ETV Bharat / state

ಬಿಜೆಪಿ ಕಾರ್ಯಕಾರಿಣಿ: ಶೆಟ್ಟರ್ ಹಾಜರು, ಯತ್ನಾಳ್ ಚಕ್ಕರ್, ಸೋಮಣ್ಣ ಮತ್ತೆ ಅಸಮಾಧಾನ

author img

By ETV Bharat Karnataka Team

Published : Jan 27, 2024, 10:57 PM IST

BJP executive meeting held in Bangalore ​
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.

ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ ಸಿಗದೇ ಕುಪಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್, ರಾಜ್ಯಾಧ್ಯಕ್ಷ ಸ್ಥಾನ ವಂಚಿತ ನಾಯಕ ವಿ.ಸೋಮಣ್ಣ ಇಂದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದ ದೂರ ಉಳಿಯುವ ಮೂಲಕ ರಾಜ್ಯ ನಾಯಕರ ಮೇಲಿನ ಮುನಿಸನ್ನು ಮತ್ತೆ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ರೆಬಲ್ ನಾಯಕರು ಸಭೆಗೆ ಬಾರದೇ ಅಸಮಾಧಾನ ಹೊರಹಾಕಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಗೈರು:ವಿಜಯೇಂದ್ರ ನಾಯಕತ್ವ ನಂತರ ಉತ್ತರ ಕರ್ನಾಟಕಕ್ಕೆ ಉನ್ನತ ಹುದ್ದೆ ನೀಡುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿನ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಲಿಲ್ಲ. ಯಡಿಯೂರಪ್ಪ ಕುಟಂಬದ ವಿರುದ್ಧ ಬುಸುಗುಟ್ಟುತ್ತಲೇ ಬರುತ್ತಿರುವ ಯತ್ನಾಳ್ ಅವರು ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ನಂತರ ಮತ್ತಷ್ಟು ಕುಪಿತರಾಗಿದ್ದು, ನಿರೀಕ್ಷೆಯಂತೆ ಸಭೆಗೆ ಗೈರಾಗಿ ತಮ್ಮ ಮುನಿಸನ್ನು ಬಹಿರಂಗಪಡಿಸಿದ್ದಾರೆ.

ಸೋಮಣ್ಣ ಮುನಿಸು: ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದ ಹಿರಿಯ ನಾಯಕ ಸೋಮಣ್ಣ ಅವಕಾಶ ಸಿಗದೆ ಮುನಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿ ಬಂದು ಎಲ್ಲವೂ ಸರಿಯಾಗಿದೆ ಎಂದು ಸಂತಸದಿಂದಲೇ ಹೇಳಿದ್ದರು. ಅಶೋಕ್ ಜೊತೆ ಓಡಾಟ ನಡೆಸಿದ್ದರು. ಆದರೂ ಇಂದಿನ ಸಭೆಯಿಂದ ದೂರ ಉಳಿದು ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಎಸ್ ಟಿ ಸೋಮಶೇಖರ್: ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆರು ತಿಂಗಳಿನಿಂದಲೂ ಸಿಎಂ,‌ ಡಿಸಿಎಂ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಇಂದಿನ ಸಭೆಗೆ ಗೈರಾಗಿ, ನನಗೆ ಆಹ್ವಾನ ಇರಲಿಲ್ಲ ಹಾಗಾಗಿ ಹೋಗಿಲ್ಲ ಎಂದಿದ್ದಾರೆ. ಆದರೆ ಅವರಿಗೂ ಆಹ್ವಾನ ನೀಡಲಾಗಿತ್ತು ಎಂದು ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾಗಿ ಸೋಮಶೇಖರ್ ಉದ್ದೇಶಪೂರ್ವಕ ಗೈರಾಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ಸಭೆಯಲ್ಲಿ ಕಾಣಿಸದ ಹೆಬ್ಬಾರ್: ಬಿಜೆಪಿ ತೊರೆಯಲಿದ್ದಾರೆ ಎನ್ನಲಾಗುತ್ತಿರುವ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅತೃಪ್ತರ ಗುಂಪಿನಲ್ಲಿದ್ದ ಅರವಿಂದ ಬೆಲ್ಲದ್ ಕೂಡ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರಿಗೆ ಪಕ್ಷದಲ್ಲಿ ಈಗ ಜವಾಬ್ದಾರಿ ನೀಡಲಾಗಿದೆ. ಆದರೂ ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ವೇದಿಕೆ ಮೇಲೆ ಶೆಟ್ಟರ್:ಇನ್ನು ಎರಡು ದಿನದ ಹಿಂದಷ್ಟೇ ಬಿಜೆಪಿಗೆ ಮರಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದಿನ ಕಾರ್ಯಕಾರಿಣಿ ಸಭೆಗೆ ಆಗಮಿಸಿದರು. ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರಿಲ್ಲ, ಕೋರ್ ಕಮಿಟಿ ಸದಸ್ಯರಾಗಿಯೂ ಇಲ್ಲ. ಈಗಷ್ಟೇ ಪಕ್ಷಕ್ಕೆ ಮರಳಿದ್ದು, ಅವರಿಗೆ ಆಹ್ವಾನ ಇರಲಿದೆಯಾ ಇಲ್ಲವಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ವೇದಿಕೆ ಮೇಲೆ ಶೆಟ್ಟರ್​ಗೆ ಅವಕಾಶ ನೀಡಲಾಯಿತು. ಬಸವರಾಜ ಬೊಮ್ಮಾಯಿಗೆ ಪಕ್ಕದ ಆಸನವನ್ನೇ ನೀಡಲಾಯಿತು. ಈ ಹಿಂದೆ ಪಕ್ಷದಲ್ಲಿ ಅವರಿಗೆ ನೀಡಲಾಗುತ್ತಿದ್ದ ಗೌರವ ಮನ್ನಣೆಯನ್ನೇ ನೀಡಲಾಯಿತು.

ಇದನ್ನೂಓದಿ:ಬಿಜೆಪಿ ಪರ ಅಲೆ ಇದ್ದು ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ: ಯಡಿಯೂರಪ್ಪ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.