ETV Bharat / state

ಗದಗದಲ್ಲಿ ತಡರಾತ್ರಿ ನಾಲ್ವರ ಹತ್ಯೆ ಪ್ರಕರಣ: ಎಸ್​ಪಿ ನೇತೃತ್ವದಲ್ಲಿ 5 ತಂಡ ರಚನೆ - BRUTAL MURDER OF FAMILY MEMBERS

author img

By ETV Bharat Karnataka Team

Published : Apr 19, 2024, 12:29 PM IST

Updated : Apr 19, 2024, 4:33 PM IST

ಗದಗನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಕೆ ಪಾಟೀಲ್​ ಮತ್ತು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್​ ಕುಮಾರ್ ಹೇಳಿದ್ದಾರೆ.
ಐಜಿಪಿ ವಿಕಾಸ್​​ ಕುಮಾರ್​
ಐಜಿಪಿ ವಿಕಾಸ್​​ ಕುಮಾರ್​

ಗದಗ ನಾಲ್ವರ ಹತ್ಯೆ ಪ್ರಕರಣ

ಗದಗ: ಕೊಲೆ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್​ ಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಕೆ ಪಾಟೀಲ್ ಅವರು​ ಅಧಿಕಾರಿಗಳಿಂದ ಮಾಹಿತಿ ಪಡೆದರರು. ಬಳಿಕ ನಾಲ್ವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.

ನಗರದಲ್ಲಿ ನಸುಕಿನ ಜಾವ ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ ದುರ್ದೈವದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಕೆ ಪಾಟೀಲ್​ ಬೇಸರ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ ಅವರು, ಪ್ರಕಾಶ್ ಬಾಕಳೆ ಕುಟುಂಬಕ್ಕೆ ಧೈರ್ಯ ಹೇಳಿದರು.

ಇದೊಂದು ದುರ್ದೈವದ ಸಂಗತಿ, ಅಮಾನುಷ ಘಟನೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಪೊಲೀಸರು ಸಹ ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಕೊಲೆಗಡುಕರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸ್ಥಳಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ ವಿಕಾಸ್ ಕೂಡ ಭೇಟಿ ನೀಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರಿಂದ ಮಾಹಿತಿ ಕಲೆ ಹಾಕಿದರು.

ಬಳಿಕ ಘಟನೆ ಕುರಿತು ಮಾತನಾಡಿದ ಅವರು, ಕೊಲೆಯಾದ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಶುಕ್ರವಾರ ನಸುಕಿನ ವೇಳೆ ಈ ‌ಘಟನೆ ನಡೆದಿರಬಹುದು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಸೆಕ್ಷನ್​ 396 ಅಡಿ ಗದಗ ಶಹರ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೂಡ ನಡೆಸಿದ್ದಾರೆ. ಇದೊಂದು ಗಂಭೀರ ಘಟನೆ. ಕೊಲೆ ಮಾಡಿದವರು ದರೋಡೆಕೋರರಲ್ಲ ಅನ್ನಿಸುತ್ತಿದೆ. ಹಾಗೇನಾದರೂ ಇದ್ದಿದ್ದರೆ ಮನೆಯಲ್ಲಿರುವ ಚಿನ್ನಾಭರಣ ಲೂಟಿ ಮಾಡುತ್ತಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತ ದೇಹಗಳ ಮೇಲಿನ ಆಭರಣಗಳು ಕೂಡ ಹಾಗೇ ಇವೆ. ಕೆಳ ಮಹಡಿಯಲ್ಲಿ ತಾಯಿ ಲಕ್ಷ್ಮೀ ಹಾಗೂ ಮಗಳು ಆಕಾಂಕ್ಷಾ ಕೊಲೆಯಾದರೆ, ಮೊದಲನೇ ಮಹಡಿಯಲ್ಲಿ ಪರಶುರಾಮ ಹಾಗೂ ಕಾರ್ತಿಕನ ಕೊಲೆಯಾಗಿದೆ. ಎಸ್​ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಐದು ತಂಡ ರಚನೆ ಮಾಡಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆದಿದೆ. ಸಾರ್ವಜನಿಕರ ಕಡೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಬಹುದು. ಬಹಳಷ್ಟು ಸೂಕ್ಷ್ಮವಾಗಿ ತನಿಖೆ ನಡೆದಿದೆ. ಶೀಘ್ರದಲ್ಲೇ ಹಂತಕರ ಬಂಧನ ಮಾಡಲಾಗುತ್ತದೆ ಎಂದಿದ್ದಾರೆ.

ತಡರಾತ್ರಿ ಪ್ರಕಾಶ ಬಾಕಳೆ ಮನೆಯಲ್ಲಿ ನಾಲ್ವರ ಕೊಲೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಆಗಮಿಸಿ ಪರಿಶೀಲನೆ ನಡೆಸಿದ್ದೇವೆ. ಕೊಲೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಕೊಲೆ ಮಾಡಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು. ದುಷ್ಕರ್ಮಿಗಳು ಹೇಗೆ ಬಂದರು ಎಂಬುದರ ಬಗ್ಗೆ ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದ್ದಾರೆ.

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಆತನ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಎಂಬುವರನ್ನು ಯಾರೋ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದು ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

Last Updated :Apr 19, 2024, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.