ETV Bharat / state

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿಲ್ಲ: ಶಾಸಕ ಸಿ.ಪುಟ್ಟರಂಗಶೆಟ್ಟಿ

author img

By ETV Bharat Karnataka Team

Published : Feb 8, 2024, 5:20 PM IST

Etv Bharಸಿದ್ದರಾಮಯ್ಯ ಮಾಂಸಹಾರ ಸೇವಿಸಿಲ್ಲ: ಶಾಸಕ ಸಿ.ಪುಟ್ಟರಂಗಶೆಟ್ಟಿ
ಸಿದ್ದರಾಮಯ್ಯ ಮಾಂಸಹಾರ ಸೇವಿಸಿಲ್ಲ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಮಾಂಸಾಹಾರ ಸೇವನೆ ಮಾಡಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಚಾಮರಾಜನಗರ: ದೆಹಲಿಯಲ್ಲಿ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿಲ್ಲ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಮ್ಮನೆ ಸುಳ್ಳು ಹಬ್ಬಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವ ವೆಂಕಟೇಶ್ ಅವರೆಲ್ಲಾ ಊಟ ಮಾಡದೇ ಹಾಗೆ ಹೊರಟುಬಿಟ್ಟರು. ನಾನು, ಸಚಿವ ಮಹಾದೇವಪ್ಪ ಊಟ ಮಾಡಿದೆವು. ಒಂದು ನಿಮಿಷ ಕುಳಿತುಕೊಳ್ಳಿ ಎಂದು ಕೂರಿಸಿ ಎಲ್ಲರೊಟ್ಟಿಗೆ ಫೋಟೋ ತೆಗೆಯಲಾಗಿದೆ ಅಷ್ಟೇ, ಅವರು ಊಟ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆಗೆ ಪ್ರಬಲ ಅಭ್ಯರ್ಥಿ: ಮುಂಬರುವ ಲೋಕಸಭಾ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ ಪರ ಒಲವಿದ್ದರೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ದಲಿತ ಮತಗಳನ್ನು ಸೆಳೆಯುವ ನಾಯಕ ಅಭ್ಯರ್ಥಿ ಆಗಲಿದ್ದಾರೆ. ಈ ಬಗ್ಗೆ ವರಿಷ್ಠರು ಸಭೆಗಳನ್ನು ನಡೆಸಿದ್ದಾರೆ ಎಂದರು.

ಕರ್ನಾಟಕದಲ್ಲಿ ನರೇಂದ್ರ ಮೋದಿ ಅಲೆ ಇಲ್ಲಾ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ ಅಂಥಾ ಜನ ಅವರಿಗೆ ಮತ ಹಾಕುತ್ತಾರೆ..? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಏನು ಮಾಡಲಿಲ್ಲ, ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣವನ್ನು ಕೊಡುತ್ತಿಲ್ಲ. ಹೀಗಾದಾಗ ಕರ್ನಾಟಕದ ಜನ ಮತ ಯಾಕೆ ಹಾಕುತ್ತಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಪ್ರಶ್ನಿಸಿದರು.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಳಿದಾಗ ಅಕ್ಕಿ ಇಲ್ಲಾ ಎಂದರು. ಈಗ‌ 29 ರೂ. ಗೆ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದಾರೆ. ವಾಮಮಾರ್ಗದ ರಾಜಕಾರಣ ಮಾಡುತ್ತಿದ್ದಾರೆ, ಸಂಸತ್ತಿನಲ್ಲಿ ಕಾಂಗ್ರೆಸ್ ಕುರಿತು ಹಾಗೆ-ಹೀಗೆ ಎಂದು ಮಾತನಾಡುತ್ತಾರೆ. ಅದನ್ನು ಹೇಳುವುದಕ್ಕಾ ಪ್ರಧಾನಿ ಇರುವುದು, ಯಾರು ಏನೆಂದು ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಭಾಷಣದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.