ETV Bharat / state

'ನನ್ನ ಬೆಂಬಲಿಗರು, ಮುಖಂಡರನ್ನು ಬೆದರಿಸುವ ಕೆಲಸ ಆಗುತ್ತಿದೆ': ಜಿ.ಬಿ. ವಿನಯ್​​ ಕುಮಾರ್ - GB Vinay Kumar

author img

By ETV Bharat Karnataka Team

Published : Apr 24, 2024, 11:44 AM IST

Updated : Apr 24, 2024, 12:23 PM IST

ಜಿ.ಬಿ. ವಿನಯ್​​ ಕುಮಾರ್ ಆರೋಪ
ಜಿ.ಬಿ. ವಿನಯ್​​ ಕುಮಾರ್ ಆರೋಪ

'ದಾವಣಗೆರೆ ತ್ರಿಕೋನ ಸ್ಪರ್ಧೆಯಲ್ಲಿ ನಾನು ಮುಂಚೂಣಿಯಲ್ಲಿದ್ದು, ನನ್ನ ಬೆಂಬಲಿಗರನ್ನು, ಮುಖಂಡರನ್ನು ಬೆದರಿಸುವ ಕೆಲಸವಾಗುತ್ತಿದೆ' ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್​​ ಕುಮಾರ್​ ಆರೋಪಿಸಿದ್ದಾರೆ.

ಜಿ.ಬಿ. ವಿನಯ್​​ ಕುಮಾರ್ ಆರೋಪ

ದಾವಣಗೆರೆ: ನನ್ನ ಹಿಂದೆ ಇರುವ ಬೆಂಬಲಿಗರನ್ನು, ಮುಖಂಡರನ್ನು ಬೆದರಿಸುವ ಕೆಲಸ ಆಗುತ್ತಿದೆ. ಇನ್ನು ಕೆಲವರನ್ನು ಬ್ಲಾಕ್​​ ಮೇಲ್​​ ಮಾಡಲಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್​​ ಕುಮಾರ್ ಗಂಭೀರ​ ಆರೋಪ ಮಾಡಿದ್ದಾರೆ.

ನಗರದಲ್ಲಿರುವ ಅವರ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು​, "ಶಾಮನೂರು ಶಿವಶಂಕರಪ್ಪ ಕುಟುಂಬ, ಜಿ.ಎಂ. ಸಿದ್ದೇಶ್ವರ್ ಅವರ ಕುಟುಂಬ ಪಕ್ಷಗಳನ್ನು ದುರ್ಬಳಕೆ ಮಾಡಿಕೊಂಡು ಬೆಳೆದು ನಿಂತಿದ್ದಾರೆ. ಅವರ ಕಾರ್ಯಕರ್ತರಲ್ಲಿ ನಾನು ಇಲ್ಲಿ ಆರೋಗ್ಯಕರ ಸ್ಪರ್ಧೆ ಮಾಡೋಣ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ನೀವು ಎಷ್ಟು ಸಮರ್ಥರಿದ್ದಿರೋ ನಾನು ಅಷ್ಟೇ ಸಮರ್ಥನಾಗಿದ್ದೇನೆ. ಯಾರು ಗೆಲ್ಲಬೇಕೆಂದು ಜನ ನಿರ್ಧಾರ ಮಾಡಬೇಕು. ಕಳಂಕ ರಹಿತ ಆರೋಗ್ಯಕರ ಚುನಾವಣೆ ಮಾಡೋಣ" ಎಂದರು.

"ಚುನಾವಣಾ ಪ್ರಚಾರದ ವೇಳೆ ಭೈರನಪಾದ ಯೋಜನೆ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ, 53 ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಚುರುಕುಗೊಳಿಸುತ್ತೇವೆ. ಕೈಗಾರಿಕಾಗಳನ್ನು ತರುತ್ತೇವೆ ಎಂದು ಎರಡು ಪಕ್ಷದ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ, ಜನರು ಇಷ್ಟು ದಿನಗಳ ಕಾಲ ನಿಮಗೆ ಅಧಿಕಾರ ಕೊಟ್ಟಿದ್ದರೂ ಏಕೆ ಅಭಿವೃದ್ಧಿ ಮಾಡಲಿಲ್ಲ. ಸುಳ್ಳು ಭರವಸೆಗಳನ್ನು ಕೊಡುವುದನ್ನು ಬಿಡಿ" ಎಂದು ಎದುರಾಳಿ ಪಕ್ಷಗಳಿಗೆ ಟಾಂಗ್​ ನೀಡಿದರು.

ಮುಂದುವರೆದು, "ನಾನು ದಾವಣಗೆರೆ ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ದಿನ‌ ಘೋಷಣೆಯಾಗಿದೆ. ನಾಮ‌ಪತ್ರ ಹಿಂಪಡೆಯುತ್ತಾರೆ ಎಂಬ ಊಹಾಪೋಹಗಳಿದ್ದವು. ಆದರೆ ಅದಕ್ಕೆಲ್ಲ ತೆರೆಬಿದ್ದಿದೆ. ದಾವಣಗೆರೆ ಕ್ಷೇತ್ರದ ಈ ತ್ರಿಕೋನ ಸ್ಪರ್ಧೆಯಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ. ನನಗೆ ಗ್ಯಾಸ್ ಸಿಲಿಂಡರ್ ಚಿಹ್ನೆಯನ್ನು ಕೊಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ ನಿತ್ಯ ಮಹಿಳೆಯರಿಗೆ ಬೇಕಾದ ಅಡುಗೆ ಮನೆಯ ಪರಿಕರ. ರಾಜಕೀಯ ಕುಟುಂಬದ ಹಿನ್ನೆಲೆಯಿಂದ ನಾನು ಬಂದಿಲ್ಲ. ಮತದಾರರು ನನ್ನ ಕೈ ಹಿಡಿಯಬೇಕಾಗಿದೆ. ನಾನು ಸಾಮಾನ್ಯ ಕುಟುಂಬದಿಂದ ಬಂದಿರುವವನು. ದಾವಣಗೆರೆ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ಜಿ.ಬಿ ವಿನಯ್ ಕುಮಾರ್​ ಅವರನ್ನು ಗೆಲ್ಲಿಸಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿದೆ" ಎಂದರು.

"ಕೆಲವರು ನನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ಹೋದಾಗ ಬಿಜೆಪಿ ನಾಯಕರು ಮಾತನಾಡಿಸಿದ್ದನ್ನೇ ಫೋಟೊ ತೆಗೆದು ಕೆಲವರು ವೈರಲ್ ಮಾಡಿದ್ದಾರೆ. ಈ ರೀತಿ ಮಾಡಿದವರು ಸೋಲಿನ ಭಯದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂದು ಕೆಲ ಮುಖಂಡರ ಅಭಿಪ್ರಾಯ ಇದೆ. ಆದರೆ, ನಾನು ದಾವಣಗೆರೆಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡ್ಬೇಕಾಗಿದೆ. ನಮ್ಮದು ಪ್ರಜಾಪ್ರಭುತ್ವ ಆಗಿದ್ದು, ಯಾರು ಬೇಕಾದರೂ ಯಾರೊಂದಿಗಾದರೂ ಇರಬಹುದು" ಎಂದಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್​ ಕುಮಾರ್​ಗೆ ಗ್ಯಾಸ್ ಸಿಲಿಂಡರ್ ಗುರುತು: ಬೆಣ್ಣೆನಗರಿಯಲ್ಲಿ 30 ಅಭ್ಯರ್ಥಿಗಳು ಫೈನಲ್​ - GB Vinay Kumar

Last Updated :Apr 24, 2024, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.