ETV Bharat / state

ಅಮಿತ್ ಶಾ ರಾಜ್ಯ ಪ್ರವಾಸ ಯಶಸ್ವಿಯಾಗಿದೆ: ಬಿ ವೈ ವಿಜಯೇಂದ್ರ

author img

By ETV Bharat Karnataka Team

Published : Feb 11, 2024, 8:09 PM IST

Updated : Feb 11, 2024, 8:28 PM IST

bjp-state-president-b-y-vijayendra-reaction-on-amit-shah-state-tour
ಅಮಿತ್ ಶಾ ರಾಜ್ಯ ಪ್ರವಾಸ ಯಶಸ್ವಿಯಾಗಿದೆ: ಬಿ ವೈ ವಿಜಯೇಂದ್ರ

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಮೈಸೂರು ಕ್ಲಸ್ಟರ್ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.

ಬಿ ವೈ ವಿಜಯೇಂದ್ರ

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೈಸೂರು ಪ್ರವಾಸ ಯಶಸ್ವಿಯಾಗಿದೆ. ಸುತ್ತೂರು ಮಠದ ಜಾತ್ರಾ ಮಹೋತ್ಸವ, ಚಾಮುಂಡೇಶ್ವರಿ ದರ್ಶನ ಹಾಗೂ ಕೋರ್ ಕಮಿಟಿಯ ಸಭೆ ಜೊತೆಗೆ ಮೈಸೂರು ಕ್ಲಸ್ಟರ್ ಸಭೆಯಲ್ಲಿ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಚರ್ಚೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕೋರ್ ಕಮಿಟಿ ಸಭೆ ಹಾಗೂ ಮೈಸೂರು ಕ್ಲಸ್ಟರ್ ಸಭೆ ಮುಗಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಎನ್​ಡಿಎ ಕೂಟ ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ಆಗಿದೆ. ಪಕ್ಷ ಕಳೆದ ಬಾರಿ ಪಡೆದ ವೋಟಿಂಗ್​ಗಿಂತ ಈ ಬಾರಿ ವೋಟಿಂಗ್​ ಪ್ರಮಾಣ ಹೆಚ್ಚಾಗಬೇಕು. ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ಕೆಲಸ ಮಾಡಬೇಕು ಎಂದು ಅಮಿತ್​ ಶಾ ಹೇಳಿದ್ದಾರೆ ಎಂದರು.

ಸೀಟು ಹಂಚಿಕೆ ದೆಹಲಿಯಲ್ಲಿ ಫೈನಲ್ ಅಗುತ್ತದೆ: ಜೆಡಿಎಸ್ ಹಾಗೂ ಬಿಜೆಪಿ ನಡುವೆ ರಾಜ್ಯದ 28 ಕ್ಷೇತ್ರಗಳ ಸೀಟು ಹಂಚಿಕೆಯನ್ನು ದೆಹಲಿಯಲ್ಲಿ ಪಕ್ಷದ ಪ್ರಮುಖರು ಕೂತು ಫೈನಲ್ ಮಾಡುತ್ತಾರೆ. ಯಾರೇ ಅಭ್ಯರ್ಥಿ ಅದರೂ ಒಟ್ಟಾಗಿ ದುಡಿಯಬೇಕು ಎಂಬ ಮಾತನ್ನು ಅಮಿತ್​ ಶಾ ಹೇಳಿದ್ದಾರೆ. ಅವರ ಸಲಹೆಯನ್ನು ಪಡೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದೇ ನಮ್ಮ ಗುರಿ ಎಂದು ತಿಳಿಸಿದರು.

ಕಾಂಗ್ರೆಸ್​ನ ನನ್ನ ಹಕ್ಕು ನನ್ನ ತೆರಿಗೆ ಪ್ರತಿಭಟನೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುವ ವಿಚಾರ ಅಲ್ಲ. ಆ ಹೋರಾಟವನ್ನು ನಾವು ರಾಜ್ಯ ಮಟ್ಟದಲ್ಲೇ ಎದುರಿಸಿದ್ದೇವೆ. ಆ ವಿಚಾರಕ್ಕೆ ಅಷ್ಟು ಪ್ರಾಮುಖ್ಯತೆ ಕೊಡಬೇಕಾಗಿಲ್ಲ. ಕೋರ್ ಕಮಿಟಿಯಲ್ಲಿ ಅದು ಚರ್ಚೆಗೆ ಬಂದಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ನಾಟಕ ಮಾಡಿದ್ದಾರೆ. ನಾಳಿನ ಅಧಿವೇಶನದಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.

ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಇಂದು ನಡೆದ ಕೋರ್ ಕಮಿಟಿಯ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಅಮಿತ್ ಶಾ ಸಮ್ಮುಖದಲ್ಲಿ ಅಜೆಂಡಾ ಮತ್ತು ಟಾರ್ಗೆಟ್ ಸೆಟ್ ಆಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟುವಂತೆ ಮಾಡುವುದು ಅಜೆಂಡಾ. 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲ್ಲಬೇಕು ಎನ್ನುವುದು ಟಾರ್ಗೆಟ್. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ ಎಂದರು.

ಇದನ್ನೂ ಓದಿ: ಮೈಸೂರು: ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ

Last Updated :Feb 11, 2024, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.