ETV Bharat / state

ಇಂದಿನಿಂದ ಕೊಬ್ಬರಿ ಖರೀದಿ: ಕಲ್ಲುಗಳ ಸಾಲು ನಿರ್ಮಿಸಿ ಸ್ವಯಂ ಟೋಕನ್​ ಪಡೆಯುತ್ತಿರುವ ರೈತರು

author img

By ETV Bharat Karnataka Team

Published : Mar 4, 2024, 10:01 AM IST

hassan
ಕಲ್ಲಿನ ಮೇಲೆ ಟೋಕನ್​ ನಂ ಬರೆದಿರುವ ರೈತರು

ನಫೆಡ್​​ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಗಳು ಎಪಿಎಂಸಿಗಳ ಮೂಲಕ ಉಂಡೆ ಕೊಬ್ಬರಿ ಖರೀದಿ ಮಾಡಲಿವೆ. ರೈತರು ಸರ್ಕಾರ ಟೋಕನ್​ ನೀಡದಿದ್ದರೂ ತಾವೇ ಕಲ್ಲುಗಳನ್ನು ಸಾಲಾಗಿ ಜೋಡಿಸಿ ಟೋಕನ್​ ಸಂಖ್ಯೆ ಬರೆದುಕೊಂಡಿದ್ದಾರೆ.

ಕಲ್ಲಿನ ಸಾಲು ನಿರ್ಮಿಸಿ ಸ್ವಯಂ ಟೋಕನ್​ ಪಡೆಯುತ್ತಿರುವ ರೈತರು

ಹಾಸನ: ಇಂದಿನಿಂದ ನಫೆಡ್​​ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಗಳು ಎಪಿಎಂಸಿಗಳ ಮೂಲಕ ಉಂಡೆ ಕೊಬ್ಬರಿ ಖರೀದಿ ಆರಂಭಿಸಲಿವೆ. ಈ ಹಿನ್ನೆಲೆಯಲ್ಲಿ ಕೊಬ್ಬರಿ ಬೆಳೆದ ರೈತರು ಸರ್ಕಾರ ಟೋಕನ್​ ನೀಡದಿದ್ದರೂ, ಕಲ್ಲುಗಳ ಮೇಲೆ ತಾವುಗಳೇ ತಮ್ಮ ತಮ್ಮ ನಂಬರ್ ಹಾಕಿಕೊಂಡು ಕುಳಿತಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಜನತೆ ಶಾಮಿಯಾನ ಹಾಕಿಕೊಂಡು, ಭಾನುವಾರ ಮಧ್ಯಾಹ್ನದಿಂದಲೇ ಕಲ್ಲುಗಳನ್ನು ಜೋಡಿಸಿಟ್ಟು ಸರದಿ ಸಾಲಿನಲ್ಲಿ ಕೊಬ್ಬರಿ ಮಾರಾಟ ಮಾಡಲು ಕಾದು ಕುಳಿತಿದ್ದಾರೆ. ಮಾರ್ಚ್​ 4ರಿಂದ ಬೆಳಗ್ಗೆ 6 ಗಂಟೆಗೆ ಕೊಬ್ಬರಿ ಖರೀದಿ ನೋಂದಣಿ ಆರಂಭವಾಗುವ ಬಗ್ಗೆ ಮಾಹಿತಿ ಪ್ರಕಟವಾಗುತ್ತಿದ್ದಂತೆ ಹೆಸರು ನೋಂದಾಯಿಸಲು ರೈತರು ಚನ್ನರಾಯಪಟ್ಟಣದ ವ್ಯವಸಾಯ ಸೇವಾ ಮಾರಾಟ ಕೇಂದ್ರದೆದುರು ಮುಗಿಬಿದ್ದಿದ್ದರು.

ನಿನ್ನೆ ಬೆಳಗ್ಗೆಯಿಂದ ಬಂದಿದ್ದ ರೈತರಷ್ಟೇ ಅಲ್ಲದೆ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಕುಟುಂಬಸ್ಥರಿಗೆ ಊಟದ ಬುತ್ತಿಯನ್ನು ಹೊತ್ತು ತಂದು ತಾವೂ ಕೂಡಾ ಸರದಿ ಸಾಲಿನಲ್ಲಿ ನಿಂತು ಕೊಬ್ಬರಿ ಮಾರಾಟಕ್ಕಾಗಿ ಕಾದು ಕುಳಿತಿದ್ದಾರೆ. ಕಲ್ಲುಗಳ ಸಾಲು ನಿರ್ಮಿಸಿ, ಕಲ್ಲಿನ ಮೇಲೆ ನಂಬರ್​ ಹಾಕಿ ಸ್ವಯಂ ಟೋಕನ್​ ಪಡೆಯುತ್ತಿದ್ದರು.

ತಿಂಗಳ ಹಿಂದೆ ಖರೀದಿ ನೋಂದಣಿ ಆರಂಭಿಸಿದ್ದ ಸರ್ಕಾರ ಅಕ್ರಮ ನಡೆದಿದೆ ಎಂದು ನೋಂದಣಿ ರದ್ದು ಮಾಡಿತ್ತು. ಎರಡನೇ ಬಾರಿಗೆ ನೋಂದಣಿ ಶುರು ಮಾಡಿರುವ ಹಿನ್ನೆಲೆಯಲ್ಲಿ ಮೊದಲು ನೋಂದಣಿ ಮಾಡಲು ರೈತರ ದುಂಬಾಲು ಬಿದ್ದಿದ್ದರು. ಸದ್ಯ ಯಾವುದೇ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ನೀರು ಆಹಾರ ಇಲ್ಲದೆ ರೈತರು ಕಾದು ನಿಂತಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್‌ ನೀಡಿದ ಸರ್ಕಾರ: ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.