ETV Bharat / state

ಕೆಫೆ ಸ್ಫೋಟ: ಕಲಬುರಗಿ, ಥಾಣೆ ಜನರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿದ್ದ ಉಗ್ರರು - Cafe Blast

author img

By ETV Bharat Karnataka Team

Published : Apr 13, 2024, 11:39 AM IST

Updated : Apr 13, 2024, 12:25 PM IST

cafe blast
ಕೆಫೆ ಸ್ಫೋಟ: ಕಲಬುರಗಿ, ಥಾಣೆ ಜನರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿದ್ದ ಶಂಕಿತರು

ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನಕಲಿ ಆಧಾರ್ ಕಾರ್ಡ್ ಬಳಸಿ ರೂಮ್ ಪಡೆದಿರುವುದು ಗೊತ್ತಾಗಿದೆ.

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿತರಾಗಿರುವ ಇಬ್ಬರು ಉಗ್ರರು ನಕಲಿ ಆಧಾರ್ ಕಾರ್ಡ್​​ನಲ್ಲಿ ಕೆಲವರ ಹೆಸರು ಬಳಸಿಕೊಂಡು ಪಶ್ಚಿಮ ಬಂಗಾಳದ ರಾಜಧಾನಿಯ ಕೋಲ್ಕತ್ತಾದಲ್ಲಿನ ಹೋಟೆಲ್​ವೊಂದರಲ್ಲಿ ರೂಮ್ ಪಡೆದುಕೊಂಡಿದ್ದರು ಎಂಬ ವಿಚಾರ ಬಯಲಾಗಿದೆ.

ಬಂಧನಕ್ಕೊಳಗಾಗಿರುವ ಉಗ್ರರಾದ ಅಬ್ದುಲ್‌ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ತಮ್ಮ ಆಧಾರ್ ಕಾರ್ಡ್​ಗಳನ್ನು ಕಲಬುರಗಿ ಹಾಗೂ ಥಾಣೆ ಮೂಲದ ಯುವಕರಿಬ್ಬರ ಹೆಸರಿನಲ್ಲಿ ಮಾಡಿಸಿಕೊಂಡಿದ್ದರು. ಇಬ್ಬರೂ ಸಹ ಮಹಾರಾಷ್ಟ್ರದ ಥಾಣೆ ಹಾಗೂ ಕರ್ನಾಟಕದ ಕಲಬುರಗಿ ನಗರದ ನಿವಾಸಿಗಳೆಂದು ಗುರುತಿಸಿಕೊಂಡಿದ್ದರು. ಈ ನಕಲಿ ಆಧಾರ್ ಕಾರ್ಡ್ ನೀಡಿ ಹೋಟೆಲ್​​ನಲ್ಲಿ‌ ರೂಮ್ ಪಡೆದುಕೊಂಡಿದ್ದರು ಎಂದು ಎನ್​ಐಎ ಮೂಲಗಳು ತಿಳಿಸಿವೆ. ಸದ್ಯ ಈ ದಾಖಲಾತಿಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಉಗ್ರರ ಬಂಧನ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಿಂದ ಮೂರು ದಿನಗಳ ಟ್ರಾನ್ಸಿಟ್ ವಾರಂಟ್ ಪಡೆಯಲಾಗಿದೆ. ಮೂರು ದಿನಗಳವರೆಗೆ ರಿಮಾಂಡ್​​ಗೆ ಪಡೆಯಲು ಕೋರ್ಟ್​​​ಗೆ ನೀಡಿದ ಸಾಕ್ಷಿಗಳೇನು ಅಂತ ನೋಡುವುದಾದರೆ, ಬೆಂಗಳೂರು ರಾಮೇಶ್ವರಂ ಬಾಂಬ್ ಸ್ಫೋಟದ ರೂವಾರಿಗಳು ಇವರೇ ಎಂಬುದಕ್ಕೆ ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿವೆ. ವಾಸ್ತವ್ಯ ಹೂಡಿದ್ದ ಹೋಟೆಲ್​​ನ ರೂಮ್​ವೊಂದರಲ್ಲಿ ಬಂಧಿತರ ಬಳಿ ಇದ್ದ ಎಲೆಕ್ಟ್ರಿಕ್ ಡಿವೈಸ್​​ಗಳು ಪತ್ತೆಯಾಗಿವೆ. ಕೆಫೆ ಬಾಂಬ್ ಸ್ಫೋಟಕ್ಕೆ ಒಂದು ಗಂಟೆಯ ಅವಧಿ ಫಿಕ್ಸ್ ಮಾಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: ಕೋಲ್ಕತ್ತಾದ ಲಾಡ್ಜ್‌ನಲ್ಲಿ ಗುರುತು ಬದಲಿಸಿಕೊಂಡು ಅಡಗಿದ್ದ ಉಗ್ರರು - Cafe Blast Case

ಅಬ್ದುಲ್ ಮತೀನ್ ತಾಹ ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಭಯೋತ್ಪಾದಕ ಚಟುವಟಿಕೆ ಸಂಬಂಧ ಬೆಂಗಳೂರಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಆತ ಇದ್ದ ಮನೆಯೊಂದರಲ್ಲಿ ಸಂಚು ಪ್ರಕರಣ ಸಂಬಂಧ ದಾಳಿ ನಡೆಸಿದಾಗ ಸ್ಫೋಟಕ ವಸ್ತುಗಳು ಸಿಕ್ಕಿದ್ದವು. ಈ ಪ್ರಕರಣದಲ್ಲಿ ಅಬ್ದುಲ್ ಮತಿನ್ ತಾಹ A12 ಹಾಗೂ ಮುಸಾವಿರ್ A17 ಆರೋಪಿಗಳಾಗಿದ್ದರು.

ಆರೋಪಿಗಳು ಅಂದಿನಿಂದ ತಲೆಮರೆಸಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದರು. ಅಬ್ದುಲ್ ಮತಿನ್ ತಾಹಾ ಸೂಚನೆ ಮೇರೆಗೆ ಮುಸಾವಿರ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ. ಬಾಂಬ್ ಸ್ಫೋಟದಿಂದ 9 ಜನರಿಗೆ ಗಾಯವಾಗಿತ್ತು. ಉಗ್ರರಿಗೆ ವಿದೇಶಗಳಿಂದ ವಿದ್ವಂಸಕ ಕೃತ್ಯ ನಡೆಸಲು ಅಕ್ರಮ ಹಣ ಬಂದಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಇವರನ್ನು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಬೇಕಿದೆ ಎಂದು ಕೋಲ್ಕತ್ತಾದ ಎನ್​ಐಎ ವಿಶೇಷ ಕೋರ್ಟ್​​ಗೆ ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: ಶಂಕಿತ ಉಗ್ರರು ವಿಮಾನದ ಮೂಲಕ ಬೆಂಗಳೂರಿಗೆ - Cafe Bomb Blast Case

Last Updated :Apr 13, 2024, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.