ETV Bharat / state

ದೇಶ ಒಗ್ಗೂಡಿಸಬೇಕು, ಒಡೆಯೋ ಮಾತನಾಡುವುದು ಸರಿಯಲ್ಲ: ಸಚಿವ ಡಾ.ಜಿ.ಪರಮೇಶ್ವರ್

author img

By ETV Bharat Karnataka Team

Published : Feb 2, 2024, 3:11 PM IST

Minister Dr G Parameshwar  ಗೃಹ ಸಚಿವ ಡಾ ಜಿ ಪರಮೇಶ್ವರ್  ದೇಶ ಒಡೆಯೋ ಮಾತು ಸರಿಯಲ್ಲ
ದೇಶ ಒಗ್ಗೂಡಿಸಬೇಕು, ಒಡೆಯೋ ಮಾತನಾಡುವುದು ಸರಿಯಲ್ಲ: ಸಚಿವ ಡಾ.ಜಿ.ಪರಮೇಶ್ವರ್

''ದೇಶ ಒಗ್ಗೂಡಿಸುವ ಮಾತನಾಡಬೇಕು. ಅದನ್ನು ಬಿಟ್ಟು ಒಡೆಯುವ ಮಾತನಾಡುವುದು ಸರಿಯಲ್ಲ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ''ದೇಶ ಒಗ್ಗೂಡಿಸುವ ಮಾತನಾಡಬೇಕು. ಅದನ್ನು ಬಿಟ್ಟು ಒಡೆಯೋ ಮಾತು ಸರಿಯಲ್ಲ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಡಿ.ಕೆ ಸುರೇಶ್ ಪ್ರತ್ಯೇಕ‌ ರಾಷ್ಟ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ದೇಶ ಒಗ್ಗೂಡಿಸಲು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ನೂರಾರು ವರ್ಷ ಹೋರಾಟ‌ಗಳು ನಡೆದಿವೆ. ಗಾಂಧೀಜಿ ಸೇರಿ ಹಲವರು ಹೋರಾಡಿದ್ದಾರೆ. ಅನೇಕ ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ.‌ ನಮ್ಮ ಭಾರತ ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಆದಾಗ ನಾವು ಯಾರೂ ಹುಟ್ಟಿರಲಿಲ್ಲ. ಆದರೆ, ಅದರ ಇತಿಹಾಸ ನಮಗೆ ಗೊತ್ತಿದೆ'' ಎಂದು ತಿಳಿಸಿದರು.

ಸಿಎಂ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರವಾಗಿ ಮಾತನಾಡಿದ ಅವರು, ''ಸಿಎಂ ಎಲ್ಲ ಸಚಿವರನ್ನ ಊಟಕ್ಕೆ ಕರೆದಿದ್ದರು. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಿದ್ದೇವೆ. ಅಭ್ಯರ್ಥಿ ಆಯ್ಕೆ, ಪಕ್ಷದ ಸಂಘಟನೆ ಬಗ್ಗೆ ಸಲಹೆ ನೀಡಿದ್ದಾರೆ. ಸಿಎಂ, ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ.‌ ಹೆಚ್ಚು ಸೀಟು ಗೆಲ್ಲಬೇಕು ಅಂತ ಚರ್ಚೆ ಆಗಿದೆ. ಆಯಾ ಸಚಿವರು ಜಿಲ್ಲಾ ಉಸ್ತುವಾರಿ ತೆಗೆದುಕೊಳ್ಳಬೇಕು‌. ಕೆಲಸ ಮಾಡಬೇಕು ಅಂತ ಹೇಳಿದ್ದಾರೆ. ನಿನ್ನೆ ಸಭೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ. ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಮಾಡುತ್ತೆ. ಈಗಾಗಲೇ ಹೈಕಮಾಂಡ್​ಗೆ ಪಟ್ಟಿ ರವಾನೆ ಆಗಿದೆ. ಮುಂದಿನ ವಾರ ಅಭ್ಯರ್ಥಿ ಆಯ್ಕೆ ಆಗಬಹುದು'' ಎಂದರು.

ಮುದ್ದ ಹನುಮೇಗೌಡ ಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ''ಟಿಕೆಟ್ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾರಿಗೆ ಟಿಕೆಟ್ ಕೊಡುತ್ತೆ ನೋಡೋಣ. ಟಿಕೆಟ್ ಕೊಟ್ಟವರ ಪರ ನಾವು ಕೆಲಸ ಮಾಡ್ತೇವೆ. ನಮ್ಮ ಅಭಿಪ್ರಾಯ ಪಕ್ಷಕ್ಕೆ ಹೇಳಿದ್ದೇವೆ. ಪಕ್ಷ ಯಾರಿಗೆ ಕೊಡುತ್ತೋ ಅವರಿಗೆ ಕೆಲಸ ಮಾಡ್ತೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರದಲ್ಲಿ ಶೇ. 50 ಕಮೀಷನ್ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಸಿಎಂ ಗಮನಕ್ಕೆ ಅವರು ತರಬಹುದಿತ್ತು. ಆಗ ಸಿಎಂ ಕ್ರಮ ತೆಗೆದುಕೊಳ್ತಾರೆ.‌ ಶಿವರಾಂ, ಬಾಲಕೃಷ್ಣ ಹೇಳಿಕೆ ವೈಯುಕ್ತಿಕ ಹೇಳಿಕೆಗಳು. ಅವರ ಹೇಳಿಕೆ ಪಕ್ಷದ ಹೇಳಿಕೆಗಳಲ್ಲ. ಅವರ ಹೇಳಿಕೆಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ'' ಎಂದರು.

ಸರ್ಕಾರ ಏನು ಬೇಕಾದರೂ ಆಗಬಹುದು ಎಂಬ ಹೆಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ''ಏನು ಬೇಕಾದರೂ ಆಗಬಹುದು ಅಂತ ಕಾಯ್ತಾ ಇರಲಿ. ಅವರು ಕಾಯ್ತಾ ಕುಳಿತುಕೊಳ್ಳಲಿ. ಅವರು ನೋಡ್ತಾನೇ ಇರಲಿ'' ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಪ್ರತ್ಯೇಕ ದೇಶ ಹೇಳಿಕೆ: ಸಂಸದ ಡಿ.ಕೆ.ಸುರೇಶ್ ವಜಾಗೆ ಪ್ರಹ್ಲಾದ್ ಜೋಶಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.