ETV Bharat / state

ಬೆಳ್ತಂಗಡಿ: ಪಟಾಕಿ ಸ್ಫೋಟ ಪ್ರಕರಣ ಸ್ಥಳಕ್ಕೆ ಡಿಐಜಿ ರವಿ.ಡಿ.ಚನ್ನಣ್ಣನವರ್ ಭೇಟಿ

author img

By ETV Bharat Karnataka Team

Published : Jan 30, 2024, 10:15 AM IST

Updated : Jan 30, 2024, 10:49 AM IST

explosion-case
ಡಿಐಜಿ ರವಿ.ಡಿ.ಚನ್ನಣ್ಣನವರ್ ಭೇಟಿ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಡಿಐಜಿ ರವಿ.ಡಿ.ಚನ್ನಣ್ಣನವರ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ(ದಕ್ಷಿಣ ಕನ್ನಡ): ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನಾ ಸ್ಥಳಕ್ಕೆ ತುರ್ತು ಮತ್ತು ಅಗ್ನಿಶಾಮಕ ದಳದ ಡಿಐಜಿ ರವಿ.ಡಿ.ಚನ್ನಣ್ಣನವರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ, ಎಫ್ಎಸ್ಎಲ್​, ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆಗಿದ್ದರು.

ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ತ್ಯಾರ್​ನಲ್ಲಿ ಸೋಲಿಡ್​ ಫೈರ್​ ವರ್ಕ್ಸ್​ ಎಂಬ ಹೆಸರಿನ ಪಟಾಕಿ ತಯಾರಿಕಾ ಘಟಕ ನಡೆಸುತ್ತಿದ್ದ ಸೈಯದ್​ ಬಶೀರ್​ ಎಂಬವರ ಗೋಡೌನ್​ ಪಕ್ಕದ ಮತ್ತೊಂದು ಶೆಡ್​ನಲ್ಲಿ ಜ.28ರಂದು ಸಂಜೆ ಸ್ಫೋಟ ಸಂಭವಿಸಿತ್ತು. ಕೇರಳದ ಸ್ವಾಮಿ ಯಾನೆ ಕುನ್ನಿ ನಾರಾಯಣ(55), ಕೇರಳದ ವರ್ಗಿಸ್(68), ಹಾಸನದ ಚೇತನ್(24) ಸಾವನ್ನಪ್ಪಿದ್ದರು.‌

ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು​​ ತೆಗೆದುಕೊಳ್ಳದ ಕಾರಣಕ್ಕೆ ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​ಪಿ ರಿಷ್ಯಂತ್​​ ತಿಳಿಸಿದ್ದಾರೆ. ಸೋಮವಾರ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಅವರು, "ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಉತ್ಸವಗಳಿಗೆ ಮಾಲಕ ಬಶೀರ್​​ ಅವರಿಂದ ಪಟಾಕಿಗಳನ್ನು ಖರೀದಿಸುತ್ತಿದ್ದರು. ಸದ್ಯ ಮಾಲಿಕರಿಗೆ ಮೈಸೂರಿನಿಂದ ಆರ್ಡರ್​ ಬಂದಿತ್ತು. ಇದಕ್ಕಾಗಿ ದೊಡ್ಡ ಪ್ರಮಾಣದ ಪಟಾಕಿ ತಯಾರಿಸುತ್ತಿದ್ದರು. ಒಂದು ಸ್ಥಳದಲ್ಲಿ ಪಟಾಕಿ ತಯಾರಿಸಿ, ಮತ್ತೊಂದು ಸ್ಥಳದಲ್ಲಿ ಶೇಖರಣೆ ಮಾಡುತ್ತಿದ್ದರು. ಕಡಿಮೆ ತೀವ್ರತೆಯ ಸುಡುಮದ್ದುಗಳನ್ನು ಒಂದೇ ಜಾಗದಲ್ಲಿಟ್ಟ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಬಶೀರ್​ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದೇವೆ. ಸಾವನ್ನಪ್ಪಿರುವ ಮೂವರ ಕುಟುಂಬದವರಿಗೂ ಮಾಹಿತಿ ನೀಡಿದ್ದೇವೆ. ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ಮಾಡುತ್ತೇವೆ. ಸ್ಥಳೀಯರ ದೂರು ಪಡೆದುಕೊಂಡು ತನಿಖೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಮದ್ಯಪಾನಕ್ಕೆ ಹಣ ನೀಡದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

Last Updated :Jan 30, 2024, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.