ETV Bharat / state

ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಕೆಲಸ ಬೇಡ: ಬಿ ಎಸ್ ಯಡಿಯೂರಪ್ಪ

author img

By ETV Bharat Karnataka Team

Published : Feb 10, 2024, 2:20 PM IST

Updated : Feb 10, 2024, 2:54 PM IST

BS Yediyurappa  ಬಿ ಎಸ್ ಯಡಿಯೂರಪ್ಪ  ಕೆ ಎಸ್​ ಈಶ್ವರಪ್ಪ  ಸಿಎಂ ಸಿದ್ದರಾಮಯ್ಯ  KS Eshwarappa
ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಕೆಲಸ ಬೇಡ: ಬಿ ಎಸ್ ಯಡಿಯೂರಪ್ಪ

ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ‌ ಕೊಲ್ಲಿ ಎಂದಿದ್ದಾರೆ. ಅವರ ಹೇಳಿಕೆ ಬಗ್ಗೆ ಟೀಕೆ, ಟಿಪ್ಪಣಿ, ಅಪಾರ್ಥ ಕಲ್ಪಿಸುವ ಕೆಲಸವಾಗುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಲಿಸುವ ಕೆಲಸ ಆಗಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈಶ್ವರಪ್ಪ ಹೇಳಿದ ಮಾತನ್ನು ಅಪಾರ್ಥ ಕಲ್ಪಿಸುವ ರೀತಿ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ‌ ಕೊಲ್ಲಿ ಎಂದಿದ್ದಾರೆ. ಅವರ ಹೇಳಿಕೆ ಬಗ್ಗೆ ಟೀಕೆ, ಟಿಪ್ಪಣಿ, ಅಪಾರ್ಥ ಕಲ್ಪಿಸುವ ಕೆಲಸವಾಗುತ್ತಿದೆ ಎಂದ ಅವರು, ''ಈಶ್ವರಪ್ಪನವರ ವಿರುದ್ದ ಎಫ್ಐಆರ್ ಹಾಕಿದ್ರೆ ಏನು ತೊಂದರೆ ಇಲ್ಲ, ಅದನ್ನು ನಾವು ಎದುರಿಸುತ್ತೇವೆ'' ಎಂದು ತಿಳಿಸಿದರು.

ದೆಹಲಿಯ ಕಾಂಗ್ರೆಸ್​ ಪ್ರತಿಭಟನೆಗೆ ಬಿಎಸ್​ವೈ ಖಂಡನೆ: ''ಸಿದ್ದರಾಮಯ್ಯ ಏನು ಬೇಕಾದರೂ ಹೇಳಿಕೆ ಕೊಡುತ್ತಾರೆ. ನಾನು ಹೇಳಿದ್ದೆ ಸರಿ ಅಂತಾ ಸಾಬೀತು‌ ಮಾಡುವ ಪ್ರಯತ್ನ ಮಾಡುತ್ತಾರೆ. ಸಿದ್ದರಾಮಯ್ಯ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಾರೆ, ಅದನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ದೊಂಬರಾಟ ಮಾಡಿದ್ದಾರೆ ಎಂದರು.

ಈಶ್ವರಪ್ಪ ವಿರುದ್ಧ ಮತ್ತೊಂದು ದೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಮತ್ತೊಂದು ದೂರು ದಾಖಲು ಮಾಡಲಾಗಿದೆ. ಈಶ್ವರಪ್ಪ ವಿರುದ್ಧ ಆರ್‌.ಆರ್. ನಗರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಮತ್ತು ಸಂಜಯ್ ಎಂಬುವವರು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಫೆ.8 ರಂದು ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಈಶ್ವರಪ್ಪ ಅವರು, ''ಸಂಸದ ಡಿಕೆ ಸುರೇಶ್, ಶಾಸಕ ವಿನಯ್ ಕುಲಕರ್ಣಿ ಇಬ್ಬರು ದೇಶದ್ರೋಹಿಗಳು. ಇಬ್ಬರನ್ನು ಪಕ್ಷದಿಂದ ಕಿತ್ತು ಹಾಕಬೇಕು. ಈ ವೇದಿಕೆಯಿಂದಲೇ ಇವರ ಹಾಗೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯ ಮಾಡುವೆ. ಈ ರೀತಿಯ ದೇಶ ವಿಭಜನೆ ಎಂಬುದು ನೆಹರು ಕಾಲದಿಂದ ಬಂದಿದೆ'' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ಶುಕ್ರವಾರ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಪೊಲೀಸರು ನೋಟಿಸ್​ ಸಹ ಜಾರಿ ಮಾಡಿದ್ದಾರೆ. ಜೊತೆಗೆ ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಈಶ್ವರಪ್ಪ ಅವರ ನಿವಾಸಕ್ಕೂ ಪೊಲೀಸರು ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಮತ್ತೊಂದು ದೂರು: ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹ

Last Updated :Feb 10, 2024, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.