ETV Bharat / state

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್​ನಿಂದ ಕುಕ್​ ಹತ್ಯೆ, 4 ದಿನಗಳಲ್ಲಿ ನಾಲ್ಕನೇ ಕೊಲೆ

author img

By ETV Bharat Karnataka Team

Published : Feb 7, 2024, 3:50 PM IST

Updated : Feb 7, 2024, 4:04 PM IST

Etv Bharatcook-killed-by-hotel-supplier-in-dharwad
ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್​ನಿಂದ ಕುಕ್​ ಕೊಲೆ, ​4 ಕೊಲೆಗಳಿಂದ ಬೆಚ್ಚಿಬಿದ್ದ ಜನ

ಹೋಟೆಲ್​ವೊಂದರಲ್ಲಿ ಕುಕ್​ ಆಗಿದ್ದ ವ್ಯಕ್ತಿಯನ್ನು ಅಲ್ಲೇ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಕೊಲೆ ಮಾಡಿರುವ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಸಪ್ಲೈಯರ್​ನಿಂದ ಕುಕ್​ ಹತ್ಯೆ

ಧಾರವಾಡ: ಹೋಟೆಲ್​ವೊಂದರಲ್ಲಿ ಕುಕ್​ ಆಗಿದ್ದ ವ್ಯಕ್ತಿಯನ್ನು ಅಲ್ಲೇ ಕೆಲಸ ಮಾಡುತ್ತಿದ್ದ ಸಪ್ಲೈಯರ್​ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಫಕ್ಕೀರೇಶ ಪ್ಯಾಟಿ (40) ಕೊಲೆಗೀಡಾದ ಕುಕ್​. ಕನ್ನಯ್ಯಪ್ಪ ಕೊಲೆ ಮಾಡಿದ ಆರೋಪಿ.

ಪ್ರಕರಣ ಹಿನ್ನೆಲೆ: 10 ವರ್ಷಗಳ ಹಿಂದೆ ಧಾರವಾಡದ ಹೋಟೆಲ್‌ನಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಫಕ್ಕೀರೇಶ ಸೇರಿಕೊಂಡಿದ್ದ. ಈತನ ಜೊತೆಗೆ ದಾಂಡೇಲಿ ಮೂಲದ ಕನ್ಯಯಪ್ಪ ಎಂಬ ವ್ಯಕ್ತಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿದ್ದ. ನಿನ್ನೆ ರಾತ್ರಿ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಮಧ್ಯರಾತ್ರಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಕನ್ಯಯಪ್ಪ ಕಬ್ಬಿಣದ ರಾಡ್‌ನಿಂದ ಫಕ್ಕೀರೇಶನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಫಕ್ಕೀರೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರೊಂದಿಗೆ ನಗರದಲ್ಲಿ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಡೆದ ನಾಲ್ಕನೇ ಕೊಲೆ ಪ್ರಕರಣ ಇದಾಗಿದೆ.

ಡಿಸಿಪಿ ರವೀಶ್​ ಮಾತನಾಡಿ, "ನಿನ್ನೆ ತಡರಾತ್ರಿ ಫಕ್ಕೀರೇಶ ಪ್ಯಾಟಿ ಎಂಬಾತನ ಕೊಲೆಯಾಗಿದೆ. ಒಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿತ್ತಿದ್ದೇವೆ. ಕೊಲೆಯಾದವನು ಮತ್ತು ಕೊಲೆ ಆರೋಪಿ ಒಂದೇ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಕ್ಷುಲ್ಲಕ ಕಾರಣಕ್ಕೆ ರಾಡ್​ನಿಂದ ಹಲ್ಲೆ ಮಾಡಿ ಕೊಲೆಗೈದಿರುವುದಾಗಿ ಹೇಳುತ್ತಿದ್ದಾನೆ, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಧಾರವಾಡಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಡೆದ ನಾಲ್ಕು ಕೊಲೆಗಳು ಕ್ಷುಲ್ಲಕ ಕಾರಣಕ್ಕೆ ಮತ್ತು ಅವರ ವೈಯಕ್ತಿಕ ಕಾರಣಗಳಿಂದ ನಡೆದಿವೆ. ಎಲ್ಲಾ ಪ್ರಕರಣಗಳಲ್ಲಿಯೂ ಆರೋಪಿಗಳ ಬಂಧನವಾಗಿದೆ" ಎಂದು ಮಾಹಿತಿ ನೀಡಿದರು.

ಮೃತನ ಸಹೋದರಿ ರೇಣುಕಾ ಮಾತನಾಡಿ, "ಕಳೆದ 10 ವರ್ಷಗಳಿಂದ ಫಕ್ಕೀರೇಶ ಪ್ಯಾಟಿ ಹೋಟೆಲ್​ನಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸ ಮಾಡುತ್ತಿದ್ದರು. ಅವರಿಗೆ ಹೆಂಡತಿ - ಮಕ್ಕಳು ಇದ್ದಾರೆ" ಎಂದರು.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ: ಮೂವರು ಮಕ್ಕಳು ಅನಾಥ

Last Updated :Feb 7, 2024, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.