ETV Bharat / state

ನೂತನ ಡಯಾಲಿಸಿಸ್ ಸೇವೆಗೆ ಸಿಎಂ ಚಾಲನೆ: 800 ಏಕಬಳಕೆ ಡಯಾಲೈಸರ್ ಯಂತ್ರಗಳ ಅಳವಡಿಕೆ

author img

By ETV Bharat Karnataka Team

Published : Jan 28, 2024, 10:58 AM IST

cm siddaramaiah and health minister
ರೋಗಿಯನ್ನು ವಿಚಾರಿಸುತ್ತಿರುವ ಸಿಎಂ, ಆರೋಗ್ಯ ಸಚಿವರು

ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಉಚಿತ, ಉತ್ತಮ ಡಯಾಲಿಸಿಸ್​​​ ಆರೋಗ್ಯ ಸೇವೆ ಒದಗಿಸುವ ಹೊಸ ಡಯಾಲಿಸಿಸ್​​​ ಸೇವೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಶನಿವಾರ ಚಾಲನೆ ಸಿಕ್ಕಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಬದ್ಧ. ಖಾಸಗಿ ವಲಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಹೊರೆಯಾಗಿತ್ತು. ಹೀಗಾಗಿ ಉಚಿತ ಡಯಾಲಿಸಿಸ್ ಸೇವೆಯನ್ನು ಸರ್ಕಾರದಿಂದ ಒದಗಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಸೇವೆ ಒದಗಿಸಬೇಕು. ಈ ನಿಟ್ಟಿನಲ್ಲಿ ಡಯಾಲಿಸಿಸ್ ಆರೋಗ್ಯ ಸೇವೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದರು.

ಡಯಾಲೈಸರ್​ಗಳಿಂದ ಸೋಂಕು ಕಡಿಮೆ ಮಾಡಬಹುದು. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನುದಾನ ಒದಗಿಸಿಕೊಟ್ಟಿವೆ. ರಾಜ್ಯ ಸರ್ಕಾರ ಶೇ.60ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ.40ರಷ್ಟು ಅನುದಾನ ನೀಡಲಿದೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದು ಇದೆ. ಹೆಚ್ಚು ಅನುದಾನ ಒದಗಿಸುವುದು ರಾಜ್ಯ ಸರ್ಕಾರ. ಸಣ್ಣ ವಯಸ್ಸಿನವರಿಗೂ ಕಿಡ್ನಿ ಸಮಸ್ಯೆ ಬರುತ್ತಿದೆ. ಅದಕ್ಕಾಗಿ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಡಯಾಲಿಸಿಸ್ ಮಾಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದೊರಕಬೇಕು ಎಂದರು.

ಕೆ.ಸಿ.ಜನರಲ್​ ಆಸ್ಪತ್ರೆ ಮೇಲ್ದರ್ಜೆಗೆ: ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ, 150 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಆಸ್ಪತ್ರೆ ತುಂಬ ಹಳೆಯದಾಗಿದ್ದು ಇಲ್ಲಿಗೆ ಸಾಕಷ್ಟು ರೋಗಿಗಳು ಬರುತ್ತಾರೆ. ಈ ಬಗ್ಗೆ ದಿನೇಶ್ ಗುಂಡೂರಾವ್ ಕ್ಯಾಬಿನೆಟ್​ಗೆ ಪ್ರಸ್ತಾವನೆ ತರುವುದಾಗಿ ಹೇಳಿದ್ದಾರೆ ಎಂದರು.

cm siddaramaiah and health minister in kc genaral hospital
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರೋಗಿಯ ಆರೋಗ್ಯ ವಿಚಾರಿಸುತ್ತಿರುವ ಸಿಎಂ, ಆರೋಗ್ಯ ಸಚಿವರು

800 ಹೊಸ ಏಕಬಳಕೆಯ ಡಯಾಲೈಸರ್ ಸೇವೆ: ರಾಜ್ಯದಲ್ಲಿದ್ದ 171 ಡಯಾಲಿಸಿಸ್​ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗಿದ್ದು, 800 ಹೊಸ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್​ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದಿನಿಂದ 475 ಏಕಬಳಕೆಯ ಡಯಾಲೈಸರ್​ಗಳು ಕಾರ್ಯಾರಂಭಿಸಿವೆ. ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ 20 ನೂತನ ಏಕಬಳಕೆಯ ಡಯಾಲೈಸರ್​ ಯಂತ್ರಗಳನ್ನು ಅಳವಡಿಸಲಾಗಿದೆ.

ಪ್ರತಿಯೊಂದು ಡಯಾಲಿಸಿಸ್​ ಸೈಕಲ್​ಗೆ 1,573 ರೂ.ಗಳು ವೆಚ್ಚವಾಗಲಿದ್ದು, ಸರ್ಕಾರವೇ ವೆಚ್ಚವನ್ನು ಭರಿಸಿ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಿದೆ. 800 ಡಯಾಲಿಸಿಸ್ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್​ ಸೇವೆಗಳನ್ನು ಒದಗಿಸಲು ಸಾಮರ್ಥ್ಯ ಕಲ್ಪಿಸಲಾಗಿದ್ದು, ಸೋಂಕು ರಹಿತ ಡಯಾಲಿಸಿಸ್​​ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಮಾತನಾಡಿ​, ಈ ಹಿಂದೆ ಇದ್ಧ ಡಯಾಲಿಸಿಸ್​ ವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿತ್ತು. ಬಹುಬಳಕೆಯ ಡಯಾಲಿಸಿಸ್ ಯಂತ್ರಗಳಿಂದ ಕೆಲವೊಮ್ಮ ರೋಗಿಗಳಿಗೆ ಸೋಂಕು ತಗುಲುತ್ತಿತ್ತು. ಅಲ್ಲದೇ ಸಾಕಷ್ಟು ಯಂತ್ರಗಳು ಡಯಾಲಿಸಿಸ್ ನಡೆಸುವ ವೇಳೆ ಕೆಟ್ಟು ನಿಲ್ಲುತ್ತಿದ್ದವು. ಇದೆಲ್ಲವನ್ನು ಗಮನಿಸಿ ರಾಜ್ಯದಾದ್ಯಂತ ಹೊಸ ಡಯಾಲಿಸಿಸ್ ಯಂತ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ತೀರ್ಮಾನಿಸಿದ್ದೆವು. ನಾವು ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇಂದು ಫಲ ನೀಡುತ್ತಿದೆ. ಸೋಂಕು ರಹಿತ ಡಯಾಲಿಸಿಸ್​ ಆರೋಗ್ಯ ಸೇವೆ ಇನ್ನು ಮುಂದೆ ರಾಜ್ಯದ ಜನಸಾಮಾನ್ಯರಿಗೆ ದೊರಯಲಿದೆ ಎಂದರು.

ವಿಭಾಗವಾರು ಟೆಂಡರ್​​​ ಮೂಲಕ ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗಗಳಲ್ಲಿ ನೂತನ ಡಯಾಲೈಸರ್​​ ಯಂತ್ರಗಳು ಅಳವಡಿಕೆಯಾಗಿವೆ. ಕಲಬುರಗಿ ವಿಭಾಗದಲ್ಲಿ ಮಾತ್ರ 127 ಹೊಸ ಯಂತ್ರಗಳ ಅಳವಡಿಕೆ ಕಾರ್ಯ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದುಬಾರಿ. ಹೀಗಾಗಿ ಸರ್ಕಾರ ಈ ಸೇವೆಯನ್ನು ಉಚಿತವಾಗಿ ನೀಡುವತ್ತ ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಯೋಜನೆ ಜಾರಿಗೆ ತಂದಿದ್ದರು. ಇದೀಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಮತ್ತೆ ಉಚಿತ ಡಯಾಲಿಸಿಸ್ ಸೇವೆಯನ್ನು ಸದೃಢಗೊಳಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಂಡ್ಯ ಟಿಕೆಟ್​ ಅಂತಿಮವಾಗಿಲ್ಲ-ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.