ETV Bharat / state

ಮಹದಾಯಿ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ, ಜೋಶಿ ಸುಳ್ಳು ಹೇಳುವುದನ್ನು ಬಿಡಬೇಕು: ವೀರೇಶ‌ ಸೊಬರದಮಠ

author img

By ETV Bharat Karnataka Team

Published : Mar 2, 2024, 5:53 PM IST

Updated : Mar 2, 2024, 6:10 PM IST

Viresh Sobaradamath spoke at the press conference.
ಕಳಸಾ ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಳಸಾ ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ ವಾಗ್ದಾಳಿ ನಡೆಸಿದರು.

ಹೋರಾಟಗಾರ ವಿರೇಶ ಸೊಬರದಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹಾಗೂ ರಾಜಕೀಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮಹದಾಯಿಗೆ ಸಂಬಂಧಿಸಿದ ಸತ್ಯವನ್ನು ಮಾತ್ರ ಹೇಳಬೇಕು ಎಂದು ಕಳಸಾ ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬೊಮ್ಮಾಯಿ ಅವರು ಮಹದಾಯಿ ನ್ಯಾಯಾಧೀಕರಣ ಮತ್ತು ಟೆಂಡರ್​ ಪ್ರಕ್ರಿಯೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಇದು ತಪ್ಪು, ಹಿಂದೆ ಕಾಂಗ್ರೆಸ್ ಸರ್ಕಾರ ಮೂರು ರಾಜ್ಯಗಳನ್ನು ಸೇರಿಸಿ ನ್ಯಾಯಾಧೀಕರಣ ರಚನೆ ಮಾಡಿದ್ದರು. ಆ ಕಾಂಗ್ರೆಸ್​ ಸರ್ಕಾರವನ್ನು ಕಿತ್ತು ಹಾಕಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗಿತ್ತು ಎಂದರು.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಡಿಪಿಆರ್ ರೂಪಿಸಿ ಕೇಂದ್ರದ ಸಂಬಂಧಿಸಿದ ಇಲಾಖೆಗೆ ಪರವಾನಗಿ ಕೇಳಲಾಗಿತ್ತು. ಆದರೆ ತಮ್ಮನ್ನು ಭೇಟಿಯಾಗಿದ್ದ ವೇಳೆ ಕೆಲವೊಬ್ಬರು ಅಡ್ಡಿ ಮಾಡುತ್ತಿದ್ದಾರೆ ಎನ್ನುವುದನ್ನು ಸ್ವತಃ ಬೊಮ್ಮಾಯಿ ಹೇಳಿದ್ದರು. ಇದೀಗ ರಾಜಕೀಯಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಸೊಬರದಮಠ ಹರಿಹಾಯ್ದರು.

ತಾವು ಸುಳ್ಳು ಹೇಳಿ ರೈತ ಹೋರಾಟಗಾರರನ್ನು ಬಲಿ ಕೊಡಬೇಡಿ, ಸತ್ಯವನ್ನು ಹೇಳಿ, ನಿಮ್ಮ ಹೋರಾಟ ಪ್ರಯತ್ನಕ್ಕೆ ಯಾರು ಹಿನ್ನಡೆ ಮಾಡಿದ್ದರು ಎಂಬುದನ್ನು ಸಮಯ ಬಂದಾಗ ಹೇಳುತ್ತೇವೆ. ಅಲ್ಲದೇ ತಮ್ಮ ಸರ್ಕಾರ ಇದ್ದಾಗ ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಟೆಂಡರ್ ಕರೆಯಲಾಗಿತ್ತು. ಮಹದಾಯಿಗಾಗಿ ಹೋರಾಟ ಮಾಡಿದ ನೀವು, ಮಾಜಿ ಸಿಎಂ ಆಗಿ ಜವಾಬ್ದಾರಿಯಿಂದ ಮಾತನಾಡಬೇಕೆಂದು ಒತ್ತಾಯಿಸಿದರು.

ಚುನಾವಣೆ ನೀತಿ ಸಂಹಿತೆ ಮುನ್ನ ಮಹದಾಯಿಗೆ ಅನುಮತಿ ಕೊಡಿಸಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಸರ್ಕಾರ ಸರಿಯಾದ ದಾಖಲೆ ಸಲ್ಲಿಸಿಲ್ಲ, ಕಳಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕಳೆದ ಜ.30 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಡಾ. ಕೌಶಿಕ್ ಅವರ ಸಭೆ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ರಾಜ್ಯ ಸರ್ಕಾರ ಕೂಡಾ ಈ ಬಗ್ಗೆ ಮಾಹಿತಿ ನೀಡಿದೆ. ಮಹದಾಯಿ ವ್ಯಾಪ್ತಿಯ ನಾಲ್ವರು ಸಂಸದರಲ್ಲಿ ತಾವು ಪ್ರಭಾವಿಗಳಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಒಳಗಾಗಿ ಮಹದಾಯಿ ಯೋಜನೆಗೆ ಅನುಮತಿ ಕೂಡಿಸಬೇಕು. ಇದನ್ನು ನೀವು ಮಾಡಿಕೊಟ್ಟರೆ ರೈತರು ಗೆದ್ದ ಹಾಗೇ, ಇಲ್ಲವಾದರೇ ರೈತರ ಸೋಲು, ಇದರ ಪರಿಣಾಮ ಮುಂದಿನ ದಿನಗಳಲ್ಲಿ ತಾವು ಕಾಣಬಹುದು ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ : ತೀರ್ಪು ಬಂದು ಆರು ವರ್ಷವಾದ್ರೂ ಅನುಷ್ಠಾನಗೊಳ್ಳದ ಮಹದಾಯಿ ಯೋಜನೆ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಗೆ ಜನರ ಹಿಡಿಶಾಪ

Last Updated :Mar 2, 2024, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.