ETV Bharat / state

ಮೈಸೂರು: ಅವೈಜ್ಞಾನಿಕ ಹಂಪ್‌ಗಳಿಂದ ಅಪಘಾತ, ಅಧಿಕಾರಿಗಳ ವಿರುದ್ಧ ಡಿಸಿ ಗರಂ

author img

By ETV Bharat Karnataka Team

Published : Feb 14, 2024, 10:00 PM IST

ಜನವರಿ ತಿಂಗಳಲ್ಲಿ ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ 31, ನಗರ ವ್ಯಾಪ್ತಿಯಲ್ಲಿ 16 ಜನರು ಅಪಘಾತ ಘಟನೆಗಳಿಂದ ಸಾವಿಗೀಡಾಗಿದ್ದಾರೆ.

Road Safety Committee meeting was held.
ಮೈಸೂರು ಡಿಸಿ ಡಾ ಕೆ ವಿ ರಾಜೇಂದ್ರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು.

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಜೆ.ಸಿ.ಕಾಲೇಜು ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್‌ನಿಂದಾಗಿ ಅಪಘಾತ ಸಂಭವಿಸಿ ಇತ್ತೀಚೆಗೆ ಮೂವರು ಸಾವಿಗೀಡಾಗಿದ್ದಾರೆ. ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆಗಳ ರಿಪೇರಿ ಹಾಗೂ ಕಾಮಗಾರಿ ಮಾಡುವಾಗ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರಸ್ತೆ ವೈಟ್ ಟ್ಯಾಪ್‌ಗಳು, ಸೂಚನಾ ಫಲಕಗಳನ್ನು ಹಾಕಬೇಕು. ಬದಲಿ ರಸ್ತೆ ಬಳಕೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ 31, ನಗರ ವ್ಯಾಪ್ತಿಯಲ್ಲಿ 16 ಜನರು ಜನವರಿ ತಿಂಗಳಲ್ಲಿ ಅಪಘಾತದ ಪ್ರಕರಣಗಳಿಂದ ಮರಣ ಹೊಂದಿದ್ದಾರೆ. ಈ ಅಪಘಾತಗಳು ಸಂಭವಿಸಲು ಕಾರಣಗಳೇನು ಎಂಬುವುದರ ಬಗ್ಗೆ ವರದಿ ನೀಡಬೇಕು. ಪ್ರತಿಯೊಂದು ಜೀವವೂ ಅಮೂಲ್ಯ. ಉತ್ತಮ ರಸ್ತೆಗಳು, ಸಂಚಾರಿ ನಿಯಮಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತದಿಂದ ಸಾವುಗಳಾಗದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಪ್ರವಾಸಿಗರಿಗೆ ಸೂಕ್ತ ಮಾಹಿತಿ ಅಗತ್ಯ: ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳಿವೆ. ಆದರೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಅಪಘಾತಗಳಾ ಗುತ್ತಿವೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯಲ್ಲಿ ಯಾವ ಯಾವ ಪ್ರವಾಸಿ ತಾಣಗಳಿಗೆ ಯಾವ ರಸ್ತೆಯಲ್ಲಿ ಹೋಗಬೇಕು ಎಂಬ ಸೈನ್ ಬೋರ್ಡ್‌ಗಳನ್ನು ಅಳವಡಿಸಬೇಕು. ಇದರಿಂದ ಪ್ರವಾಸಿಗರಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ಫುಟ್​ಪಾತ್​ಗಳ ಮೇಲೆ ಬೀದಿಬದಿ ವ್ಯಾಪಾರಿಗಳು ಅತಿಕ್ರಮ ಮಾಡಿರುತ್ತಾರೆ. ಇದನ್ನು ತೆರವುಗೊಳಿಸಿ ಜನರು ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಸೂಚಿಸಿದರು.

ರಸ್ತೆ ಬದಿಯ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ವರದಿ ನೀಡಬೇಕು. ಸಾರ್ವಜನಿಕರಿಂದ ಅಹವಾಲುಗಳನ್ನು ಪಡೆದು ಅಗತ್ಯವಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಅವೈಜ್ಞಾನಿಕ ಹಂಪ್‌ಗಳ ಕುರಿತು ಸ್ಧಳ ಪರಿಶೀಲನೆ ಮಾಡಿ ವರದಿ ತಯಾರಿಸಿ ಒಂದು ವಾರದಲ್ಲಿ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ತಾಕೀತು ಮಾಡಿದರು.

ಶಿವರಾಂ ಪೇಟೆ ಸರ್ಕಲ್‌ನಲ್ಲಿ ಗೂಡ್ಸ್ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡು ಲೋಡಿಂಗ್ ಅನ್ ಲೋಡಿಂಗ್ ಮಾಡುತ್ತಿರುತ್ತಾರೆ. ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಆಗಿ ವಿಳಂಬ ಆಗುತ್ತದೆ. ಈ ಸಮಯವನ್ನು ಸರಿದೂಗಿಸಲು ವಾಹನ ಸವಾರರು ಮುಂದಿನ ಸಿಗ್ನಲ್​​ಗಳಿಂದ ವೇಗವಾಗಿ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಶಿವರಾಂ ಪೇಟೆ ಸರ್ಕಲ್‌ನಲ್ಲಿ ಪೀಕ್ ಸಮಯದಲ್ಲಿ ಗೂಡ್ಸ್ ವಾಹನಗಳನ್ನು ನಿಲ್ಲಿಸದಂತೆ ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಹೆಲ್ಮೆಟ್ ಧರಿಸದೆ ಇರುವವರು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವವರಿಗೆ ದಂಡ ವಿಧಿಸಿ. ಅವೈಜ್ಞಾನಿಕ ಹಂಪ್‌ಗಳನ್ನು ತೆರವುಗೊಳಿಸಿ. ಆಟೋ ಚಾಲಕರು, ಗೂಡ್ಸ್ ವಾಹನಗಳ ಚಾಲಕರು, ಬಸ್ ಚಾಲಕರು ಅವರಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ಮಾಡಿ ಸುರಕ್ಷತಾ ಚಾಲನಾ ನಿಯಮಗಳ ಕುರಿತು ತರಬೇತಿ ನೀಡಬೇಕು ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್, ಉಪ ಪೊಲೀಸ್ ಆಯುಕ್ತ ಜಾಹ್ನವಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಇದನ್ನೂಓದಿ: ಭೀಕರ ಬರಕ್ಕೆ ಇಡೀ ಊರೇ ಖಾಲಿ: ವೃದ್ಧರನ್ನು ಬಿಟ್ಟು ಗುಳೆ ಹೋದ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.