ETV Bharat / state

ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿ ಶುದ್ಧೀಕರಣದೆಡೆಗೆ ನನ್ನ ನಡಿಗೆ: ಸದಾನಂದ ಗೌಡ - D V Sadananda Gowda

author img

By ETV Bharat Karnataka Team

Published : Mar 21, 2024, 11:23 AM IST

Updated : Mar 21, 2024, 12:13 PM IST

ಕಾಂಗ್ರೆಸ್‌ ಪಕ್ಷ ಸೇರುವುದಿಲ್ಲ. ಆದರೆ ರಾಜ್ಯ ಬಿಜೆಪಿಯ ಶುದ್ಧೀಕರಣ ಮಾಡುತ್ತೇನೆ ಎಂದು ಮಾಜಿ ಸಿಎಂ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

Etv Bharat
Etv Bharat

ಬೆಂಗಳೂರು: ಕಾಂಗ್ರೆಸ್​​ನಿಂದ ಆಹ್ವಾನ ಬಂದಿರುವುದು ನಿಜ. ಆದರೆ ಯಾವ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಇಲ್ಲಿಯೇ ಇದ್ದು ಕರ್ನಾಟಕ ಬಿಜೆಪಿಯ ಶುದ್ಧೀಕರಣ ಮಾಡುತ್ತೇನೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಲೇ ರಾಜ್ಯ ನಾಯಕರ ವಿರುದ್ಧ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅಸಮಾಧಾನ ಹೊರಹಾಕಿದರು.

ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ನಡಿಗೆ: ಸಂಜಯ ನಗರ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ದುಃಖವಾಗಿದೆ ಎನ್ನುವುದು ನಿಜ. ಕಾಂಗ್ರೆಸ್​​ನಿಂದ ಆಹ್ವಾನ ಬಂದಿದ್ದೂ ನಿಜ. ಆದರೆ ಕಾಂಗ್ರೆಸ್ ಸೇರುವುದಿಲ್ಲ. ನನ್ನ ಮುಂದಿನ ರಾಜಕೀಯ ನಡೆಯೇನು ಎನ್ನುವ ವಿಚಾರದಲ್ಲಿ ಸ್ಪಷ್ಟವಾಗಿದ್ದೇನೆ. ಕರ್ನಾಟಕದ ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ನಡಿಗೆ ಮುಂದುವರೆಯಲಿದೆ ಎಂದರು.

ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ: ಕಾಂಗ್ರೆಸ್​​ನಿಂದ ಆಹ್ವಾನ ಇತ್ತು, ‌ಕಾಂಗ್ರೆಸ್ ನಾಯಕರು ನೀವು ಎಲ್ಲಿಯೇ ನಿಲ್ಲಿ ಗೆಲ್ಲಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ನಿಮಗಾದ ಅನ್ಯಾಯದ ಪರ ನಿಂತು ಕೆಲಸ ಮಾಡುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಸೇರಲ್ಲ, ಬಿಜೆಪಿ ತೊರೆಯಲ್ಲ. ಯಾವ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನನ್ನನ್ನು ಅವಮಾನಿಸಿದವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೆ ದುಃಖ ಕೊಟ್ಟವರು ಇದ್ದೂ ಸತ್ತಂತೆ, ನನಗೆ ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.

ಬಿಜೆಪಿ ಕುಟುಂಬ ರಾಜಕಾರಣ ಮುಕ್ತ ಆಗಬೇಕು: ನಾನು ಕೈಲಾಗದವನಲ್ಲ. ಕೊಟ್ಟ ಕುದುರೆ ಏರಲಾಗದವನಲ್ಲ. ರಾಜ್ಯ ಬಿಜೆಪಿ ಕುಟುಂಬ ರಾಜಕಾರಣ ಮುಕ್ತ ಆಗಬೇಕು. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ನನ್ನ ಕುಟುಂಬ ಅನ್ನೋ ಸಂಸ್ಕೃತಿ ಹೋಗಬೇಕು. ರಾಜ್ಯ ಬಿಜೆಪಿ ಶುದ್ಧೀಕರಣ ಮಾಡಬೇಕು. ಪಕ್ಷಕ್ಕೆ ದುಡಿದವರ ಕಡೆಗಣನೆ ಸರಿಯಲ್ಲ. ಸರ್ವಾಧಿಕಾರಿ ಧೋರಣೆ ರಾಜ್ಯದಲ್ಲಿ ನಡೆಯಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 'ಮೋದಿ ಕಾರ್ಯಕ್ರಮಕ್ಕೆ ಸೌಜನ್ಯಕ್ಕೂ ಆಹ್ವಾನಿಸಲಿಲ್ಲ': ಬಿಎಸ್‌ವೈ ವಿರುದ್ಧ ರೇಣುಕಾಚಾರ್ಯ ಅಸಮಾಧಾನ

ಸರ್ವಾಧಿಕಾರಿ ವ್ಯಕ್ತಿತ್ವ ರಾಜಕೀಯಕ್ಕೆ ಒಳ್ಳೆಯದಲ್ಲ: ಪಕ್ಷದಲ್ಲಿ ಜಾತಿ ಸಮೀಕರಣ ನಡೆಯಬೇಕು. ಬಿಜೆಪಿಯನ್ನು ಕಟ್ಟಿ ಬೆಳೆಸುವ ಬೇರೆ ಬೇರೆ ಜನರಿಗೆ ಅವಕಾಶಗಳು ಸಿಗಬೇಕು. ಜೆಡಿಎಸ್ ಅನ್ನು ಎನ್​ಡಿಎಗೆ ಸೇರಿಸಿಕೊಂಡ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಆದರೆ ಹತ್ತು ಹಲವು ವರ್ಷ ಕೆಲಸ ಮಾಡಿರುವ ನಮ್ಮ ಕಾರ್ಯಕರ್ತರನ್ನು ಅವಗಣನೆ ಮಾಡುತ್ತಿರುವುದು ಪಕ್ಷಕ್ಕೆ ಮತ್ತು ರಾಜಕಾರಣಕ್ಕೂ ಮಾರಕ. ಇದು ಆಗಬಾರದು. ಸರ್ವಾಧಿಕಾರಿ ವ್ಯಕ್ತಿತ್ವ ರಾಜಕೀಯಕ್ಕೆ ಒಳ್ಳೆಯ ಸಂದೇಶ ಕೊಡಲ್ಲ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ವಿಶೇಷವಾಗಿ ಚುನಾವಣಾ ರಾಜಕಾರಣದಿಂದ ನಾನು ದೂರ ಸರಿಯುತ್ತೇನೆ ಎಂದು ಹೇಳಿದ ನಂತರ ಚುನಾವಣಾ ಕಣಕ್ಕೆ ಮತ್ತೆ ಇಳಿಯಬೇಕು ಎಂದು ಹಲವರು ಒತ್ತಡ ಹಾಕಿದರು. ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದೆ. ಆದರೆ ಬಹಳ ಚಂದ ಆರತಿ ಮಾಡಿ ಸ್ಪರ್ಧೆ ಮಾಡಿ ಎಂದರು. ನಂತರ ಮಂಗಳಾರತಿ ಮಾಡಿ ಟಿಕೆಟ್ ಇಲ್ಲ ಎಂದು ಕಳುಹಿಸಿದರು ಎಂದು ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಡ್ಯ ಟಿಕೆಟ್ ಬಗ್ಗೆ ವರಿಷ್ಠರು ಇನ್ನೂ ತೀರ್ಮಾನಿಸಿಲ್ಲ: ಸುಮಲತಾ ಅಂಬರೀಶ್​​

Last Updated :Mar 21, 2024, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.