ETV Bharat / state

ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ, ಹಣದ ಪ್ರಭಾವ ವರ್ಕೌಟ್ ಆಗಿಲ್ಲ; ಗೆಲ್ಲುವ ವಿಶ್ವಾಸವಿದೆ ಎಂದ ಶೆಟ್ಟರ್ - Lok Sabha Election 2024

author img

By ETV Bharat Karnataka Team

Published : May 8, 2024, 3:45 PM IST

Updated : May 8, 2024, 4:12 PM IST

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಣದ ಆಮಿಷಕ್ಕೆ ಜನ ಮರಳು ಆಗಲಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವುದು ಜನರ ಆಶಯ ಆಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಸಿಗುತ್ತದೆ‌ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BJP candidate Jagdish Shettar spoke to the media.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮಾಧ್ಯಮದವರೊಂದಿಗೆ ಮಾತನಾಡಿದರು. (ETV Bharat)

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮಾತನಾಡಿದರು. (ETV Bharat)

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಣದ ಪ್ರಭಾವ ಎಲ್ಲಿಯೂ ಆಗಿಲ್ಲ. ಗ್ಯಾರಂಟಿಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಿವೆ. ಲೋಕಸಭೆ ಚುನಾವಣೆ ಕೇಂದ್ರಕ್ಕೆ ಸಂಬಂಧಿಸಿದ್ದು, ಮೋದಿ ಅವರು ಮತ್ತೆ ಪ್ರಧಾನಿ ಆಗುವ ಹಿನ್ನೆಲೆ ಈ ಗ್ಯಾರಂಟಿ ಯೋಜನೆ, ಹಣದ ಪ್ರಭಾವ ವರ್ಕೌಟ್ ಆಗಿಲ್ಲ. ನಮಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಅದರೆ ಗೆಲುವಿನ ಅಂತರದ ಲೆಕ್ಕಾಚಾರ ಹಾಕಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.

ಕಳೆದ 45 ದಿನಗಳಿಂದ ನಿರಂತರವಾಗಿ ಪ್ರವಾಸ ಮಾಡಿದ್ದ ಜಗದೀಶ ಶೆಟ್ಟರ್ ಅವರು ನಿನ್ನೆ ಮತದಾನ ಮುಗಿದ ಹಿನ್ನೆಲೆ ಬೆಳಗಾವಿ ದಿ ಸುರೇಶ ಅಂಗಡಿಯವರ ಲಕ್ಷ್ಮೀ ಕಾಂಪ್ಲೆಕ್ಸ್​​​ನಲ್ಲಿ ರಿಲ್ಯಾಕ್ಸ್ ಮೂಡನಲ್ಲಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮಾರ್ಚ್ 27ಕ್ಕೆ ಬೆಳಗಾವಿ ಬಂದಾಗಿನಿಂದ ನಿರಂತರವಾಗಿ ಪ್ರವಾಸ ಮಾಡಿ, ಇಡೀ ಕ್ಷೇತ್ರ ಸುತ್ತು ಹಾಕಿದ್ದೇನೆ. ದಿನದಿಂದ ದಿನಕ್ಕೆ ಜನರ ಬೆಂಬಲ ಜಾಸ್ತಿ ಆಗುತ್ತಾ ಹೋಯಿತು. ನೂರಕ್ಕೆ ನೂರು ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣ ಆಗಿತ್ತು. ಅದು ಕಡಿಮೆ ಆಗಲಿಲ್ಲ. ನಮ್ಮ ಗೆಲುವಿನ ವಿಶ್ವಾಸ ಹೆಚ್ಚಾಗಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಹಣದ ಆಮಿಷಕ್ಕೆ ಜನ ಮರಳು ಆಗಲಿಲ್ಲ: ಗೋಕಾಕ್​, ಅರಭಾವಿ ಮುಗಿಸಿ, ಮತದಾನ ಮುಗಿದ ಬಳಿಕ ಬೆಳಗಾವಿಗೆ ಬಂದಾಗ ಹಲವು ನಾಯಕರು ಭೇಟಿಯಾಗಿ, ಮತ್ತೆ ಕೆಲವರು ನನಗೆ ಕರೆ ಮಾತನಾಡಿದ್ದು ನಮಗೆ ಆಶ್ಚರ್ಯ ಆಗಿದೆ. ವಿರೋಧಿಗಳ ಹಣದ ಹಂಚಿಕೆ ನಮಗೆ ಸಮಸ್ಯೆ ಆಗಿತ್ತು. ಜನರು ಎಲ್ಲಿ ಬದಲಾಗುತ್ತಾರೋ ಎಂಬ ಅಳಕು ಇತ್ತು. ಆದರೆ ಹಣಕ್ಕೆ ಜನ ಮರಳು ಆಗಲಿಲ್ಲ. ತತ್ವ, ಸಿದ್ಧಾಂತ, ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದಕ್ಕೆ ಜನ ಬೆಂಬಲಿಸಿದರು. ಹಣಕ್ಕೆ ಬೆಂಬಲ ಕೊಡಲಿಲ್ಲ ಎಂಬ ವಿಚಾರ ಸ್ಪಷ್ಟಪಡಿಸಿದರು. ಹಾಗಾಗಿ, 8 ವಿಧಾನಸಭೆ ಕ್ಷೇತ್ರಗಳಲ್ಲಿ ಲೀಡ್ ಬರುತ್ತದೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಸೇರಿಸಿ ಲೀಡ್ ಆಗುತ್ತದೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಅನ್ನೋದು ಬ್ಯುಸಿನೆಸ್ ಆಗಬಾರದು: ಹಣ ಹಂಚಿ ಚುನಾವಣೆ ಮಾಡೋದಾದ್ರೆ ರಾಜಕೀಯ ಅನ್ನೋದು ಒಂದು ಬ್ಯುಸಿನೆಸ್ ಆಗುತ್ತದೆ. ದುಡ್ಡು ಹೂಡಿಕೆ ಮಾಡಿ ದುಡ್ಡು ತೆಗೆಯುವುದು ಆಗುತ್ತದೆ. ಅಲ್ಲದೇ ಜನರನ್ನು ಕೆಡಿಸಿದಂತೆ ಆಗುತ್ತದೆ. ಈ ರೀತಿ ನೀವು ಜನರಿಗೆ ಹಣ ಕೊಡುವ ಚಟ ಹಚ್ಚಿಸಿದರೆ, ರಾಜಕಾರಣ ಒಂದು ಬ್ಯುಸಿನೆಸ್ ಆಗುತ್ತದೆ. ಆದರೆ, ರಾಜಕಾರಣಕ್ಕೆ ನಾವೆಲ್ಲಾ ಬಂದಿರೋದು ಜನರ ಸೇವೆ ಮಾಡಲು. ಹಾಗಾಗಿ, ಈ ರೀತಿ ದುಡ್ಡು ಹಂಚಿದರೆ ರಾಜಕಾರಣಕ್ಕೆ ಅರ್ಥವೇ ಉಳಿಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಕತ್ತನ್ನು ಹಿಸುಕಿದಂತಾಗುತ್ತದೆ. ನನ್ನ ಎಂಟು ಚುನಾವಣೆಗಳಲ್ಲಿ ಮತದಾರರಿಗೆ ಯಾವತ್ತೂ ಹಣ ಹಂಚಿಲ್ಲ. ಕಾರ್ಯಕರ್ತರಿಗೆ ಚಹ, ತಿಂಡಿ ಸೇರಿ ಸಣ್ಣ ಪುಟ್ಟ ಖರ್ಚು ಮಾಡಿರಬಹುದು ಎಂದು ಜಗದೀಶ ಶೆಟ್ಟರ್ ಹೇಳಿದರು.

ಪೆನ್ ಡ್ರೈವ್ ಪ್ರಕರಣ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, ಜನಪ್ರತಿನಿಧಿಗಳು ಸಾರ್ವಜನಿಕ ಬದುಕಿಗೆ ಬಂದಾಗ ಈ ರೀತಿ ವ್ಯವಸ್ಥೆಗೆ ಆಸ್ಪದ ಕೊಡಬಾರದು. ಆ ಘಟನೆ ಆದ ಮೇಲೆ ರಾಜ್ಯ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ಈಗ ಡಿ ಕೆ ಶಿವಕುಮಾರ ಹೆಸರು ಬಂದಿದೆ. ಹಿಂದೆಯೂ ಅನೇಕ ಬಾರಿ ಅವರ ಹೆಸರು ಕೇಳಿ ಬಂದಿತ್ತು. ಇನ್ನು ವಕೀಲ ದೇವರಾಜೇಗೌಡ ಹೇಳಿಕೆ ನೀಡಿದ ಮೇಲೆ, ಡಿಕೆಶಿ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಸತ್ಯವಾಯಿತು. ಆದರೂ, ಅದನ್ನು ಅಲ್ಲಗಳೆಯಲು ಡಿಕೆಶಿ ಮುಂದಾದರು ಎಂದು ಕಿಡಿಕಾರಿದರು.

ಯಾರೂ ಕೂಡ ಒಬ್ಬರ ಚಾರಿತ್ರ್ಯ ಹರಣ ಮಾಡಲು ಹೋಗಬಾರದು. ರಾಜಕೀಯವಾಗಿ ಯಾರನ್ನೋ ಮುಗಿಸುವ ಕಾರಣದಿಂದ ಅವರ ದೋಷಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೇ ಪಕ್ಷದಲ್ಲೂ ಈ ರೀತಿ ಬ್ಲಾಕ್ ಮೇಲ್ ಮಾಡುವುದಕ್ಕೆ ಆಸ್ಪದ ಕೊಡಬಾರದು.

ಇನ್ನು ಪೆನ್ ಡ್ರೈವ್ ಪ್ರಕರಣದಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂಬ ಬಗ್ಗೆ ನ್ಯಾಯಯುತವಾಗಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅವರು ವಯಕ್ತಿವಾಗಿ ಹೋರಾಟ ಮಾಡಲಿ‌. ಅದನ್ನು ಬಿಟ್ಟು ಈ ವಿಚಾರವನ್ನು ಸಾರ್ವಜನಿಕವಾಗಿ ರಾಜಕೀಯಗೊಳಿಸುವುದು ಒಂದು ರೀತಿ ವೈಯಕ್ತಿಕವಾಗಿ ಚಾರಿತ್ರ್ಯವಧೆ ಮಾಡುವ ಕೆಲಸ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.

ಇದನ್ನೂಓದಿ:ರೇವಣ್ಣರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಎಸ್ಐಟಿ, ಇಂದು ಪೊಲೀಸ್​ ಕಸ್ಟಡಿ ಅಂತ್ಯ - Woman Kidnap Case

Last Updated :May 8, 2024, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.