ETV Bharat / state

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: ಓರ್ವನಿಗೆ ಗಾಯ

author img

By ETV Bharat Karnataka Team

Published : Feb 17, 2024, 9:00 PM IST

fight-between-prisoners-in-dharwad-central-jail
ಕೈದಿಗಳ ನಡುವೆ ಮಾರಾಮಾರಿ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಗಲಾಟೆ ನಡೆದು, ಓರ್ವ ಕೈದಿ ಗಾಯಗೊಂಡಿದ್ದಾನೆ.

ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ ನಡೆದು, ಓರ್ವ ಕೈದಿಗೆ ಇರಿತದಿಂದ ಗಾಯವಾಗಿರುವ ಘಟನೆ ಇಂದು ನಡೆದಿದೆ. ಟೈಲ್ಸ್​​ನ್ನೇ ಚಾಕು ರೀತಿ ಬಳಸಿಕೊಂಡು ಕೈದಿಯೋರ್ವ ಇನ್ನೋರ್ವನಿಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಸುಲೇಮಾನ್ ಇರಿತಕ್ಕೆ ಒಳಗಾದ ಕೈದಿಯಾಗಿದ್ದು, ಪಚ್ಚಿ ಎಂಬಾತ ಇರಿದಿರುವ ಆರೋಪಿ ಕೈದಿಯಾಗಿದ್ದಾನೆ. ಪಚ್ಚಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಎಸಗಿ ಕೊಲೆ ಮಾಡಿದ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ನಲ್ಲಿ ಬಂಧನಕ್ಕೆ ಒಳಗಾಗಿರುವ ಸುಲೇಮಾನ್ ಮೇಲೆ ಪಚ್ಚಿ ಹಲ್ಲೆ ಮಾಡಿದ್ದಾನೆ. ಪದೇ ಪದೇ ಈ ರೀತಿ ಮಾಡುವುದರಿಂದ ಈ ಹಿಂದೆ ಪಚ್ಚಿಯನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿಯೂ ಇದೇ ರೀತಿ ಹಲ್ಲೆ ಮಾಡಿದ್ದಕ್ಕೆ ಆತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅಧಿಕಾರಿಗಳು ಶಿಫ್ಟ್ ಮಾಡಿದ್ದರು. ಧಾರವಾಡಕ್ಕೆ ಬಂದ ಮೇಲೆ ಮೂರನೇ ಬಾರಿ ಪಚ್ಚಿ ಹಲ್ಲೆ ಮಾಡಿದ್ದಾನೆ. ಕಳೆದ ಕೆಲ ತಿಂಗಳುಗಳ ಹಿಂದೆ ಧಾರವಾಡ ಜೈಲು ಸಿಬ್ಬಂದಿ ಮೇಲೂ ಪಚ್ಚಿ ಹಲ್ಲೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಧಾರವಾಡ ಕೇಂದ್ರ ಕಾರಾಗೃಹಕ್ಕೆ ಎಸಿಪಿ ಬಸವರಾಜ್ ಹಾಗೂ ಉಪನಗರ ಪೊಲೀಸರು ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. ಪಚ್ಚಿ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಗೊಂಡವನಿಗೆ ಕಾರಾಗೃಹದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಪತ್ನಿ ಕೊಲೆಗೈದು, ಧರ್ಮ ಬದಲಿಸಿಕೊಂಡ ಆರೋಪಿ 31 ವರ್ಷಗಳ ಬಳಿಕ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.