ETV Bharat / state

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಎನ್​ಐಎಗೆ ವಹಿಸಿ: ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹ

author img

By ETV Bharat Karnataka Team

Published : Mar 2, 2024, 10:01 PM IST

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಎನ್​ಐಎಗೆ ವಹಿಸಲು ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಎನ್​ಐಎಗೆ ವಹಿಸಲು ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣವನ್ನು ಎನ್​ಐಎಗೆ ವಹಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹಿಂದೆ‌ ದೊಡ್ಡ ಕಾರ್ಯತಂತ್ರ ಅಡಗಿದೆ. ರಾಜ್ಯ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದರೆ, ಭಯೋತ್ಪಾದಕರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರೂ ಅದರ ಗಂಭೀರತೆ ಸರ್ಕಾರಕ್ಕೆ ಇಲ್ಲ. ಅದು ಲಘು ಬಾಂಬ್ ಅಂತ ಹೇಳುತ್ತಾರೆ. ಗಂಭೀರವಾಗಿ ಪರಿಗಣಿಸಲು ಸಾವು ನೋವು ಆಗಬೇಕೇ.‌ ಇದರ ಹಿಂದೆ ದೊಡ್ಡ ಸ್ಲೀಪರ್ ಸೆಲ್ ಇದೆ. ಇದೆಲ್ಲದರ ಹಿಂದೆ ದೊಡ್ಡ ಕಾರ್ಯತಂತ್ರ ಅಡಗಿದೆ. ಈ ಪ್ರಕರಣವನ್ನು ತಕ್ಷಣ ಎನ್ಐಎಗೆ ವಹಿಸಬೇಕು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಕ್ ಇರುವ ಬಗ್ಗೆ ಮಾಹಿತಿ ದೊರೆಯುತ್ತದೆ.‌ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಅವರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ 50 ಕೋಟಿ ಆಫರ್ ಕೊಟ್ಟಿರುವ ಸಿಎಂ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಯಾರು ಆಫರ್ ಮಾಡಿದ್ದರು. ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಕೊಡಬೇಕು. ಹಿಟ್ ಅಂಡ್​ ರನ್ ಮಾಡುವುದು ಬೇಡ ಎಂದು ಚಾಟಿ ಬೀಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಭಯೋತ್ಪಾದಕರ ಕೃತ್ಯ ಜತೆಗೆ ಗುಪ್ತಚರ ಇಲಾಖೆಯ ವೈಫಲ್ಯ: ಈಶ್ವರಪ್ಪ

ಮೈಸೂರು: ರಾಮೇಶ್ವರಂ ಬಾಂಬ್ ಸ್ಫೋಟ, ಇದು ಭಯೋತ್ಪಾದಕರ ಕೃತ್ಯ, ಜತೆಗೆ ಗುಪ್ತಚರ ಇಲಾಖೆಯ ವೈಫಲ್ಯವಾಗಿದ್ದು, ಇದನ್ನು ಸಿಎಂ ಮೊದಲು ಒಪ್ಪಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ ಎಸ್.ಈಶ್ವರಪ್ಪ ಹೇಳಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಆಫರ್ ಕೊಟ್ಟವರನ್ನ ಜೈಲಿಗೆ ಕಳುಹಿಸಲಿ, ಇಲ್ಲವೇ ಕ್ಷಮೆ ಕೇಳಲಿ: ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ಆಫರ್ ನೀಡಿದ್ದಾರೆ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿ, ಮೊದಲು 50 ಕೋಟಿ ಆಫರ್ ಕೊಟ್ಟಿದ್ದು ಯಾರು ಎಂಬುದನ್ನ ಹೇಳಲಿ. ಆಫರ್ ಕೊಟ್ಟವರನ್ನು ಜೈಲಿಗೆ ಕಳುಹಿಸಲಿ. ಇಲ್ಲದಿದ್ದರೆ ನಾನು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ. ಸಿಎಂ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ಮಾತು ಬಂದ ಮೇಲೆ ಅದಕ್ಕೆ ಸಾಕ್ಷಿ ಕೊಡಬೇಕು. ಜನರ ಮುಂದೆ ನೇರವಾಗಿ ಹೇಳಿ ನಿಮ್ಮ ಶಾಸಕರಿಗೆ ಆಫರ್ ಕೊಟ್ಟಿದ್ದು ಯಾರು ಎಂದು. ಎಸ್.ಟಿ ಸೋಮಶೇಖರ್​ ವೋಟ್​​ ಪಡೆಯಲು ಎಷ್ಟು ಕೋಟಿ ಕೊಟ್ಟಿದ್ದೀರಿ, ಹಾಗೆಯೇ ಶಿವರಾಂ ಹೆಬ್ಬಾರ್ ವೋಟ್​ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ಟಿದ್ದೀರಿ ಅನ್ನೋದನ್ನು ಮೊದಲು ಹೇಳಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಬಾಂಬ್ ಇಟ್ಟವನನ್ನ ಪತ್ತೆ ಹಚ್ಚುವುದೇ ಸಿಸಿಬಿಗೆ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.