ETV Bharat / state

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ: ಆರೋಪಿಗಳ ಬಂಧನ - House Robbery Case

author img

By ETV Bharat Karnataka Team

Published : Apr 6, 2024, 12:49 PM IST

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ: ಆರೋಪಿಗಳ ಬಂಧನ
ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ: ಆರೋಪಿಗಳ ಬಂಧನ

ಮನೆಯೊಂದಕ್ಕೆ ನುಗ್ಗಿ ಗುಂಡು ಹಾರಿಸಿ ಹಣ ದೋಚಿದ್ದ ಜಾರ್ಖಂಡ್​ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ನೀರು ಕೇಳುವ ನೆಪದಲ್ಲಿ ತೋಟದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾರ್ಖಂಡ್ ಮೂಲದ ಎಜಾಜ್ ಮಿರ್ದಾಹ, ಸಹಿಬುಲ ಅನ್ಸಾರಿ ಬಂಧಿತ ಆರೋಪಿಗಳು.

ಘಟನೆಯ ವಿವರ: ಮಾ. 26ರಂದು ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಗಂಗಯ್ಯ ಎಂಬುವವರ ಮನೆಗೆ ಇಬ್ಬರು ದರೋಡೆಕೋರರು ಬೈಕ್​ನಲ್ಲಿ ಬಂದಿದ್ದರು. ಬಳಿಕ ಮನೆಯಲ್ಲಿದ್ದ ಪುಷ್ಪಲತಾ ಅವರಿಗೆ ಕುಡಿಯಲು ನೀರು ಕೇಳಿದ್ದರು. ಈ ವೇಳೆ, ಪುಷ್ಪಲತಾ ತನ್ನ ತಾಯಿ ಗಂಗಮ್ಮ ಅವರಿಗೆ, ಯಾರೋ ಕುಡಿಯಲು ನೀರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಂಧಿತರಿಂದ ವಶಪಡಿಸಿಕೊಂಡ​ ಗನ್​ಗಳು
ಬಂಧಿತರಿಂದ ವಶಪಡಿಸಿಕೊಂಡ​ ಗನ್​ಗಳು

ಗಂಗಮ್ಮ ಕುಡಿಯಲು ನೀರು ತರಲು ಎಂದು ಮನೆಯೊಳಗೆ ಹೋಗುತ್ತಿದ್ದಂತೆ ದರೋಡೆಕೋರರು ಏಕಾಏಕಿ ಮನೆಯೊಳಗೆ ನುಗ್ಗಿ ಮೂರು ಲಕ್ಷ ರೂಪಾಯಿ ನಗದು ದೋಚಲು ಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಪುಷ್ಪಲತಾ ಪ್ರತಿರೋಧ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಲಗಿದ್ದ ತಂದೆ ಗಂಗಯ್ಯ ಎಚ್ಚರಗೊಂಡು ನೋಡಿದಾಗ ದರೋಡೆಕೋರರು ಹಣವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ಇದನ್ನು ತಡೆಯಲು ಮನೆಯವರು ಮುಂದಾದಾಗ ಒಬ್ಬ ದರೋಡೆಕೋರ ಗಂಗಯ್ಯನವರ ಮೇಲೆ ಗುಂಡು ಹಾರಿಸಿದ್ದಾನೆ. ಆ ಗುಂಡು ಗಂಗಯ್ಯರಿಗೆ ತಗಲುವ ಬದಲು ಗೋಡೆಗೆ ತಗುಲಿತ್ತು. ಬಳಿಕ ಮನೆಯಿಂದ ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ಗಂಗಯ್ಯ ಹಿಂಬಾಲಿಸಿದಾಗ ಮತ್ತೆ ಎರಡನೇ ಬಾರಿ ಗುಂಡು ಹಾರಿಸಿದ್ದರು. ಆ ಗುಂಡು ಗಂಗಯ್ಯನವರ ಕಾಲಿಗೆ ತಗುಲಿ ಗಾಯವಾಗಿತ್ತು. ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್, ಡಿವೈಎಸ್‌ಪಿ ಓಂಪ್ರಕಾಶ್ ಪರಿಶೀಲನೆ ನಡೆಸಿದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಆಸ್ತಿ ವಿವಾದ : ರಾಯಬಾಗ ತಾಲೂಕಿನಲ್ಲಿ ಗುಂಡಿನ ದಾಳಿ, ಯುವಕನಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.