ETV Bharat / state

ಕಷ್ಟದ ಜೀವನದ ಅತಿ ದೊಡ್ಡ ಸಂತೋಷದ ದಿನ ಇಂದು, ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ: ಡಿಕೆಶಿ

author img

By ETV Bharat Karnataka Team

Published : Mar 5, 2024, 4:34 PM IST

Updated : Mar 5, 2024, 7:14 PM IST

Etv Bharat
Etv Bharat

ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಬಗ್ಗೆ ಮತ್ತು ಬಾಂಬ್ ಬೆದರಿಕೆ ಇಮೇಲ್ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಇಲ್ಲಿಂದಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದ ಬಗ್ಗೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್​​ನಲ್ಲಿ ರಿಲೀಪ್ ಸಿಕ್ಕಿದೆ ಎಂಬ ಮಾಹಿತಿ ಇದೆ. ನನ್ನ ಮೇಲೆ ಏನು ಕೇಸು ಇತ್ತೋ ಅದು ತಪ್ಪು ಅಂತ ತೀರ್ಪು ಬಂದಿದೆ. ಕೈಗೊಂಡಿರುವ ಕ್ರಮ ಎಲ್ಲವೂ ತಪ್ಪು ಎಂದು ಆದೇಶ ಆಗಿದೆ. ಕಷ್ಟದ ಜೀವನದ ಅತಿ ದೊಡ್ಡ ಸಂತೋಷದ ದಿನ ಇಂದು. ಅಜ್ಜಯ್ಯನ ದರ್ಶನಕ್ಕೆ ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ನಾನು ತಪ್ಪು ಮಾಡಿಲ್ಲ ಅಂತ ಕೋರ್ಟ್ ಹೇಳಿದೆ. ಈಗಲೂ ಸಿಬಿಐ ಏನೇನು ಮಾಡುತ್ತೆ ಅಂತ ಸದ್ಯದಲ್ಲೇ ಹೇಳುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಮೇಲ್ಮನವಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ನನಗೆ ಮಾರ್ಗ ಕಷ್ಟ ಅನ್ನಿಸಿಲ್ಲ. ಜೈಲಿಗೆ ಹೋದಾಗಲೂ ಆತ್ಮ ವಿಶ್ವಾಸದಲ್ಲಿ ಹೋಗಿದ್ದೆ.‌ ಎಷ್ಟು ತೊಂದರೆ ಕೊಡಲು ಯತ್ನಿಸುತ್ತಾರೆ ಅಷ್ಟು ಗಟ್ಟಿಯಾಗಿ ಬೆಳೆಯಲು ಶಕ್ತಿ ನೀಡುತ್ತದೆ. ನಮ್ಮ ಸುತ್ತಮುತ್ತ ಇರುವವರಿಗೆ ಕಿರುಕುಳ ನೀಡಲಾಗುತ್ತಿದೆ. ನನಗೆ ಯಾರೂ ವಿರೋಧಿಗಳಿಲ್ಲ ಎಂದರು.

ಶಿವಕುಮಾರ್ ವಿರುದ್ಧದ 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಈ ಪ್ರಕರಣವನ್ನು ಇನ್ನು ಮುಂದೆ PMLA ಅಡಿ ತನಿಖೆ ಮಾಡಲಾಗುವುದಿಲ್ಲ. ಈ ಪ್ರಕರಣ 2017ರ ಅಗಸ್ಟ್​​ನಲ್ಲಿ ದೆಹಲಿಯಲ್ಲಿ ಪತ್ತೆಯಾದ ನಗದು ಹಣಕ್ಕೆ ಸಂಬಂಧಿಸಿದ್ದಾಗಿದೆ. ಈ ಕುರಿತು ಅಕ್ರಮ ಹಣ ವರ್ಗಾವಣೆ ಸೆಕ್ಷನ್‌ಗಳ ಅಡಿ ಇಡಿ ತನಿಖೆ ಆರಂಭಿಸಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್‌ನಿಂದ ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: ಡಿಕೆಶಿಗೆ ಬಿಗ್​ ರಿಲೀಫ್​: ಅಕ್ರಮ ಹಣ ವರ್ಗಾವಣೆ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಬೆದರಿಕೆ ಮೇಲ್ ಬಂದಿದೆ, ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗಿದೆ: ಬೆದರಿಕೆ ಇ ಮೇಲ್ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಹಾಗೂ ಸಿಎಂಗೆ ಬೆದರಿಕೆಯ ಇ - ಮೇಲ್ ಹಾಕಿದ್ದಾರೆ. 2.5 ಮಿಲಿಯನ್ ಡಾಲರ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.‌ ಅದನ್ನು ನಗರ ಪೊಲೀಸ್ ಕಮಿಷನರ್​​ಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.

ನಮಗೆ ಬೆದರಿಕೆ ಮೇಲ್ ಬಂದಿದೆ. ನಾವು ಅದನ್ನು ನಗರ ಪೊಲೀಸ್ ಆಯುಕ್ತರಿಗೆ ಕೊಟ್ಟಿದ್ದೇವೆ. ಮೊನ್ನೆ ಈ ಬೆದರಿಕೆ ಇ - ಮೇಲ್ ಬಂದಿದೆ. ಹಣ ಕೊಡದೇ ಇದ್ದರೇ ನಾವು ಬಸ್, ರೈಲು, ಟ್ಯಾಕ್ಸಿಗಳು, ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ರಾಜ್ಯಾದ್ಯಂತ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಬಂದಿದೆ ಎಂದು ತಮಗೆ ಬಂದಿರುವ ಇ - ಮೇಲ್ ಓದಿ ಹೇಳಿದರು.

ನಮಗೆ ಬಂದಿರುವ ಬೆದರಿಕೆ ಇ-ಮೇಲ್ ಬೋಗಸಾ?. ನಕಲಿನೋ?. ಯಾವುದು ಅಂತ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡುತ್ತಾರೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್ ಬೆದರಿಕೆ ಇ-ಮೇಲ್; ಎಫ್ಐಆರ್ ದಾಖಲು

Last Updated :Mar 5, 2024, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.