುತ್ತಿದೆ ಎಂದರು.

ಸರ್ಕಾರಕ್ಕೆ ಲಾಸ್ ಆಗುತ್ತದೆ: ಈ ವಿಧೇಯಕ ಸೋಲಿಸಿದರೂ ಓಕೆ, ಸೆಲೆಕ್ಟ್ ಕಮಿಟಿಗೆ ನೀಡಿದರೂ ಓಕೆ. ಮೊದಲೇ ಇದು ಆ್ಯಕ್ಟ್ ನಲ್ಲಿದೆ. 40 ಪರ್ಸೆಂಟ್ ಆದರೂ ಸರ್ಕಾರಕ್ಕೆ ಇದರಿಂದ ದುಡ್ಡು ಬರುತ್ತದೆ. ಗೈಡೆನ್ಸ್ ವ್ಯಾಲ್ಯೂಗೆ ತಕ್ಕ ಹಾಗೆ ಮಾಡ್ತಾ ಇದ್ದೇವೆ. ನೀವು ಶಿವಕುಮಾರ್ ನ ಸೋಲಿಸಬೇಕು ಅಂತ ಈಗ ವಿಧೇಯಕ ಸೋಲಿಸಬಹುದು. ಆದರೆ ನೀವು ಹೀಗೆ ಮಾಡಿದರೆ ಸರ್ಕಾರಕ್ಕೆ ಲಾಸ್ ಆಗುತ್ತದೆ ಎಂದರು.

ಡಿಸಿಎಂ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಸಚೇತಕ ರವಿಕುಮಾರ್, ನಮಗೆ ಎಫ್ಆರ್​ಎ ವಿಷಯ ಹೊಸದು. ಬಹುತೇಕ ಸದಸ್ಯರಿಗೆ ಹೊಸದು. ಹೀಗಾಗಿ ಪರಿಶೀಲನೆಗೆ ಒಪ್ಪಿಸಬೇಕು. ಈ ಬಿಲ್​ನ ನಾವು ವಿರೋಧಿಸಲ್ಲ. ಆದರೆ ಸಾರ್ವಜನಿಕ ಚರ್ಚೆಗೆ ಬಿಡಿ ಎಂದರು.

ನಂತರ ತಮ್ಮ ಪಕ್ಷದ ನಿಲುವು ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜನವಸತಿ ಹೆಚ್ಚಾದಾಗ ಸಂಚಾರ ಸಮಸ್ಯೆ ಆಗಲಿದೆ. ಅಗ್ನಿ ಅವಘಡದಂತಹ ವೇಳೆ ಅಲ್ಲಿಗೆ ಅಗ್ನಿಶಾಮಕ ವಾಹನ ಬರಲೂ ಕಷ್ಟವಾಗುವ ವಾತಾವರಣ ಇದೆ. ಇಲ್ಲಿ ಸಾಕಷ್ಟು ಚರ್ಚೆ ಅಗತ್ಯವಿದೆ. ಹಾಗಾಗಿ ಬಿಲ್ ತಡೆ ಹಿಡಿದು ಚರ್ಚಿಸಿ ಮತ್ತೆ ತನ್ನಿ. ಇನ್ನಷ್ಟು ಚರ್ಚೆ ಆಗಬೇಕಿದೆ. ಅಧಿಕಾರಿ, ಶಾಸಕರ ಜೊತೆ ಚರ್ಚಿಸಿ ಮತ್ತೆ ನಾಳೆ ಮಂಡಿಸುತ್ತೀರಾ ನೋಡಿ ಎಂದು ಹೇಳಿದರು.

ದೊಡ್ಡ ಮಟ್ಟದ ಭ್ರಷ್ಟಾಚಾರ ಆಗುವ ಸಾಧ್ಯತೆ ಇದೆ: ಆದರೆ ಬಿಜೆಪಿ ಬೇಡಿಕೆ ಒಪ್ಪದ ಡಿಸಿಎಂ ಡಿ ಕೆ ಶಿವಕುಮಾರ್, ಕಾನೂನುಬಾಹಿರವಾಗಿ ಕಟ್ಟಡ ಕಟ್ಟುವ ಬದಲು ಕಾನೂನುಬದ್ಧವಾಗಿ ಕಟ್ಟಲು ಅವಕಾಶ ಸಿಗಲಿದೆ. ಸರ್ಕಾರಕ್ಕೂ ಹಣ ಸಿಗಲಿದೆ. ಬಿಲ್ ಪಾಸ್ ಮಾಡಿ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ,‌ ಉಪ ಮುಖ್ಯಮಂತ್ರಿಗಳು ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಹೊಸ ವಿಧೇಯಕದಿಂದ ದೊಡ್ಡ ಮಟ್ಟಿಗಿನ ಭ್ರಷ್ಟಾಚಾರ ಆಗುವ ಸಾಧ್ಯತೆ ಇದೆ ಎಂದರು.

ವಿಸ್ತೃತವಾದ ಚರ್ಚೆ ಮಾಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಮೊಂಡುವಾದ ಮಾಡುತ್ತಿದೆ. ಹೀಗಾಗಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಪ್ರಕಟಿಸಿದರು. ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರೂ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ಸದಸ್ಯರು ಮಾತ್ರ ಸದನದಲ್ಲಿ ಹಾಜರಿದ್ದರು. ನಂತರ ಬಿಜೆಪಿ ಸಭಾತ್ಯಾಗದ ನಡುವೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ-2024 ಅನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಸಭಾತ್ಯಾಗದ ವಿಚಾರದಲ್ಲಿ ಗೊಂದಲ : ರೀ.. ಸಭಾತ್ಯಾಗ ಮಾಡುತ್ತೇವೆ ಅಂತಾ ಪ್ರಕಟಿಸಲು ನೀವ್ಯಾರಿ? ಸಭಾತ್ಯಾಗ ಮಾಡುತ್ತೇವೆ ಅಂತ ನೀವು ಹೇಗೆ ಹೇಳ್ತಿರಾ? ಎಂದು ಬಿಜೆಪಿ ಸಚೇತಕ ರವಿಕುಮಾರ್ ಮೇಲೆ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗರಂ ಆದ ಘಟನೆ ನಡೆಯಿತು. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ತಿದ್ದುಪಡಿ ವಿಧೇಯಕದ ಮೇಲೆ ಚರ್ಚೆಗೆ ಬಿಜೆಪಿಯಲ್ಲಿ ಕೆಲವರಿಂದ ವಿರೋಧ, ಕೆಲವರಿಂದ ಭಾಗಶಃ ಸ್ವಾಗತ ವ್ಯಕ್ತವಾಯಿತು. ಬಿಜೆಪಿಯಲ್ಲೇ ಬಿಲ್ ಬಗ್ಗೆ ಗೊಂದಲವಾಯಿತು. ಈ ವೇಳೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ರವಿಕುಮಾರ್ ಮಾತು ಮುಗಿಸುತ್ತಿದ್ದಂತೆ ಸಭಾತ್ಯಾಗ ಮಾಡ್ತೇವೆ ಎಂದರು.

ತಕ್ಷಣ ಎದ್ದು ನಿಂತು ನಾವು ಬಿಲ್ ವಿರೋಧಿಸಿ ಸಭಾತ್ಯಾಗ ಮಾಡ್ತೇವೆ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದರು. ಬಳಿಕ ರವಿಕುಮಾರ್ ಮೇಲೆ ಗರಂ ಆದ ಕೋಟ, ವಿಪಕ್ಷ ನಾಯಕ ನಾನು ಸಭಾತ್ಯಾಗ ಮಾಡ್ತೇವೆ ಅಂತಾ ಹೇಳಬೇಕು, ನೀವ್ಯಾರ್ರಿ ಸಭಾತ್ಯಾಗ ಮಾಡ್ತೀವಿ ಅಂತ ಹೇಳೋಕೆ ಎಂದು ಗರಂ ಆದರು. ಪೂಜಾರಿ ಮಾತಿಗೆ ತುಟಿಕ್​ ಪಿಟಿಕ್ ಎನ್ನದ ರವಿಕುಮಾರ್ ಸದನದಲ್ಲಿ ಸದಸ್ಯರ ಜೊತೆ ಹೊರನಡೆದರು.

ಇದನ್ನೂ ಓದಿ : ನೋಂದಣಿಗೆ ಇ-ಖಾತೆ ಕಡ್ಡಾಯಗೊಳಿಸುವ 2024 ಸಾಲಿನ‌ ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.