ETV Bharat / state

ಶೆಟ್ಟರ್ ಅವರಿಂದ ತೆರವಾದ ಸ್ಥಾನವನ್ನು ನಿಷ್ಠರಿಗೆ ನೀಡುತ್ತೇವೆ: ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Jan 26, 2024, 2:23 PM IST

Updated : Jan 26, 2024, 3:55 PM IST

DCM DK Sivakumar  Jagadeesh Shettar  ಶೆಟ್ಟರ್ ಪಕ್ಷ ಬಿಟ್ಟಿದ್ದಕ್ಕೆ ಸಂಭ್ರಮ  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಜಗದೀಶ್ ಶೆಟ್ಟರ್
ಶೆಟ್ಟರ್ ಪಕ್ಷ ಬಿಟ್ಟಿದ್ದಕ್ಕೆ ಕಾರ್ಯಕರ್ತರಿಂದ ಸಂಭ್ರಮ, ತೆರವಾದ ಸ್ಥಾನವನ್ನು ನಿಷ್ಠರಿಗೆ ನೀಡುತ್ತೇವೆ: ಡಿಸಿಎಂ ಡಿಕೆಶಿ

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದಕ್ಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಅವರಿಂದ ತೆರವಾದ ಸ್ಥಾನವನ್ನು ನಿಷ್ಠರಿಗೆ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು: ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಸಂಭ್ರಮಪಟ್ಟಿದ್ದಾರೆ. ಅವರಿಂದ ತೆರವಾದ ಎಂಎಲ್‌ಸಿ ಸ್ಥಾನವನ್ನು ನಿಷ್ಠಾವಂತ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ಮಾತನಾಡಿದ ಅವರು, ''ಜಗದೀಶ್ ಶೆಟ್ಟರ್ ಹೋಗಿದ್ದು ಪಕ್ಷ ಕಟ್ಟಲು ಒಳ್ಳೆಯದಾಯಿತು. ಅವರು ಇದ್ದುದರಿಂದ ಮುಜುಗರ ಆಗುತ್ತಿತ್ತು. ಈಗ ಹೋಗಿದ್ದರಿಂದ ಮುಜುಗರ ತಪ್ಪಿದೆ. ಅಲ್ಪಸಂಖ್ಯಾತರು, ಹಿಂದುಳಿದವರು ಅವರನ್ನು ಒಪ್ಪುತ್ತಿರಲಿಲ್ಲ ಎಂದು ಸ್ಥಳೀಯರೇ ಹೇಳಿದ್ದಾರೆ'' ಎಂದರು.

''ಬಹಳ ದೂರದೃಷ್ಟಿಯಿಂದ ಶೆಟ್ಟರ್ ಅವರಿಗೆ ಅವಕಾಶ ಕೊಟ್ಟಿದ್ದೆವು. ಬಿಜೆಪಿ ವಿರುದ್ಧ ಅವರು ಕೊಟ್ಟ ಹೇಳಿಕೆಗಳಿಗೆ ಅವರೇ ಉತ್ತರ ಕೊಡಬೇಕು. ನಾವೇನೂ ಉತ್ತರ ಕೊಡುವ ಅಗತ್ಯ ಇಲ್ಲ. ಶೆಟ್ಟರ್ ಬಿಟ್ಟು ಒಂದು ದಿನ ಆಯ್ತು. ಒಂದು ದಿನ ಸೂರ್ಯ ಹುಟ್ಟಿತು, ಒಂದು ದಿನ ಮುಳುಗಿತು ಅಂದುಕೊಂಡು ಮರೆಯಬೇಕು. ಅವರಿಂದ ತೆರವಾದ ಸ್ಥಾನವನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕೊಡಲಿದ್ದೇವೆ'' ಎಂದು ತಿಳಿಸಿದರು.

''ಜಗದೀಶ ಶೆಟ್ಟರ್ ನಮ್ಮ‌ ಪಕ್ಷಕ್ಕೆ ಸೇರಿದ್ದರು. ಚುನಾವಣೆಯಲ್ಲಿ 35,000 ಅಂತರದಲ್ಲಿ ಸೋತರು. ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡುತ್ತಾರೆ ಎಂದು ಸೇರಿದರು. ನಾನೇ ಇದೇ ವೇದಿಕೆಯಲ್ಲಿ ಅವರನ್ನು ಸೇರಿಸಿದ್ದೆ. ಅವರ ಹಿರಿತನಕ್ಕೆ ಗೌರವ ಕೊಟ್ಟು ಎಂಎಲ್​ಸಿ ಮಾಡಿದ್ದೆವು. ಎರಡು ಮೂರು ತಿಂಗಳಲ್ಲಿ ಬಿಜೆಪಿಯವರು ಅವರ ಸಂಪರ್ಕದಲ್ಲಿದ್ದು ಗೊತ್ತಿತ್ತು. ಅವರು ಅನೇಕರನ್ನು ಬಿಜೆಪಿಯಿಂದ ಕಾಂಗ್ರೆಸ್​ಗೆ ಸೇರಿಸಲು ಪಟ್ಟಿಯನ್ನು ಕೊಟ್ಟಿದ್ದರು. ಕೆಲವರನ್ನು ಕಾಂಗ್ರೆಸ್​ಗೆ ಸೇರಿಸಿದ್ದರು. ಈಗ ಏಕಾಏಕಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.

''ನಮ್ಮ ಪಕ್ಷ ದೊಡ್ಡ ಸಮುದ್ರ ಇದ್ದ ಹಾಗೆ. ನೂರಾರು ಜನ ಬೇಕಾದರೂ ಬರಬಹುದು, ಹೋಗಬಹುದು. ಯಾರಿಂದಲೂ ಏನು ಮಾಡುವುದಕ್ಕೆ ಆಗಲ್ಲ‌. ಕಾಂಗ್ರೆಸ್ ದೊಡ್ಡ ಶಕ್ತಿ. ಬಹಳಷ್ಟು ಜನ ನಮ್ಮತ್ತ ಬರಲು ಸಿದ್ದರಿದ್ದಾರೆ. ಆದರೆ, ಅವರ ಹೆಸರು ಹೇಳಲು ಬಯಸಲ್ಲ‌. ನಾವು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತೇವೆ'' ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಬಿಜೆಪಿ ವಕ್ತಾರ: ''ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.‌ ನಾವು ಹಿಂದೆ ಬಿಜೆಪಿಯವರನ್ನು ದೂರ ಇಡಬೇಕೆಂದು ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೆವು. ಷರತ್ತು ಇಲ್ಲದೇ ಬೆಂಬಲ ನೀಡಿದ್ದೆವು.‌ ಬಳಿಕ ಆಪರೇಷನ್ ಕಮಲ ಮಾಡಿ ಸರ್ಕಾರವನ್ನು ಪತನಗೊಳಿಸಿದರು. ಸರ್ಕಾರ ತೆಗೆದವನ ಜೊತೆನೇ ನಂಟಸ್ತನ ಬೆಳೆಸಿದ್ದಾರೆ'' ಎಂದು ದೂರಿದರು.

''ಜೆಡಿಎಸ್ ಬಿಜೆಪಿಯ ವಕ್ತಾರ ಆಗಿದ್ದಾರೆ. ಕುಮಾರಸ್ವಾಮಿ ಬಿಜೆಪಿಯ ವಕ್ತಾರರಾಗಿದ್ದಾರೆ. ಅವರನ್ನು ತೆಗೆದವರ ಜೊತೆನೇ ಬೆಳಗ್ಗೆ ಸಾಯಂಕಾಲ ತಬ್ಬಿಕೊಂಡು, ನೆಂಟಸ್ತಿಕೆ ಬೆಳೆಸಿದ್ದಾರೆ. ಅವತ್ತು ತಮ್ಮನ್ನು ತೆಗೆದ ಬಿಜೆಪಿಯವರ ವಿರುದ್ಧ ಏನೇನು ಮಾತನಾಡಿದ್ದಾರೆ. ಆ ಮಾತುಗಳಿಗೆ ಅವರೇ ಉತ್ತರ ಕೊಡಬೇಕು. ದೇವೇಗೌಡರು ಬಿಜೆಪಿ ವಿರುದ್ಧ ಏನು ಹೇಳಿದ್ದರು‌. ಅದಕ್ಕೆ ಅವರೇ ಉತ್ತರ ಕೊಡಬೇಕು'' ಎಂದು ಕಿಡಿಕಾರಿದರು.

ಸವದಿ ನಮ್ಮ ಪಕ್ಷದ ನಾಯಕ: ಲಕ್ಷ್ಮಣ್ ಸವದಿ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಹೋಗೋಣ ಎಂದಿದ್ದಾರೆ. ಅವರು ಪಕ್ಷದ ಆಸ್ತಿಯಾಗಿರಲಿದ್ದಾರೆ. ಅವರು ನಮ್ಮ ನಾಯಕರು ಎಂದು ಇದೇ ವೇಳೆ ತಿಳಿಸಿದರು. ನಮಗೂ ಆ ತರ ಮಾಡಲು ಗೊತ್ತು. ನಾವು ಸುಮ್ಮನೆ ಇದ್ದೇವೆ. ಇಲ್ಲದಿದ್ದರೆ ಎಷ್ಟೋ ಮನೆಗಳು ಖಾಲಿ ಆಗುತ್ತಿತ್ತು. ನಾನು ಬಿಜೆಪಿಯವರ ಸಂಪರ್ಕದಲ್ಲಿದ್ದೇನೆ. ನಾನು ಪಟ್ಟಿ ಹೇಳಬೇಕಾ? ಎಂದು ಇದೇ ವೇಳೆ ಆಪರೇಷನ್ ಹಸ್ತದ ಸುಳಿವು ಕೊಟ್ಟರು.

ಸಚಿವ ರಾಜಣ್ಣ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ: ಸಚಿವ ಕೆ.ಎನ್.ರಾಜಣ್ಣ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎಐಸಿಸಿ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಅವರು ಸಂಪುಟ ಸಚಿವರಾಗಿದ್ದು, ಸಿಎಂ ಅದಕ್ಕೆ ಉತ್ತರ ನೀಡಲಿದ್ದಾರೆ. ರಾಷ್ಟ್ರೀಯ ನಾಯಕರು ಇದನ್ನು ಗಮನಿಸಿದ್ದಾರೆ'' ಎಂದರು.

ನಿಗಮ ಮಂಡಳಿ ನೇಮಕದ ಒಂದೊಂದೇ ಜಿಒ ಹೊರಬೀಳುತ್ತೆ: ಇದೇ ವೇಳೆ ನಿಗಮ ಮಂಡಳಿ ನೇಮಕ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಟಿವಿ ನೋಡ್ತಾ ಇರಿ‌. ಗಣರಾಜ್ಯೋತ್ಸವದ ಶುಭ ಸುದ್ದಿ ಬರಲಿದೆ. ಒಂದೊಂದೇ ಜಿಒಗಳು ಹೊರ ಬೀಳಲಿದೆ'' ಎಂದು ತಿಳಿಸಿದರು.

ಸಚಿವ ಶಿವರಾಜ ತಂಗಡಗಿ

ಬಿಜೆಪಿ ಸೇರ್ಪಡೆಯಿಂದ ಶೆಟ್ಟರ್ ಗೌರವ ಕಡಿಮೆ- ಸಚಿವ ತಂಗಡಗಿ: ''ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ದಕ್ಕೆಯಾಗಿಲ್ಲ. ಆದರೆ, ಶೆಟ್ಟರ್ ಗೌರವ ಕಡಿಮೆಯಾಗಿದೆ'' ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ನಮ್ಮ ಪಕ್ಷದಲ್ಲಿ ಶೆಟ್ಟರಿಗೆ ಹಿರಿತನ ಕೊಟ್ಟಿದ್ದೆವು. ಹಿರಿಯರು ಮನೆಬಿಟ್ಟು ಹೋಗಿದ್ದು ನೋವಾಗಿದೆ. ಇಂತಹ ಕೆಲಸವನ್ನು ನಮ್ಮಂಥವರ ಮಾಡಬೇಕಾಗಿತ್ತು. ಆದರೆ, ಅವರು ಹೋಗಿದ್ದು ನೋವಾಗಿದೆ'' ಎಂದರು.

''ಬರ ಪರಿಹಾರ ಹಣವನ್ನು ಈಗ ರೈತರ ಖಾತೆಗೆ ಜಮಾ ಮಾಡುತ್ತೇವೆ. ಆದರೆ, ಕೇಂದ್ರ ಸರಕಾರದಿಂದ ಬರಬೇಕಾದ ಬರಪರಿಹಾರ ಇನ್ನುವರೆಗೂ ಬಂದಿಲ್ಲ. ಈ ಕುರಿತು ರಾಜ್ಯದ ಸಂಸದರು ಒಬ್ಬರೂ ಮಾತನಾಡುತ್ತಿಲ್ಲ. ಇದು ನೋವಿನ ಸಂಗತಿಯಾಗಿದೆ. ಕೆಂದ್ರ ಸರಕಾರಕ್ಕೆ ಬಡವರ ಬಗ್ಗೆ, ರೈತರಬಗ್ಗೆ ಕಾಳಜಿ ಇಲ್ಲ. ಅವರಿಗೆ ಬೇಕಿರುವುದು ಮಂತ್ರಾಕ್ಷತೆ, ಅಂತ್ರಾಕ್ಷತೆ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೋದಿಯನ್ನು ಭೇಟಿಯಾದಾಗ ಬರ ಪರಿಹಾರ ಕುರಿತು ಒಂದು ಮಾತನಾಡಲಿಲ್ಲ. ಕೇವಲ ಕಾರ್ಯಕ್ರಮದ ಕುರಿತು ಮಾತನಾಡಿದರು. ಅವರಿಗೆ ರೋಡ್ ಶೋ ಮಾಡಲು ಟೈಂ ಇದೆ. ಆದರೆ, ಬಡವರಬಗ್ಗೆ ಮಾತನಾಡಲು ಸಮಯವಿಲ್ಲ'' ಎಂದು ತಿಳಿಸಿದರು.

''ಪ್ರಜಾಪ್ರಭುತ್ವ ಏನಾದರೂ ಇದ್ದರೆ, ಅದು ಕಾಂಗ್ರೆಸ್ಸಿನಲ್ಲಿ ಮಾತ್ರ ಇಲ್ಲಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆಯಿದೆ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷದ ಆಡಳಿತ ಮಾಡಿದರು ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸಂಸದರ ಮಾತನ್ನಾಗಲಿ ಅವರ ಅಭಿಪ್ರಾಯವನ್ನಾಗಲಿ ಕೇಳಿದ್ದಾರಾ? ಹೇಳಿ ಎಂದು ಅಸಮಾದಾನ ವ್ಯಕ್ತಪಡಿಸಿದರು.
ರಾಹುಲ್ ಯಾತ್ರೆಯಿಂದ ಬಿಜೆಪಿಯಲ್ಲಿ ನಡುಕ ಹುಟ್ಟಿದೆ. ಮುಂದಿನ ದಿನಗಳಲ್ಲಿ ರಾಮನೂ ಸಹ ಬಿಜೆಪಿಗರಿಗೆ ಶಾಪ ಹಾಕುತ್ತಾನೆ. ನಾವು ಜೈ ರಾಮ ಎಂದರೆ ಬಿಜೆಪಿಗ್ಯಾಕೆ ಆತಂಕ?'' ಎಂದು ನುಡಿದರು.

ಆನೆಗೊಂದಿ ಉತ್ಸವಕ್ಕೆ 3.50 ಕೋಟಿ: ''ಆನೆಗೊಂದಿ ಹಾಗೂ ಕನಕಗಿರಿ ಉತ್ಸವಕ್ಕೆ ಪ್ರಸ್ತಾವನೆ ತರಿಸಿಕೊಂಡಿದ್ದೇನೆ. ರಾಜ್ಯ ಸರಕಾರ ಈಗಾಗಲೆ 3.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಆದಷ್ಟು ಶೀಘ್ರವಾಗಿ ಉತ್ಸವ ಕೈಗೊಳ್ಳಲಾಗುವುದು'' ಎಂದು ಅವರು ಮಾಹಿತಿ ನೀಡಿದರು. ''ಅಂಜನಾದ್ರಿಗೆ ಈಗಾಗಲೇ ಸರಕಾರ 100 ಕೋಟಿ ರೂಪಾಯಿ ನೀಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 100 ಕೋಟಿ ರೂಪಾಯಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು'' ಎಂದರು.

ಇದನ್ನೂ ಓದಿ: ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಬದ್ಧತೆ ಮೆರೆದಿದೆ: ರಾಜ್ಯಪಾಲ ಗೆಹ್ಲೋಟ್

Last Updated :Jan 26, 2024, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.