ETV Bharat / state

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ - Election Commission

author img

By ETV Bharat Karnataka Team

Published : Mar 22, 2024, 5:50 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಆಕ್ರಮ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

BJP
ಬಿಜೆಪಿ

ಬೆಂಗಳೂರು : ಕಾಂಗ್ರೆಸ್​​​​ನಿಂದ ಚುನಾವಣಾ ಆಕ್ರಮ ಕುರಿತು ಶಾಸಕ ಮುನಿರತ್ನ ಆರೋಪ ಮಾಡಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್‌ ನಿಯೋಜಿಸುವಂತೆ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ನಿಯೋಗ ಕಾಂಗ್ರೆಸ್ ವಿರುದ್ಧ ದೂರು ಸಲ್ಲಿಕೆ ಮಾಡಿದೆ. ಚುನಾವಣಾ ಅಕ್ರಮ, ಅಧಿಕಾರಿಗಳ ದುರ್ಬಳಕೆ ಸೇರಿದಂತೆ ಹಲವು ವಿಷಯಗಳನ್ನು ಗಮನಕ್ಕೆ ತಂದಿದೆ. ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅದರಲ್ಲಿಯೂ ಆರ್.ಆರ್ ನಗರ ಕ್ಷೇತ್ರದಲ್ಲಿ ಪ್ಯಾರಾ ಮಿಟಿಟರಿ ಪಡೆ ನಿಯೋಜನಗೆ ಮನವಿ ಮಾಡಿದೆ.

ಚುನಾವಣಾಧಿಕಾರಿಗಳ ಭೇಟಿ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಡಾ.ಸಿ‌.ಎನ್ ಅಶ್ವಥ್ ನಾರಾಯಣ್, ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ ನೂನ್ಯತೆಗಳ ಬಗ್ಗೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮತದಾರರ ಪಟ್ಟಿಯಲ್ಲಿ ಸದಸ್ಯರ ಹೆಸರು ಕೈ ಬಿಟ್ಟಿರೋದು, ಅಡ್ರೆಸ್ ಚೇಂಜ್ ಆಗಿರೋದರ ಬಗ್ಗೆ ಗಮನಕ್ಕೆ ತಂದಿದ್ದೇವೆ. ಅಪಾರ್ಟ್ಮೆಂಟ್ ನಲ್ಲಿ 1000 ಮತದಾರರು ಇದ್ದರೆ ಅಲ್ಲಿ ಪೊಲಿಂಗ್ ಸೆಂಟರ್ ಆಗಬೇಕು ಜೊತೆಗೆ ಮತದಾನ ಮಾಡಲು ಅನುಕೂಲಕ್ಕೆ ಮನವಿ ಮಾಡಿದ್ದೇವೆ. ಆನ್​​​​ಲೈನ್‌ನಲ್ಲಿ ಮತದಾರರ ಹೆಸರು‌ ನೋಂದಣಿ ಆಗುತ್ತಿಲ್ಲ. ಮಾರ್ಚ್ 25ರೊಳಗೆ ಯುವ ಮತದಾರರು ಹೆಸರು ನೋಂದಣಿಗೆ ಅವಕಾಶ ಇದೆ. ಅದಕ್ಕೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ ಎಂದರು.

ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಿಗಳಿಂದ ದುರ್ಬಳಕೆ ಆಗುತ್ತಿದೆ. ಹೀಗಾಗಿ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ದೇವೆ. ಯಶವಂತಪುರ ರಸ್ತೆ ತೆರವಿನ ಬಗ್ಗೆಯೂ ಗಮನಕ್ಕೆ ತಂದಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್‌ ನಿಯೋಜಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಪೂರಕವಾದ ಅರ್ಜಿ ಕೊಡಿ ನಾವು ಅದರ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ಕಳೆದ ಲೋಕಸಭಾ ಎಲೆಕ್ಷನ್ ವೇಳೆ ವೋಟ್​​ ಹಾಕೋಕೆ ಬಂದಿದ್ದವರಲ್ಲಿ ಕೆಲವರು ಬೂತ್ ಗೆ ಹೋದರೆ ಹೆಸರಿಲ್ಲ ಎಂದು ವಾಪಸ್ ಕಳುಹಿಸಿದ್ದರು. 30ಸಾವಿರಕ್ಕೂ ಹೆಚ್ಚು ಜನರ ಹೆಸರಿಲ್ಲ ಅಂತಾ ಗೊತ್ತಾಗಿತ್ತು. ಈ ಬಾರಿ ಅಂತಹ ತಪ್ಪು ಆಗಬಾರದು ಎಂದು ಎಚ್ಚರಿಕೆ ವಹಿಸಲಾಗಿತ್ತು. ಮತದಾರರ ಪರಿಷ್ಕರಣೆ, ಲಿಸ್ಟ್ ನಲ್ಲಿ ಹೆಸರು ತೆಗೆದು ಹಾಕೋದು, ಬಿಜೆಪಿ ವೋಟ್​ಗಳು ಎಲ್ಲಿ ಇದಾವೋ ಅಲ್ಲಿ ಕೆಲವೊಂದು ಪರಿಷ್ಕರಣೆ ಮಾಡುವುದರಲ್ಲಿ ಯಡವಟ್ಟಿನ ಬಗ್ಗೆ ದೂರು ನೀಡಿದ್ದೇವೆ. ಚುನಾವಣಾ ಅಧಿಕಾರಿಗಳು ಆ ರೀತಿ ಯಾವುದೂ ಆಗಿಲ್ಲ ಅಂದಿದ್ದಾರೆ. ಇನ್ನೂ 26ನೇ ತಾರೀಖು ಮತದಾರರು ತಮ್ಮ ಅರ್ಜಿ ಹಾಕಬಹುದು. ಏನೇ ಸಮಸ್ಯೆಗಳಿದ್ದರೂ 26ನೇ ತಾರೀಖು ರಿಜಿಸ್ಟ್ರೇಷನ್​​ಗೆ ಅವಕಾಶ ಇದೆ. ಅಲ್ಲದೇ ನಿಮ್ಮ ಹೆಸರು ಡಿಲೀಟ್ ಆಗಿರೋದು, ಹೆಸರು ಬದಲಾವಣೆ ಆಗಿರೋದು, ಇದರ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ. ಇನ್ನೂ ಮೂರು ದಿನಗಳ ಕಾಲವಕಾಶ ಇದ್ದು, ಸರಿಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಕಳೆದ ಒಂದು ತಿಂಗಳಿಂದ ಲಿಂಕ್ ವರ್ಕರ್ಸ್​​​​ನ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಮಾನಿಟರಿಂಗ್ ಇಂಪ್ಲಿಮೆಂಟ್ ಅಂತಾ ಮಾಡಿ ಅವರಿಗೆ ಸಂಬಳ ಕೊಟ್ಟು ಕೆಲಸಕ್ಕೆ ಹಾಕೊಂಡಿದ್ದಾರೆ. ಕಾಂಗ್ರೆಸ್​​​ಗೆ ಬೇಕಾಗೋ ರೀತಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ದೂರು ನೀಡಿದ್ದೇವೆ. ಅಲ್ಲದೇ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ಅಂತವರ ವಿರುದ್ಧ ಕೂಡ ಎಲೆಕ್ಷನ್ ಕಮಿಷನ್ ಗೆ ದೂರು ನೀಡಿದ್ದೇವೆ. ಅಲ್ಲದೇ, ಯಾವ ಯಾವ ಅಧಿಕಾರಿಗಳ ವಿರುದ್ಧ ಮತದಾರರು ದೂರು ನೀಡಿದ್ದಾರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಐದಾರು ಮತ ಕ್ಷೇತ್ರಗಳಿಂದ ಕೆಲ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಕ್ರಮ ಕೈಗೊಳ್ಳೋದಾಗಿ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಇದನ್ನೂ ಓದಿ : ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳು: ಜಾಹೀರಾತಿಗೆ ನಿರ್ಬಂಧ ಹಾಕಲು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು - Loksabha election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.