ETV Bharat / state

ಜಗದೀಶ್ ಶೆಟ್ಟರ್ ಗೆಲ್ಲಿಸಿದರೆ ಕೇಂದ್ರ ಸಚಿವರಾಗುತ್ತಾರೆ: ಗಾಲಿ ಜನಾರ್ಧನ ರೆಡ್ಡಿ - Janardhana Reddy

author img

By ETV Bharat Karnataka Team

Published : Apr 30, 2024, 9:41 PM IST

ಜಗದೀಶ್ ಶೆಟ್ಟರ್ ಜೊತೆ ಗಾಲಿ ಜನಾರ್ಧನ ರೆಡ್ಡಿ
ಜಗದೀಶ್ ಶೆಟ್ಟರ್ ಜೊತೆ ಗಾಲಿ ಜನಾರ್ಧನ ರೆಡ್ಡಿ

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದರೆ ಕೇಂದ್ರ ಸಚಿವರಾಗುತ್ತಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಗಾಲಿ ಜನಾರ್ಧನ ರೆಡ್ಡಿ ವಿಶ್ವಾಸ

ಬೆಳಗಾವಿ: ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಿಂದ ಗೆಲ್ಲಿಸಿದರೆ ಅವರು ಕೇಂದ್ರ ಸಚಿವರಾಗಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಪ್ರಚಾರಾರ್ಥ ರಾಮದುರ್ಗ ವಿಧಾನಸಭೆ ಕ್ಷೇತ್ರದ ಸುರೇಬಾನ ಗ್ರಾಮದಲ್ಲಿಂದು ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಪೊಳ್ಳು ಗ್ಯಾರಂಟಿಗಳು, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಒಬ್ಬ ಮನುಷ್ಯ ಮರಣ ಹೊಂದಿದ ನಂತರ ಶೇ.55ರಷ್ಟು ಆಸ್ತಿ ಸರ್ಕಾರದ ಪಾಲಾಗಲಿದೆ. ಹಾಗಾಗಿ ನಾವು ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅವರ ಗ್ಯಾರಂಟಿಗಳಿಗೆ ನಾವು ಆಸೆ ಪಟ್ಟರೆ ನಮ್ಮ ಆಸ್ತಿಯ ಶೇ.55ರಷ್ಟು ಕಿತ್ತುಕೊಳ್ಳುತ್ತಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಮಾತನಾಡಿ, ನರೇಂದ್ರ ಮೋದಿವರನ್ನು ಮೂರನೇ ಸಲ ಪ್ರಧಾನಿ ಮಾಡಬೇಕು ಎಂದು ಎಲ್ಲರೂ ತೀರ್ಮಾನಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಭಾರತದ ಮುಂದಿನ ಪ್ರಧಾನಿ ಮೋದಿಯವರೇ ಆಗಬೇಕು ಎಂದು ಜನ ಬಯಸಿದ್ದಾರೆ ಎಂದು ಹೇಳಿದರು.

ಮಾಜಿ ವಿಧಾನಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ, ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ರಾಜ್ಯ ನೇಕಾರ ಪ್ರಕೋಷ್ಠದ ಸಂಚಾಲಕ ಬಿ.ಎಸ್.ಸೋಮಶೇಖರ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: ನಾವು ಸರ್ಕಾರಿ ನೌಕರರ ಸಂಬಳ ನಿಲ್ಲಿಸಿಲ್ಲ, ಹತಾಶೆಯಿಂದ ಮೋದಿ ಭಯಾನಕ ಸುಳ್ಳು: ಸಿಎಂ ಸಿದ್ದರಾಮಯ್ಯ - Siddaramaiah Campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.