ETV Bharat / state

ಗ್ರಾಮೀಣ ಜನರಿಗೆ ಮನರಂಜನೆ ನೀಡುವ ನಾಟಕ ಪ್ರದರ್ಶನಗಳನ್ನು ಪ್ರೋತ್ಸಾಹಿಸಿ: ಕಂಪನಿ ಮಾಲೀಕರ ಮನವಿ

author img

By ETV Bharat Karnataka Team

Published : Feb 27, 2024, 1:41 PM IST

drama company owners requested to encourage their performances
ನಾಟಕ ಪ್ರದರ್ಶನಗಳನ್ನು ಪ್ರೋತ್ಸಾಹಿಸುವಂತೆ ಮನವಿ...

ತಮ್ಮ ನಾಟಕ ಪ್ರದರ್ಶನಗಳನ್ನು ಪ್ರೋತ್ಸಾಹಿಸುವಂತೆ ಡ್ರಾಮಾ ಕಂಪನಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

ನಾಟಕ ಪ್ರದರ್ಶನಗಳನ್ನು ಪ್ರೋತ್ಸಾಹಿಸುವಂತೆ ಮನವಿ...

ಹಾವೇರಿ: ಸರ್ಕಾರದ ಸಹಾಯಧನ ಮತ್ತು ಕಲಾಭಿಮಾನಿಗಳು ನೀಡುವ ಪ್ರೋತ್ಸಾಹದಿಂದ ರಾಜ್ಯದಲ್ಲಿ ಹಲವು ನಾಟಕ ಕಂಪನಿಗಳು ಕಲಾಸೇವೆ ಮುಂದುವರಿಸಿವೆ. ಕೆಲ ನಾಟಕ ಕಂಪನಿಗಳಿಗೆ ಸರ್ಕಾರದ ಸಹಾಯಧನ ಸಿಕ್ಕರೆ, ಹಲವರಿಗೆ ಸಿಗುವುದಿಲ್ಲ. ಅದಾಗ್ಯೂ ಕಲಾಭಿಮಾನಿಗಳ ಪ್ರೋತ್ಸಾಹದಿಂದ ನಾಟಕ ಕಂಪನಿಗಳು ತಮ್ಮ ಕಲಾಸೇವೆ ಮುಂದುವರಿಸಿವೆ.

ಈ ನಾಟಕ ಕಂಪನಿಗಳು ಕಲಾಭಿಮಾನಿಗಳನ್ನು ಪ್ರಮುಖವಾಗಿ ಅವಲಂಬಿಸಿದೆ. ಜಾತ್ರೆಗಳೇ ಇವರಿಗೆ ಮೂಲ. ಅದರಲ್ಲೂ ರಾಜ್ಯದ ಪ್ರಮುಖ ಜಾತ್ರೆಗಳಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆ, ಕೊಟ್ಟೂರು ಜಾತ್ರೆ ಮತ್ತು ಶಿರಸಿ ಮಾರಿಕಾಂಬಾ ಜಾತ್ರೆಗಳಲ್ಲಿ ಹೆಚ್ಚಿನ ನಾಯಕ ಪ್ರದರ್ಶನಗಳು ನಡೆಯುತ್ತವೆ. ಅದರಲ್ಲೂ ಬನಶಂಕರಿಯಲ್ಲಿ 10ಕ್ಕೂ ಅಧಿಕ ನಾಟಕ ಕಂಪನಿಗಳು ಟೆಂಟ್ ಹಾಕಿರುತ್ತವೆ. ಇಲ್ಲಿ ಹಲವು ಹೊಸ ನಾಟಕಗಳನ್ನು ಪ್ರಸ್ತುತ ಪಡಿಸುತ್ತವೆ. ಇಲ್ಲಿ ಕಲಾಭಿಮಾನಿಗಳು ಪ್ರೋತ್ಸಾಹ ನೀಡಿದರೆ, ರಾಜ್ಯದೆಲ್ಲೆಡೆ ಕಲಾಭಿಮಾನಿಗಳು ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ನಾಟಕ ಕಂಪನಿಯ ಮಾಲೀಕರದ್ದು.

ಇದೀಗ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ನಡೆಯುತ್ತಿದ್ದು, ಇಲ್ಲಿ ಸುಮಾರು ಆರು ನಾಟಕ ಕಂಪನಿಗಳು ಟೆಂಟ್ ಹಾಕಿವೆ. ದಾವಣಗೆರೆಯ ಕೆ.ಬಿ.ಆರ್ ಡ್ರಾಮಾ ಕಂಪನಿ, ಕಮತಗಿಯ ಹೊಳೆ ಹುಚ್ಚೇಶ್ವರ ನಾಟಕ ಕಂಪನಿ, ಜೀವರ್ಗಿ ನಾಟಕ ಕಂಪನಿ ಸೇರಿದಂತೆ ಆರು ನಾಟಕ ಕಂಪನಿಗಳು ಮೈಲಾರದಲ್ಲಿ ಟೆಂಟ್ ಹಾಕಿವೆ. ಕಲಾಭಿಮಾನಿಗಳನ್ನು ಸೆಳೆಯಲು ತರಹೇವಾರಿ ಹೆಸರುಗಳ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ.

ಕೆಬಿಆರ್ ಡ್ರಾಮಾ ಕಂಪನಿ ಕಳೆದ 62 ವರ್ಷಗಳಿಂದ ಮೈಲಾರ ಜಾತ್ರೆಗೆ ಆಗಮಿಸಿ ನಾಟಕ ಪ್ರದರ್ಶಿಸುತ್ತಿವೆ. ಈ ವರ್ಷ ಸಹ ಕೆ.ಬಿ.ಆರ್ ಡ್ರಾಮಾ ಕಂಪನಿ ಮೈಲಾರ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ನೀ ಬಾ ನಾನು ಬರ್ತೇನೆ ಎಂಬ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶಿಸುತ್ತಿದೆ. ಇನ್ನು ಕಮತಗಿ ನಾಟಕ ಕಂಪನಿ 'ನಾ ಡ್ರೈವರ್ ಆಕಿ ನನ್ನ ಲವರ್' ಅರ್ಥಾತ್ 'ಕರಿಮಣಿ ಮಾಲೀಕ ನೀನಲ್ಲ' ಹೆಸರಿನ ನಾಟಕ ಪ್ರದರ್ಶಿಸುತ್ತಿದೆ. 'ಗಂಗೆ ಮನ್ಯಾಗ ಗೌರಿ ಹೊಲ್ದಾಗ', 'ಸೆರೆದಂಗಡಿ ಸಂಗವ್ವ', 'ಅಪ್ಪ ಹಂಗ ಮಗ ಹಿಂಗ' ಸೇರಿದಂತೆ ವಿವಿಧ ನಾಟಕಗಳನ್ನು ಈ ಕಂಪನಿಗಳು ಪ್ರದರ್ಶಿಸುತ್ತಿವೆ.

ಇದನ್ನೂ ಓದಿ: ಶುಕ್ರವಾರ ತೆರೆಗಪ್ಪಳಿಸಲಿದೆ ದೇವದಾಸ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ

ಪ್ರತೀ ವರ್ಷ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಜಾತ್ರೆಗಳಲ್ಲಿ ಟೆಂಟ್ ಹಾಕುತ್ತೇವೆ. ಈ ಹಿಂದೆ ಕಂಪನಿ ಅನುಭವಿಸಿರುವ ಹಾನಿಯನ್ನು ಈ ಜಾತ್ರೆಗಳು ತುಂಬಿಕೊಡುತ್ತವೆ ಎನ್ನುವ ನಂಬಿಕೆಯಿಂದ ಟೆಂಟ್‌ಗಳನ್ನು ಹಾಕಿದ್ದೇವೆ. ಜಾತ್ರೆಗೆ ಆಗಮಿಸುವ ಗ್ರಾಮಸ್ಥರು ನಮ್ಮ ನಾಟಕ ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ನಾಟಕ ಕಂಪನಿ ಮಾಲೀಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆತ್ಮಸಾಕ್ಷಿ ಎಂಬ ಮತವಿದೆಯಾ?: ಸಿಎಂ ಸಿದ್ದರಾಮಯ್ಯ ಟೀಕೆ

ಜಾತ್ರೆ ಇರುವಷ್ಟು ದಿನ, ಮುಂದಿನ ಕೆಲ ದಿನಗಳಲ್ಲಿ ನಾವು ಮೈಲಾರದಲ್ಲಿ ನಾಟಕ ಪ್ರದರ್ಶಿಸಲಿದ್ದೇವೆ. ಕಲಾಭಿಮಾನಿಗಳು ನಾಟಕಗಳನ್ನು ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು. ಎಲ್ಲಾ ನಾಟಕ ಕಂಪನಿಗಳ ನಾಟಕಗಳನ್ನು ನೋಡಬೇಕು, ಎಲ್ಲಾ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ನಾಟಕ ಕಂಪನಿ ಮಾಲೀಕರು ಕಲಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಾವು ಅಭಿನಯಿಸುವ ನಾಟಕಗಳಲ್ಲಿ ಯಾವುದೇ ಡಬಲ್ ಮೀನಿಂಗ್ ಇಲ್ಲ. ಅಶ್ಲೀಲತೆ ಇಲ್ಲ, ಅಶ್ಲೀಲ ನೃತ್ಯಗಳು ಇರುವುದಿಲ್ಲ. ಕುಟುಂಬ ಸಮೇತರಾಗಿ ಆಗಮಿಸಿ ನಾಟಕ ವೀಕ್ಷಿಸಿ. ಸಾಮಾಜಿಕ ಕಳಕಳಿ ಇರುವ ನಾಟಕಗಳಿದ್ದು, ಮನೆಯಲ್ಲಿ ತಂದೆ ತಾಯಿ ಹೇಳಲಾಗದ ಮಾತುಗಳನ್ನು ಕಲಾವಿದರ ಅಭಿನಯ ಹೇಳುತ್ತದೆ. ಉತ್ತಮ ಸಂದೇಶ ಸಾರುವ ನಾಟಕಗಳನ್ನು ಅಭಿನಯಿಸುತ್ತಿದ್ದು, ಕಲಾಪ್ರೇಮಿಗಳು ಜಾತ್ರೆಗೆ ಬಂದು ತಮ್ಮ ನಾಟಕಗಳನ್ನು ನೋಡುವಂತೆ ಕಂಪನಿ ಮಾಲೀಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.