ETV Bharat / state

ಬೆಂಗಳೂರಲ್ಲಿ 18 ಲಕ್ಷ ಉದ್ಯೋಗಿಗಳಿರುವ ಐಟಿ ಕ್ಷೇತ್ರವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ: ಎಸ್. ದತ್ತಾತ್ರಿ - bjp allegation

author img

By ETV Bharat Karnataka Team

Published : Apr 4, 2024, 7:28 PM IST

Etv Bharat
Etv Bharat

ಬೆಂಗಳೂರು ಇಡೀ ವಿಶ್ವದ ಅತಿ ದೊಡ್ಡ ಐಟಿ ಹಬ್ ಆಗಿ ಗುರುತಿಸಿಕೊಂಡಿದೆ. ದೇಶದಲ್ಲಿ 54 ಲಕ್ಷ ಸಾಫ್ಟ್​ವೇರ್ ಉದ್ಯೋಗಿಗಳಿದ್ದು, ಈ ಪೈಕಿ 18 ಲಕ್ಷ ಜನ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಸಾಫ್ಟ್​ವೇರ್ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಐಟಿ ಕ್ಷೇತ್ರಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಇವತ್ತು ಎಲ್ಲ ಐಟಿ ಬಾಂಧವರ ಸ್ಥಿತಿ ಚಿಂತಾಜನಕವಾಗಿದೆ. ಇದು ಅತ್ಯಂತ ಖೇದಕರ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಟೀಕಿಸಿದರು.

ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿಗೆ ಭಯೋತ್ಪಾದಕರು ಅತಿ ಸುಲಭವಾಗಿ ಬರುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದಿಂದ ನಗರದಲ್ಲಿ ಆತಂಕ ಹೆಚ್ಚಿದೆ. ಬೆಂಗಳೂರು ಭಯೋತ್ಪಾದಕರ ಸ್ಥಳವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜೊತೆಗೆ ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ಬರದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಉದ್ಯಮಿಗಳು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಬಂದರೆ ಎಲ್ಲ ಸಹಕಾರ ಕೊಡುವುದಾಗಿ ಕೇರಳದ ಸಚಿವರು ಆಹ್ವಾನ ಕೊಟ್ಟಿದ್ದಾರೆ. ರಾಜ್ಯ ಸರ್ಕಾರವು ನಿರ್ಲಕ್ಷ್ಯ ವಹಿಸಿದ್ದು, ಕುಡಿಯುವ ನೀರಿನ ಕುರಿತು ಸಮರ್ಪಕ ನೀತಿ ಇಲ್ಲದೇ ಇರುವುದೇ ಇದಕ್ಕೆ ಕಾರಣ. ನೀರಿನ ಟ್ಯಾಂಕರ್​​ಗಳಿಗೂ ಸರಿಯಾದ ನೀತಿ ರೂಪಿಸಿಲ್ಲ. ಐಟಿ ಉದ್ಯೋಗಿಗಳಿರುವ ಫ್ಲ್ಯಾಟ್‍ಗಳಲ್ಲಿ ಇವತ್ತು ನೀರು ಸಿಗುತ್ತಿಲ್ಲ ಎಂದು ಆರೋಪಿಸಿದರು.

ಸಾಫ್ಟ್​ವೇರ್ ರಂಗದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಗರಿಷ್ಠ ಆದಾಯ ನೀಡುವ ಸಾಫ್ಟ್​ವೇರ್ ರಂಗದ ಕುರಿತು ರಾಜ್ಯ ಸರ್ಕಾರ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂದು ದತ್ತಾತ್ರಿ ಆರೋಪಿಸಿದರು. ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಫ್ಟ್​ವೇರ್ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಈ ಕ್ಷೇತ್ರದ ಕುರಿತು ಸಚಿವರು ಒಂದು ಪೈಸೆ ತಲೆಕೆಡಿಸಿಕೊಂಡಿಲ್ಲ. ಅವರು ಸೋಷಿಯಲ್ ಮೀಡಿಯಾ ಮತ್ತು ಟ್ವೀಟ್ ಸಚಿವರಾಗಿ ಬದಲಾಗಿದ್ದಾರೆ ಲೇವಡಿ ಮಾಡಿದರು.

ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿ ಅಂತಾನೇ ಅಮಿತ್ ಶಾ ನನ್ನನ್ನು ಭೇಟಿಯಾಗಿಲ್ಲ: ಈಶ್ವರಪ್ಪ - SHIVAMOGGA CONSTITUENCY

ಬೆಂಗಳೂರು ಇಡೀ ವಿಶ್ವದ ಅತಿ ದೊಡ್ಡ ಐಟಿ ಹಬ್ ಆಗಿ ಗುರುತಿಸಿಕೊಂಡಿದೆ. ಸಾಫ್ಟ್​ವೇರ್ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ 54 ಲಕ್ಷ ಉದ್ಯೋಗಿಗಳಿದ್ದರೆ, ಆ ಪೈಕಿ 18 ಲಕ್ಷ ಜನ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಹೈದರಾಬಾದ್‍ನಲ್ಲಿ 9 ಲಕ್ಷ ಮತ್ತು ಚೆನ್ನೈನಲ್ಲಿ 10 ಲಕ್ಷ ಜನ ಉದ್ಯೋಗಿಗಳಿದ್ದಾರೆ. ಇಡೀ ಭಾರತದಲ್ಲಿ ಬೆಂಗಳೂರನ್ನು ದೇಶದ ಐಟಿ ಹಬ್, ಐಟಿ ರಾಜಧಾನಿ ಎಂದು ಕರೆಯುತ್ತಿದ್ದಾರೆ. ಭಾರತದ ಜಿಡಿಪಿಯಲ್ಲೂ ಬೆಂಗಳೂರಿನ ಐಟಿ ಹಬ್‍ನ ಕೊಡುಗೆ ಅತ್ಯಂತ ಮಹತ್ವವುಳ್ಳದ್ದು ಎಂದು ಅವರು ಹೇಳಿದರು.

ಕಳೆದ ವರ್ಷ 5.21 ಲಕ್ಷ ಕೋಟಿ ಆದಾಯವನ್ನು ಐಟಿ ಕ್ಷೇತ್ರ ಪಡೆದಿತ್ತು. ಭಾರತದ ಒಟ್ಟು ರಫ್ತಿನಲ್ಲಿ ಶೇ 12ರಷ್ಟು ಪಾಲು ಕರ್ನಾಟಕದ ಐಟಿ ಹಬ್‍ನದ್ದು. ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ಟಿಸಿಎಸ್, ವಿಪ್ರೋ, ಇನ್ಫೋಸಿಸ್, ಮೈಂಡ್‍ಟ್ರೀ ಮತ್ತಿತರ 10-12 ಕಂಪೆನಿಗಳು ಸೇರಿ 67 ಸಾವಿರ ಕಂಪೆನಿಗಳು ಬೆಂಗಳೂರಿನಲ್ಲಿ ನೆಲೆಸಿವೆ ಎಂದು ತಿಳಿಸಿದರು.

ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್ ಕುಮಾರ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಜಿ.ಎಸ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಬಿಜೆಪಿಯ ಸರ್ವಾಧಿಕಾರಿ ಧೋರಣೆ ಖಂಡಿಸಿ ಏ. 7ರಂದು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ: ಜಗದೀಶ್ ಸದಂ - AAP PROTEST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.