ETV Bharat / state

ಯುಗಾದಿ: ಆರ್​ಎಸ್​ಎಸ್​ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ-ಬಿ.ವೈ. ರಾಘವೇಂದ್ರ ಭಾಗಿ - RSS Program

author img

By ETV Bharat Karnataka Team

Published : Apr 9, 2024, 1:39 PM IST

Updated : Apr 9, 2024, 2:55 PM IST

ಕೆ.ಎಸ್. ಈಶ್ವರಪ್ಪ-ಬಿ.ವೈ. ರಾಘವೇಂದ್ರ
ಕೆ.ಎಸ್. ಈಶ್ವರಪ್ಪ-ಬಿ.ವೈ. ರಾಘವೇಂದ್ರ

ಶಿವಮೊಗ್ಗದಲ್ಲಿ ಯುಗಾದಿ ಹಬ್ಬದ ನಿಮಿತ್ತ ಆರ್​ಎಸ್ಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ನಾಯಕ ಕೆ.ಎಸ್​​. ಈಶ್ವರಪ್ಪ ಪಾಲ್ಗೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಕೆ.ಎಸ್.ಈಶ್ವರಪ್ಪ-ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಆರ್​​​.ಎಸ್.ಎಸ್​​​. ಯುಗಾದಿ ಉತ್ಸವದಲ್ಲಿ ಬಿಜೆಪಿ ಬಂಡಾಯ ನಾಯಕ ಕೆ.ಎಸ್​​.ಈಶ್ವರಪ್ಪ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ, ಬಿಜೆಪಿಯಿಂದ ಅಂತರ‌ಕಾಯ್ದುಕೊಂಡಿರುವ ಈಶ್ಬರಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ.

ಕೆ.ಎಸ್. ಈಶ್ವರಪ್ಪ ಇಂದು ಆರ್​ಎಸ್​ಎಸ್​ನ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಬೇವು-ಬೆಲ್ಲ ಸ್ವೀಕರಿಸಿ, ತೆರಳಿದ್ದಾರೆ. ಇಲ್ಲಿ ಮತ್ತೊಂದು ವಿಷಯವೆಂದರೆ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕೂಡ ಇದೇ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ, ಈಚೆ ಬದಿ ಈಶ್ವರಪ್ಪ ಕೂತಿದ್ದರೆ, ಆಚೆ ಬದಿಯಲ್ಲಿ ಬಿ.ವೈ. ರಾಘವೇಂದ್ರ ಕೂತಿದ್ದು ನಾನೊಂದು ತೀರ – ನೀನೊಂದು ತೀರ ಎಂಬುವಂತಾಗಿತ್ತು. ಇದು ಆರ್​ಎಸ್​ಎಸ್​ನ ಪ್ರಮುಖರು ಸೇರಿದಂತೆ, ಎಲ್ಲ ಕಾರ್ಯಕರ್ತರಿಗೂ ಕಸಿವಿಸಿ ಉಂಟು ಮಾಡಿತು. ಆರ್.ಎಸ್.ಎಸ್. ಮುಖಂಡರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೇ ಉತ್ಸವ ಮುಗಿಸಿ ಹೊರಟರು.

ಈಶ್ವರಪ್ಪ ಆರ್​ಎಸ್​ಎಸ್​ನ ಕಟ್ಟಾಳುವಾಗಿದ್ದರೂ ಕೂಡ, ಸಮವಸ್ತ್ರ, ಖಾಕಿ ಪ್ಯಾಂಟ್ ಧರಿಸದೇ ಕೇವಲ ಕಪ್ಪು ಟೋಪಿ ಧರಿಸಿ, ಬಿಳಿ ಜುಬ್ಬಾ ಪೈಜಾಮ್​​​ನಲ್ಲಿ ಇಂದು ಆಗಮಿಸಿದ್ದು ವಿಶೇಷವಾಗಿತ್ತು. ಬಿ.ವೈ. ರಾಘವೇಂದ್ರ ಆರ್​ಎಸ್​ಎಸ್​ನ ಸಮವಸ್ತ್ರದಲ್ಲಿಯೇ ಆಗಮಿಸಿದ್ದು, ಅಲ್ಲಿ ನೆರೆದಿದ್ದ ಆರ್​ಎಸ್​ಎಸ್​ನ ಕಾರ್ಯಕರ್ತರು, ರಾಘವೇಂದ್ರ ಅವರ ಜೊತೆ ಸೆಲ್ಫಿ ಹಾಗೂ ಫೋಟೋಗೆ ಮುಗಿ ಬಿದ್ದಿದ್ದರು.

ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಎಲ್ಲ ಹಿಂದೂಗಳು ಒಂದಾಗಬೇಕು ಎಂಬ ಸ್ಫೂರ್ತಿ ನೀಡುವ ಯುಗಾದಿ ಹಬ್ಬ ಇದಾಗಿದೆ. ಆರ್​ಎಸ್​​ಎಸ್​​ನ ಯುಗಾದಿ ಉತ್ಸವ ಆಚರಣೆಯಲ್ಲಿ ನಾನು ಒಬ್ಬ ಸ್ವಯಂ ಸೇವಕನಾಗಿ ಸಂತೋಷದಿಂದ ಬಂದಿದ್ದೇನೆ ಎಂದು ಹೇಳಿದರು. ಇದೇ ವೇಳೆ, ಯುಗಾದಿ ಉತ್ಸವದಂದು ಒಟ್ಟಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸದೇ ಹೊರಟುಬಿಟ್ಟರು.

ನಂತರ ಮಾತನಾಡಿದ ಬಿ.ವೈರಾಘವೇಂದ್ರ, ಈ ಉತ್ಸವದಲ್ಲಿ ನಾನು ಒಬ್ಬ ಎಂಪಿಯಾಗಲಿ, ಪುರಸಭೆ ಸದಸ್ಯನಾಗಲಿ, ಬಿಜೆಪಿ ಅಭ್ಯರ್ಥಿಯಾಗಿ ಭಾಗಿಯಾಗಿಲ್ಲ. ಆರ್​ಎಸ್​ಎಸ್​ನ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ವರ್ಷದಲ್ಲಿ ನಡೆಯುವ 6 ಉತ್ಸವಗಳಲ್ಲಿ ಯುಗಾದಿ ಉತ್ಸವವೂ ಕೂಡ ಒಂದಾಗಿದ್ದು, ಯುಗಾದಿ ಉತ್ಸವದ ಜೊತೆಗೆ ಆರ್​ಎಸ್​ಎಸ್​ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ಜನ್ಮ ದಿನವೂ ಕೂಡ ಇಂದಾಗಿದೆ. ಈ ಹಿನ್ನೆಲೆಯಲ್ಲಿಯೂ ಕೂಡ ಇಂದಿನ ಉತ್ಸವ ಮಹತ್ವದ್ದಾಗಿದೆ. ನಮ್ಮ ಹಿಂದೂಗಳ ಯುಗಾದಿ ಹಬ್ಬ ಹೊಸ ವರ್ಷ ಕೂಡ ಆಗಿದೆ. ನಾನಿಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಪ್ರಚಾರದ ವೇಳೆ ಭದ್ರತಾ ಲೋಪ ಪ್ರಕರಣ: ಗನ್​ ಹೊಂದಿದ್ದ ವ್ಯಕ್ತಿ ಹೇಳಿದ್ದೇನು? - Security Lapse

Last Updated :Apr 9, 2024, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.