ETV Bharat / state

ಮಗಳ ಮೂಲಕ ಸಮಸ್ಯೆ ಹೇಳಿಕೊಂಡ ತಾಯಿ: ಸ್ಥಳದಲ್ಲೇ ಪರಿಹಾರಕ್ಕೆ ಆದೇಶಿಸಿದ ಡಿಸಿಎಂ ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Feb 18, 2024, 7:53 PM IST

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಜನರ ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ.

ಬೆಂಗಳೂರು : ಮಾತು ಬಾರದ ಸುನೀತಾ ಬಾಯಿ ತನ್ನ ಮಗಳಾದ ಅರ್ಪಿತ ಮೂಲಕ ಸಮಸ್ಯೆ ಹೇಳಿಕೊಂಡರು. ಮಗುವಿನ ವಾಕ್ಚಾತುರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಿಸಿಎಂ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಕರೆದು "ಸುನೀತಾ ಬಾಯಿ ಅವರಿಗೆ ಪಿಂಚಣಿ ಹಣ ಮತ್ತು ಗೃಹಲಕ್ಷ್ಮೀ ಹಣ ಬರುವಂತೆ ವ್ಯವಸ್ಥೆ ಮಾಡಬೇಕು"ಎಂದು ಆದೇಶಿಸಿದರು.

ಜ್ಞಾನಭಾರತಿ ಆವರಣದ ಬಿಪಿಎಡ್ ಕ್ರೀಡಾಂಗಣದಲ್ಲಿ ನಡೆದ ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಜನರ ನೂರಾರು ಸಮಸ್ಯೆಗಳಿಗೆ ಡಿಸಿಎಂ ಸ್ಥಳದಲ್ಲೇ ಪರಿಹಾರ ನೀಡಿದರು.

ಜನರ ಸಮಸ್ಯೆಗೆ ಪರಿಹಾರ ನೀಡಿದ ಡಿಸಿಎಂ
ಜನರ ಸಮಸ್ಯೆಗೆ ಪರಿಹಾರ ನೀಡಿದ ಡಿಸಿಎಂ

ತಕ್ಷಣ ಸ್ಪಂದಿಸಿ ನನಗೆ ಮಾಹಿತಿ ನೀಡಿ: ಆರ್. ಆರ್ ನಗರ ನಿವಾಸಿ ಎರಡು ಕಾಲುಗಳಿಲ್ಲದ ರಾಜಪ್ಪ ಅವರು ಪೆಟ್ಟಿಗೆ ಅಂಗಡಿ ಹಾಕಿಕೊಡಿ ಏನಾದರೂ ವ್ಯಾಪಾರ ಮಾಡಿಕೊಂಡು ಬದುಕುತ್ತೇನೆ ಎಂದಾಗ "ಇವರ ಮನವಿಗೆ ತಕ್ಷಣ ಸ್ಪಂದಿಸಿ ನನಗೆ ಮಾಹಿತಿ ನೀಡಿ" ಎಂದು ಡಿಸಿಎಂ ಹೇಳಿದರು.

ಜನರ ಸಮಸ್ಯೆ ಆಲಿಸುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್
ಜನರ ಸಮಸ್ಯೆ ಆಲಿಸುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್

"ಕೆಂಪೇಗೌಡ ಬಡಾವಣೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಮುನ್ನವೇ ನಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದೆವು. ಆದರೂ ಮನೆ ಕೆಡವಲಾಗಿದೆ" ಎಂಬ ಚಂದ್ರಶೇಖರ್ ಅವರ ಮನವಿಗೆ "ಈ ರೀತಿಯ ಅನೇಕ ಸಮಸ್ಯೆಗಳಿದ್ದು ಮೊದಲ ಆದ್ಯತೆ ನೀಡಿ ಬಗೆಹರಿಸುತ್ತೇನೆ" ಎಂದು ಯುವಕನಿಗೆ ಭರವಸೆ ನೀಡಿದರು.

ಪೀಣ್ಯದಲ್ಲಿ ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಜಾಗದ ಮಾಲೀಕರಿಗೆ ತಿಂಗಳಿಗೆ 1 ಸಾವಿರ ಕಟ್ಟುತ್ತಿದ್ದೇವೆ ಎಂದು ರೇಣುಕ, ರಂಗಮ್ಮ, ಗುರುಬಾಯಿ, ಕವಿತಾ, ಶಾಂತಮ್ಮ ಅವರು ಮನವಿ ಸಲ್ಲಿಸಿದಾಗ "ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿ, ಖುದ್ದಾಗಿ ನಾನೇ ಮನೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ" ಎಂದು ಡಿಸಿಎಂ ಅಭಯ ನೀಡಿದರು.

ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿಸಿಎಂ ಡಿ ಕೆ ಶಿವಕುಮಾರ್
ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರಿಗೆ ಬಂದು 30 ವರ್ಷ ದುಡಿದು ಸೈಟ್ ತೆಗೆದುಕೊಂಡಿದ್ದೇನೆ. ಮನೆ ಕಟ್ಟಲು ಯಾವುದಾದರೂ ಬ್ಯಾಂಕಿನಿಂದ ಸಾಲ ಕೊಡಿಸಿ ಎಂದು ಲಗ್ಗೆರೆಯ ಲೀಲಾವತಿಯವರು ಕೇಳಿದಾಗ "ಒಳ್ಳೆಯ ಮನೆ ಕಟ್ಟಿ, ಎಲ್ಲಾದರೂ ಸಾಲ ಸೌಲಭ್ಯ ದೊರೆಯುವಂತೆ ಮಾಡಿಕೊಡುತ್ತೇನೆ" ಎಂದು ಭರವಸೆ ನೀಡಿದರು.

ನೀವು ಒಬ್ಬಂಟಿಯಲ್ಲ : ಗಂಡ, ಮಕ್ಕಳಿಲ್ಲದ ನಾನು ಒಬ್ಬಂಟಿ. ಪಡಿತರ ಚೀಟಿ ಇಲ್ಲ ಎಂದು ಕಣ್ಣೀರಿಟ್ಟ ಆರ್. ಆರ್ ನಗರದ ಸಿದ್ದಲಿಂಗಮ್ಮ ಅವರಿಗೆ "ನಮ್ಮ ಸರ್ಕಾರ ನಿಮ್ಮ ಜೊತೆಗಿದೆ. ನೀವು ಒಬ್ಬಂಟಿಯಲ್ಲ" ಎಂದು ಡಿಸಿಎಂ ಸಮಾಧಾನ ಮಾಡಿದರು.

ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ಬಳಿ ತೆರಳಿ ಅವರ ನಡುವೆಯೇ ಕುಳಿತು ಸಾವಧಾನದಿಂದ ಸಮಸ್ಯೆಗಳನ್ನು ಆಲಿಸಿ, ಅರ್ಜಿಗಳಲ್ಲಿ ದೋಷಗಳಿದ್ದರೆ ತಿದ್ದುಪಡಿ ಮಾಡಿದ ಡಿಸಿಎಂ ಅವರು, ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು ವಿಶೇಷವಾಗಿತ್ತು.

ತುರ್ತು ಕಾರ್ಯದ ನಿಮಿತ್ತ ಡಿ. ಕೆ ಶಿವಕುಮಾರ್ ಅವರು ತೆರಳಿದ ನಂತರ ಸಂಸದ ಡಿ. ಕೆ ಸುರೇಶ್ ಅವರು ಜನರ ಸಮಸ್ಯೆಗಳನ್ನು ಆಲಿಸಿದರು.

"ಏನು ಮಾಡುತ್ತಿರೋ ನನಗೆ ಗೊತ್ತಿಲ್ಲ. ಮೂರು ದಿನದೊಳಗೆ ಮಂಜುನಾಥ್ ಅವರ ಮಕ್ಕಳಿಗೆ ವಿಕಲಚೇತನರ ಮಾಶಾಸನ ಬರುವಂತೆ ವ್ಯವಸ್ಥೆ ಮಾಡಬೇಕು" ಎಂದು ಬಿಬಿಎಂಪಿ ವಲಯ ಅಧಿಕಾರಿಗೆ ಸಂಸದರಾದ ಡಿ ಕೆ ಸುರೇಶ್ ಅವರು ಸೂಚನೆ ನೀಡಿದರು."ನನ್ನ ಇಬ್ಬರೂ ಮಕ್ಕಳು ಹುಟ್ಟು ಕುರುಡರಾಗಿದ್ದು, ಡ್ರೈವರ್ ಆಗಿ ಕೆಲಸ ಮಾಡುವ ನನಗೆ ಅಪಘಾತವಾಗಿ ಶಸ್ತ್ರಚಿಕಿತ್ಸೆಯಾಗಿದೆ. ಸಹಾಯ ಮಾಡಿ'' ಎಂದ ಶ್ರೀನಗರದ ಮಂಜುನಾಥ್ ಮನವಿಗೆ ಸಂಸದರು ಸ್ಪಂದಿಸಿದರು.
ಸಂಸದ ಡಿ. ಕೆ ಸುರೇಶ್ ಅವರ ಸಹಾಯಕ್ಕೆ ಮಂಜುನಾಥ್ ಅವರು ಭಾವುಕರಾಗಿ ಕಣ್ಣೀರು ಹಾಕುತ್ತಲೇ ಧನ್ಯವಾದಗಳನ್ನು ತಿಳಿಸಿದರು.

ತರಕಾರಿ ವ್ಯಾಪಾರ ಮಾಡುವ ಮಂಜುಳ ಅವರು 4 ಪುಟ್ಟ ಮಕ್ಕಳ ಜೊತೆ ಧಾರವಾಡದಿಂದ ಬಂದಿದ್ದನ್ನು ಗಮನಿಸಿ ಧನಸಹಾಯ ಮಾಡಿದ್ದಲ್ಲದೆ, ಅವರ ಸಮಸ್ಯೆ ಪರಿಹಾರಕ್ಕೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರು ತೀರಿ ಹೋಗಿದ್ದು, ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ ಎಂದು ಸುಂಕದಕಟ್ಟೆಯ ಜಗದೀಶ್ ಅವರು ಮನವಿ ನೀಡಿದಾಗ, "ಮನೆಯ ಬಳಿ ಬಾ ರಾಮಲಿಂಗರೆಡ್ಡಿ ಅವರ ಗಮನಕ್ಕೆ ತಂದು ಕೆಲಸ ದೊರೆಯುವಂತೆ ಮಾಡುತ್ತೇನೆ" ಎಂದು ತಿಳಿಸಿದರು.

ಲಗ್ಗೆರೆ ವಾರ್ಡಿನ ಅಂಧ ಸ್ನೇಹಿತರಾದ ರಾಜು, ಶಾಲು, ಅಣ್ಣಮ್ಮ, ಮಹಾಲಕ್ಷ್ಮಿ ಅವರುಗಳು ವಾಸಿಸಲು ಮನೆ, ದುಡಿಯಲು ಕೆಲಸ ಬೇಕು" ಎಂದು ಕೇಳಿದರು. ಸುಂಕದಕಟ್ಟೆಯ ನಿರ್ಮಲ, ರೂಪಾ, ಗಂಗಮ್ಮ, ಯಮುನ, ಲಗ್ಗೆರೆಯ ಶಾರದಮ್ಮ, ಆರ್.ಆರ್ ನಗರದ ವಿನುತಾ ಅವರುಗಳು "ನಮಗೆ ವಾಸಿಸಲು ಮನೆ ನೀಡಿ" ನಿಮ್ಮ ಪಕ್ಷಕ್ಕೆ ನಾವು ಮತ ಹಾಕಿರುವುದು ಎಂದರು.

ಕನಕಪುರದ ಗಗನ್ ದೀಪ್ ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದಾಗ, "ಕನಕಪುರದವನು ಇಲ್ಲಿಗೆ ಏಕೆ ಬಂದೆ. ಊರಲ್ಲಿ ಲಾಟರಿ ಹಾಕಿ ಹೆಸರು, ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು" ಎಂದು ತಿಳಿಸಿದರು.

ಡಿಸಿಎಂ ಹೊಗಳಿದ ಆರ್‌. ಆರ್ ನಗರ ಶಾಸಕ ಮುನಿರತ್ನ: ಬೆಂಗಳೂರಿಗೆ ಡಿ. ಕೆ ಶಿವಕುಮಾರ್ ಅವರು ಕೊಡುಗೆ ಕೊಟ್ಟೆ ಕೊಡುತ್ತಾರೆ ಎನ್ನುವ ನಂಬಿಕೆ ನನಗಿದೆ. ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅವರನ್ನು ಆರ್‌ ಆರ್‌ ನಗರ ಶಾಸಕ ಮುನಿರತ್ನ ಅವರು ಹೊಗಳಿದರು.

ಇಬ್ಬರೂ ಬೆಂಗಳೂರನ್ನು, ಇದರ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಡಿಸಿಎಂ ಕೊಡುಗೆ ನೀಡುವುದರಲ್ಲಿ ಅನುಮಾನವಿಲ್ಲ ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ : ಮಹದಾಯಿ ಯೋಜನೆ ಜಾರಿಗೆ ರಾಜ್ಯ ಉತ್ಸುಕ, ಕೇಂದ್ರ ಸಹಕರಿಸುತ್ತಿಲ್ಲ: ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.